ಬೆಂಗಳೂರು: ನಗರದ ವಸತಿ ಶಾಲೆಯ 6ನೇ ತರಗತಿ ವಿದ್ಯಾರ್ಥಿ ಸಾವಿನ ಪ್ರಕರಣಕ್ಕೆ ಹೊಸ ತಿರುವು ಸಿಕ್ಕಿದ್ದು, ಪ್ರಾಥಮಿಕ ವೈದ್ಯಕೀಯ ಅಭಿಪ್ರಾಯದ ಪ್ರಕಾರ ಹೃದಯ ಸಂಬಂಧಿತ ಸಮಸ್ಯೆಯಿಂದ ವಿದ್ಯಾರ್ಥಿ ಮೃತಪಟ್ಟಿರುವ ಶಂಕೆ ವ್ಯಕ್ತವಾಗಿದೆ.
ಸಾವಿಗೆ ನಿಖರ ಕಾರಣ ತಿಳಿಯಲು ವೈದ್ಯರು ಹಿಸ್ಟೋಪಥಾಲಜಿ ವರದಿಗಾಗಿ ಕಾಯುತ್ತಿದ್ದಾರೆ ಎಂದು ತನಿಖೆಗೆ ಸಂಬಂಧಿಸಿದ ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಮೃತ ಬಾಲಕ ಗುರುಕಿರಣ್ ಆರ್ (13) ಯಲಹಂಕ ನಿವಾಸಿಯಾಗಿದ್ದು, ಕಾಡ್ಯಾರಪ್ಪನಹಳ್ಳಿಯ ಸ್ಟರ್ಲಿಂಗ್ ಇಂಗ್ಲಿಷ್ ರೆಸಿಡೆನ್ಶಿಯಲ್ ಶಾಲೆಯಲ್ಲಿ 6ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದ.
ವಿದ್ಯಾರ್ಥಿಯ ಪೋಷಕರು ಮಾತ್ರ, ಶಾಲೆಯ ದೈಹಿಕ ಶಿಕ್ಷಣ (ಪಿಟಿ) ಶಿಕ್ಷಕ ಹಲ್ಲೆ ನಡೆಸಿದ ಪರಿಣಾಮವೇ ತಮ್ಮ ಮಗ ಮೃತಪಟ್ಟಿದ್ದಾನೆ ಎಂದು ಆರೋಪಿಸಿದ್ದಾರೆ.
ಪ್ರಾಥಮಿಕ ವೈದ್ಯಕೀಯ ವರದಿ ವಿದ್ಯಾರ್ಥಿಯ ಸಾವಿಗೆ ಹೃದಯ ಸಂಬಂಧಿ ತೊಂದರೆ ಕಾರಣವಾಗಿರಬಹುದೆಂದು ಸೂಚಿಸಿದೆ. ಅಲ್ಲದೆ, ಘಟನೆಗೂ ಮುನ್ನ ವಿದ್ಯಾರ್ಥಿಗೆ ಅತಿಸಾರ (ಲೂಸ್ ಮೋಶನ್) ಸಮಸ್ಯೆಯೂ ಇದ್ದಿತ್ತು. ಬುಧವಾರ ಬೆಳಿಗ್ಗೆ ಶಾಲಾ ಮೈದಾನದಲ್ಲಿ ಓಡಿದ ಪರಿಣಾಮ ಆರೋಗ್ಯದಲ್ಲಿ ತೀವ್ರ ಏರುಪೇರಾಗಿ ದುರಂತ ಸಂಭವಿಸಿರಬಹುದು ಎಂಬ ಶಂಕೆಯನ್ನೂ ಪೊಲೀಸರು ವ್ಯಕ್ತಪಡಿಸಿದ್ದಾರೆ.
ಆದರೆ, ಮೃತ ವಿದ್ಯಾರ್ಥಿಯ ಸ್ನೇಹಿತರು ನೀಡಿದ ಮಾಹಿತಿಯ ಆಧಾರದ ಮೇಲೆ ಪೋಷಕರು ದೂರು ದಾಖಲಿಸಿದ್ದಾರೆ. ವಿಚಾರಣೆ ವೇಳೆ ಸಹಪಾಠಿಗಳು, ಸಾವಿಗೆ ಎರಡು ದಿನಗಳ ಮುನ್ನ ಪಿಟಿ ಶಿಕ್ಷಕ ನಾರಾಯಣ ಅವರು ಗುರುಕಿರಣ್ ಮೇಲೆ ಹಲ್ಲೆ ನಡೆಸಿದ್ದರು ಎಂದು ಪೊಲೀಸರಿಗೆ ತಿಳಿಸಿದ್ದಾರೆ ಎನ್ನಲಾಗಿದೆ.
ಈ ಹಿನ್ನೆಲೆಯಲ್ಲಿ, ಪ್ರಕರಣವನ್ನು ಎಲ್ಲಾ ಆಯಾಮಗಳಿಂದ ತನಿಖೆ ನಡೆಸಲಾಗುತ್ತಿದ್ದು, ಹಿಸ್ಟೋಪಥಾಲಜಿ ವರದಿ ಬಂದ ಬಳಿಕ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ. .
ಮೃತ ವಿದ್ಯಾರ್ಥಿಯ ತಂದೆ ರಾಘವೇಂದ್ರ ಆರ್ ನೀಡಿದ ದೂರಿನ ಮೇರೆಗೆ ಬಾಗಲೂರು ಪೊಲೀಸರು ಪಿಟಿ ಶಿಕ್ಷಕ ನಾರಾಯಣ, ಸ್ಟರ್ಲಿಂಗ್ ಇಂಗ್ಲಿಷ್ ರೆಸಿಡೆನ್ಶಿಯಲ್ ಶಾಲೆಯ ಮಾಲೀಕ ಹಾಗೂ ಆಡಳಿತ ಮಂಡಳಿ ಸದಸ್ಯರ ವಿರುದ್ಧ ಕೊಲೆ ಪ್ರಕರಣ ದಾಖಲಿಸಿದ್ದಾರೆ.
ಗುರುಕಿರಣ್ ಸಾವಿನ ಬಳಿಕ ಆಕ್ರೋಶಗೊಂಡ ಕುಟುಂಬಸ್ಥರು ಶಾಲೆಗೆ ನುಗ್ಗಿ ಪಿಟಿ ಶಿಕ್ಷಕ ನಾರಾಯಣ ಮೇಲೆ ಹಲ್ಲೆ ನಡೆಸಿದ್ದು, ಅವರನ್ನು ಜೀವಂತವಾಗಿ ಸುಟ್ಟುಹಾಕುವುದಾಗಿ ಬೆದರಿಕೆ ಹಾಕಿದ್ದಾರೆ ಎನ್ನಲಾಗಿದೆ.
ಕುಟುಂಬಸ್ಥರ ಆರೋಪದಂತೆ, ಶಿಕ್ಷಕ ಕಬ್ಬಿಣದ ರಾಡ್ನಿಂದ, ಕುತ್ತಿಗೆ ಸೇರಿ ದೇಹದ ವಿವಿಧ ಭಾಗಗಳಿಗೆ ಹೊಡೆದು ಬಳಿಕ ಶಾಲೆಯ ಮೈದಾನದಲ್ಲಿ ಓಡುವಂತೆ ಬಲವಂತಪಡಿಸಿದ್ದರು. ಇದರಿಂದಲೇ ವಿದ್ಯಾರ್ಥಿ ಮೃತಪಟ್ಟಿದ್ದಾನೆ ಎಂದು ಆರೋಪಿಸಲಾಗಿದೆ.