ನೆಲಮಂಗಲ: ಮುಸ್ಲಿಂ ಯುವತಿಯೊಬ್ಬಳ ಜೊತೆಯಲ್ಲಿ ಓಡಾಡುತ್ತಿದ್ದನೆಂಬ ಕಾರಣಕ್ಕೆ ಹಿಂದೂ ಯುವಕನ ಮೇಲೆ ಮುಸ್ಲಿಂ ಯುವಕರ ಗುಂಪೊಂದು ಹಲ್ಲೆ ಮಾಡಿರುವಂತಹ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲ ತಾಲೂಕಿನ ಡಾಬಸ್ಪೇಟೆಯಲ್ಲಿ ನಡೆದಿದೆ. ಡಾಬಸ್ಪೇಟೆ ಪೊಲೀಸ್ ಠಾಣಾ ವ್ಯಾಪ್ತಿಯ ಲಕ್ಕೂರು ಗ್ರಾಮದಲ್ಲಿ ನೈತಿಕ ಪೊಲೀಸ್ಗಿರಿ ಪ್ರಕರಣವೊಂದು ಬೆಳಕಿಗೆ ಬಂದಿದೆ.
ಹಲ್ಲೆಗೊಳಗಾದ ಯುವಕನನ್ನು ಯಶವಂತ್ ಎಂದು ಗುರುತಿಸಲಾಗಿದೆ. ಮುಸ್ಲಿಂ ಯುವತಿ ಕೌಸರ್ ಬಾನು ಜೊತೆ ಯಶವಂತ್ ಓಡಾಡುತ್ತಿದ್ದುದ್ದನ್ನು ಗಮನಿಸಿದ ಲಕ್ಕೂರು ಗ್ರಾಮದ ನಿವಾಸಿಗಳಾದ ಸೋಹೇಲ್ ಪಾಷಾ, ಸಯ್ಯದ್ ಕರೀಂ ಮತ್ತು ತಹರೀಕ್ ಪಾಷಾ ಎಂಬುವವರು ಯಶವಂತ್ನನ್ನ ತಡೆದು ನಿಲ್ಲಿಸಿ, ಅವಾಚ್ಯ ಶಬ್ದಗಳಿಂದ ನಿಂದಿಸಿ ಹಲ್ಲೆ ನಡೆಸಿದ್ದರು.
ಹಲ್ಲೆ ದೃಶ್ಯವನ್ನು ಮೊಬೈಲ್ ನಲ್ಲಿ ರೆಕಾರ್ಡ್ ಮಾಡಿ ವಾಟ್ಸಾಪ್ ಗ್ರೂಪ್ಗಳಲ್ಲಿ ಹರಿಬಿಟ್ಟಿದ್ದರು. ಇದರಿಂದ ತೀವ್ರ ಮನನೊಂದ ಕೌಸರ್ ಬಾನು ವಿಷ ಸೇವಿಸಿ ಆತ್ಮಹತ್ಯೆಗೂ ಯತ್ನಿಸಿರುವ ಘಟನೆ ನಡೆದಿದೆ. ಇದೀಗ ಘಟನೆಗೆ ಸಂಬಂಧಿಸಿದಂತೆ ನೊಂದ ಯುವತಿಯೇ ಹಲ್ಲೆ ಮಾಡಿದವರ ವಿರುದ್ಧ ಡಾಬಸ್ಪೇಟೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾಳೆ.