ಬೆಂಗಳೂರು: ಹರಿಹರ ವೀರಶೈವ ಲಿಂಗಾಯತ ಪಂಚಮಸಾಲಿ ಪೀಠದಿಂದ ಉಚ್ಚಾಟನೆಗೊಂಡಿರುವ ವಚನಾನಂದ ಶ್ರೀಗೆ ದಾವಣಗೆರೆ ಜಿಲ್ಲಾ ವಿಶೇಷ ಕೋರ್ಟ್ ಸೋಮವಾರ ಬಿಗ್ ರಿಲೀಫ್ ನೀಡಿದ್ದು, ಪೋಕ್ಸೋ ಪ್ರಕರಣದಲ್ಲಿ ಅವರಿಗೆ ಜಾಮೀನು ಮಂಜೂರು ಮಾಡಿದೆ.
ಅಪ್ರಾಪ್ತ ಬಾಲಕನ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದ ಮೇಲೆ ವಚನಾನಂದ ಶ್ರೀ ವಿರುದ್ಧ ಪೋಕ್ಸೋ ಪ್ರಕರಣ ದಾಖಲಿಸಲಾಗಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧನ ಭೀತಿ ಎದುರಿಸುತ್ತಿದ್ದ ಶ್ರೀಗಳು ಜಾಮೀನು ಕೋರಿ ಅರ್ಜಿ ಸಲ್ಲಿಸಿದ್ದರು.
ಶ್ರೀಗರ ಜಾಮೀನು ಅರ್ಜಿಯ ವಿಚಾರಣೆ ನಡೆಸಿದ ಜಿಲ್ಲಾ ವಿಶೇಷ ಕೋರ್ಟ್ ನ್ಯಾಯಾಧೀಶ ಶ್ರೀರಾಮ ನಾರಾಯಣ ಹೆಗಡೆ ಅವರು, ಕೆಲವು ಷರತ್ತು ವಿಧಿಸಿ ಜಾಮೀನು ಮಂಜೂರು ಮಾಡಿದ್ದಾರೆ.
ಪ್ರಕರಣ ಸಂಬಂಧ ನಿರೀಕ್ಷಣಾ ಜಾಮೀನು ರದ್ದು ಮಾಡಿ ರೆಗ್ಯುಲರ್ ಬೇಲ್ ಪಡೆಯುವಂತೆ ಜೂ.25ರಂದು ಸ್ವಾಮೀಜಿಗೆ ಹೈಕೋರ್ಟ್ ಸೂಚಿಸಿತ್ತು. ಈ ಹಿನ್ನೆಲೆಯಲ್ಲಿ ಜೂನ್ 27ರಂದು ಜಿಲ್ಲಾ ವಿಶೇಷ ಪೋಕ್ಸೋ ಕೋರ್ಟ್ಗೆ ವಚನಾನಂದ ಶ್ರೀ ಅರ್ಜಿ ಸಲ್ಲಿಸಿದ್ದರು. ಎರಡು ಕಡೆಯವರ ವಾದವನ್ನು ಈಗಾಗಲೇ ಆಲಿಸಿದ್ದ ನ್ಯಾಯಾಲಯ ಸ್ವಾಮೀಜಿಗೆ ರೆಗ್ಯುಲರ್ ಬೇಲ್ ನೀಡಿದೆ.
ಈಗಾಗಲೇ ವಚನಾನಂದ ಶ್ರೀ ವಿರುದ್ಧ 7 ಮಕ್ಕಳ ಹೇಳಿಕೆ ದಾಖಲು ಮಾಡಿಕೊಳ್ಳಲಾಗಿದ್ದು, ಮಕ್ಕಳನ್ನು ಸ್ನಾನದ ಕೋಣೆ ಹಾಗೂ ಮಲಗುವ ರೂಂಗೆ ಕರೆದು ಲೈಂಗಿಕ ಕಿರುಕುಳ ನೀಡಿರುವ ಆರೋಪ ಸ್ವಾಮೀಜಿ ಮೇಲಿದೆ. ಸಂತ್ರಸ್ತರ ಪರ ವಕೀಲ ರಮೇಶ್ ಕಲಾಲ್ ಮತ್ತು ವಚನಾನಂದಶ್ರೀ ಪರ ವಕೀಲ ಎಸ್.ವಿ.ಪಾಟೀಲ್ ವಾದ ಮಂಡನೆ ಮಾಡಿದ್ದರು.