ಬೆಂಗಳೂರು: ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ರಸ್ತೆಗಳಲ್ಲಿ ಹಾಗೆಯೇ ನಿಂತಲ್ಲೇ ನಿಂತಿರುವ ಬಿಡಾಡಿ ವಾಹನಗಳ ಟೋಯಿಂಗ್ ಗೆ ಬೆಂಗಳೂರು ಅಭಿವೃದ್ದಿ ಸಚಿವ ಕೃಷ್ಣಭೈರೇಗೌಡ ಶನಿವಾರ ಚಾಲನೆ ನೀಡಿದರು.
ಮಲ್ಲೇಶ್ವರಂ ಹಾಗೂ ಗಾಂಧಿನಗರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ರಸ್ತೆಯಲ್ಲಿ ನಿಂತಲ್ಲೇ ನಿಂತಿರುವ ಅನಾಥ ವಾಹನಗಳ ಎತ್ತಂಗಡಿಗೆ ಸಚಿವ ಕೃಷ್ಣಭೈರೇಗೌಡ ಚಾಲನೆ ನೀಡಿದರು. ಸಚಿವರಿಗೆ ಕಾಂಗ್ರೆಸ್ ನಾಯಕ ದಿನೇಶ್ ಗುಂಡೂರಾವ್ ಸಾಥ್ ನೀಡಿದರು. ಬಿಡಾಡಿ ವಾಹನಗಳಿಗೆ ತೆರವು ಮಾಡುವಂತೆ ವಾರದ ಹಿಂದೆ ಜಿಬಿಎ ನೋಟಿಸ್ ಅಂಟಿಸಿತ್ತು. ಆದರೆ ಅವುಗಳನ್ನ ತೆರವು ಮಾಡದ ಹಿನ್ನೆಲೆಯಲ್ಲಿ ಇದೀಗ ಟೋಯಿಂಗ್ ಗೆ ಮುಂದಾಗಿದೆ.
ಈ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಕೃಷ್ಣಭೈರೇಗೌಡ, ರಸ್ತೆ ಸಾರ್ವಜನಿಕರ ಆಸ್ತಿ. ಆದರೆ, ಕೆಲವರು ರಸ್ತೆಬದಿಯಲ್ಲೇ ತಮ್ಮ ವಾಹನಗಳನ್ನು ನಿಲುಗಡೆಗೊಳಿಸಿ ವರ್ಷಗಳೇ ಕಳೆದರೂ ಅಲ್ಲಿಂದ ತೆಗೆಯದೆ, ರಸ್ತೆಗಳನ್ನು ತಮ್ಮ ಸ್ವಂತ ಆಸ್ತಿ ಎಂಬಂತೆ ವರ್ತಿಸುವುದು ಸರಿಯಲ್ಲ. ಇದರಿಂದ ವಾಹನ ಸವಾರರು ಹಾಗೂ ಪಾದಾಚಾರಿಗಳಿಗೆ ತೊಂದರೆಯಾಗಲಿದೆ ಎಂದರು.
ಕೃತಕ ಟ್ರಾಫಿಕ್ ಸಮಸ್ಯೆಯೂ ತಲೆದೋರುತ್ತಿದೆ. ಹೀಗಾಗಿ ಕಳೆದ ಹತ್ತು ದಿನಗಳ ಹಿಂದೆಯೇ ಇಂತಹ ವಾಹನಗಳ ತೆರವಿಗೆ ಸ್ಟಿಕ್ಕರ್ ಅಭಿಯಾನ ಆರಂಭಿಸಲಾಗಿತ್ತು. ಸ್ಟಿಕ್ಕರ್ ಅಂಟಿಸಿಯೂ ಮಾಲೀಕರು ತಮ್ಮ ವಾಹನಗಳನ್ನು ತೆರವುಗೊಳಿಸದ ಕಾರಣ ಇಂದು ವಾಹನಗಳ ಟೋಯಿಂಗ್ ಗೆ ಅಧೀಕೃತ ಚಾಲನೆ ನೀಡಲಾಗಿದೆ ಎಂದು ತಿಳಿಸಿದರು.
ನಗರ ಎದುರಿಸುತ್ತಿರುವ ದೈನಂದಿನ ಸಮಸ್ಯೆಗಳನ್ನು ಪರಿಹರಿಸುವುದರ ಮೂಲಕ ನಾವು ಶ್ರೇಷ್ಠ ದರ್ಜೆಯ ಮಹಾನಗರವನ್ನು ನಿರ್ಮಾಣ ಮಾಡಬಹುದು ಎಂದು ಅವರು ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಹಂಚಿಕೊಂಡಿರುವ ಪೋಸ್ಟ್ ನಲ್ಲಿ ತಿಳಿಸಿದ್ದಾರೆ.