ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಮೂಡುಬಿದಿರೆ ಬಸ್ ನಿಲ್ದಾಣದಲ್ಲಿ ಮಚ್ಚು (ಕುಡ್ಗೋಲು) ಹಿಡಿದು ಸಾರ್ವಜನಿಕರಲ್ಲಿ ಭೀತಿ ಮೂಡಿಸಿದ್ದ ಆಗಂತುಕನನ್ನು ಸ್ಥಳೀಯರೇ ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ.
ಮದ್ಯದ ಅಮಲಿನಲ್ಲಿ ಕೈಯಲ್ಲಿ ಮಚ್ಚು ಹಿಡಿದು ಬಸ್ ನಿಲ್ದಾಣದಲ್ಲಿ ರಂಪಾಟ ಮಾಡಿದ್ದ 23 ವರ್ಷದ ಯುವಕನನ್ನು ಇದೀಗ ಮೂಡುಬಿದಿರೆ ಪೊಲೀಸರು ಬಂಧಿಸಿದ್ದಾರೆ. ಬಂಧಿತನನ್ನು ಬಂಟ್ವಾಳ ನಿವಾಸಿ ರಾಜೇಶ್ (23) ಎಂದು ಗುರುತಿಸಲಾಗಿದೆ.
ಬಂಧಿತ ಆರೋಪಿ ಮೊಬೈಲ್ ಅಂಗಡಿ ಮಾಲೀಕರಿಗೆ ಬೆದರಿಕೆ ಹಾಕಿದ್ದು, ಈ ಕುರಿತ ಸಿಸಿಟಿವಿ ದೃಶ್ಯಾವಳಿಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿವೆ.
ಆಗಿದ್ದೇನು?
ಪೊಲೀಸರ ಮಾಹಿತಿ ಪ್ರಕಾರ, ಆರೋಪಿ ರಾಜೇಶ್ ತನ್ನ ಸ್ನೇಹಿತರೊಂದಿಗೆ ಮದ್ಯಪಾನ ಮಾಡಿದ ಬಳಿಕ ಮೂಡುಬಿದಿರೆಯಲ್ಲಿರುವ ತನ್ನ ಸಂಬಂಧಿಕರ ಮನೆಗೆ ತೆರಳಿದ್ದ. ಅಲ್ಲಿ ಇದ್ದ ಮಚ್ಚನ್ನು ತೆಗೆದುಕೊಂಡು ನೇರವಾಗಿ ಬಸ್ ನಿಲ್ದಾಣಕ್ಕೆ ಬಂದಿದ್ದಾನೆ. ಬಳಿಕ ಬಸ್ ನಿಲ್ದಾಣದಲ್ಲಿರುವ ಮೊಬೈಲ್ ಅಂಗಡಿಗೆ ನುಗ್ಗಿದ ರಾಜೇಶ್, ಅಂಗಡಿ ಮಾಲೀಕರಿಗೆ "ಮೊಬೈಲ್ ಕೊಡು" ಎಂದು ಬೆದರಿಕೆ ಹಾಕಿದ್ದಾನೆ.
ಸಿಸಿಟಿವಿಯಲ್ಲಿ ರಂಪಾಟ ಸೆರೆ, ಆಗಂತುಕನ ಹೆಡೆಮುರಿ ಕಟ್ಟಿದ ಸ್ಥಳೀಯರು
ಅಂಗಡಿಯ ಸಿಸಿಟಿವಿ ಕ್ಯಾಮೆರಾದಲ್ಲಿ ರಾಜೇಶ್ ಮಚ್ಚು ಹಿಡಿದು ಅಂಗಡಿ ಮಾಲೀಕರಿಗೆ ಬೆದರಿಕೆ ಹಾಕುವುದು ಹಾಗೂ ಅಂಗಡಿಯ ಮುಂಭಾಗದ ಕಂಬಗಳಿಗೆ ಮಚ್ಚಿನಿಂದ ಹೊಡೆಯುತ್ತಿರುವ ದೃಶ್ಯಗಳು ಸೆರೆಯಾಗಿವೆ. ಇದೇ ವೇಳೆ, ಸ್ಥಳದಲ್ಲಿದ್ದ ಕೆಲ ಸಾರ್ವಜನಿಕರು ಧೈರ್ಯದಿಂದ ರಾಜೇಶ್ನನ್ನು ಸುತ್ತುವರಿದು, ಆತನ ಕೈಯಲ್ಲಿದ್ದ ಮಚ್ಚನ್ನು ಕಸಿದುಕೊಂಡು ಹಿಡಿದಿಟ್ಟಿದ್ದಾರೆ. ಬಳಿಕ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಬಿಎನ್ಎಸ್, ಶಸ್ತ್ರಾಸ್ತ್ರ ಕಾಯ್ದೆಯಡಿ ಪ್ರಕರಣ
ಅಂಗಡಿ ಮಾಲೀಕರ ದೂರಿನ ಆಧಾರದ ಮೇಲೆ ಮೂಡುಬಿದಿರೆ ಪೊಲೀಸರು ರಾಜೇಶ್ನನ್ನು ಬಂಧಿಸಿದ್ದು, ಭಾರತೀಯ ನ್ಯಾಯ ಸಂಹಿತೆ (BNS) ಅಡಿಯಲ್ಲಿ ಅಕ್ರಮ ಪ್ರವೇಶ (ಕ್ರಿಮಿನಲ್ ಟ್ರೆಸ್ಪಾಸ್) ಹಾಗೂ ಭಾರತೀಯ ಶಸ್ತ್ರಾಸ್ತ್ರ ಕಾಯ್ದೆ (Indian Arms Act) ಅಡಿ ಪ್ರಕರಣ ದಾಖಲಿಸಿ ಮುಂದಿನ ತನಿಖೆ ನಡೆಸುತ್ತಿದ್ದಾರೆ.