ಬೆಂಗಳೂರು: ಸಿಜೆಪಿಗೆ ನೂರಾರು ಕೋಟಿ ಯಾರು ಕೊಡ್ತಿದ್ದಾರೆ? ಊಟ ತಿಂಡಿ ಎಲ್ಲಿಂದ ಬರ್ತಿದೆ ಎಂದು ರಾಜ್ಯ ವಿರೋಧ ಪಕ್ಷದ ನಾಯಕ ಆರ್. ಅಶೋಕ್ ಪ್ರಶ್ನಿಸಿದ್ದಾರೆ.
ಪ್ರಧಾನಿ ಮೋದಿ ನಿವಾಸದ ಎದುರು ರಾಹುಲ್ ಗಾಂಧಿ ಪ್ರತಿಭಟನೆ ನಡೆಸಿದ್ದ ಹಿನ್ನೆಲೆಯಲ್ಲಿ ಬುಧವಾರ ಬಿಜೆಪಿ ನಾಯಕರು ಕೆಪಿಸಿಸಿ ಕಚೇರಿಗೆ ಮುತ್ತಿಗೆ ಹಾಕಿದ್ದರು. ಈ ವೇಳೆ ಬಿಜೆಪಿ ಶಾಸಕ ಬಿಪಿ ಹರೀಶ್ ಮೇಲೆ ಮೊಟ್ಟೆ ದಾಳಿ ನಡೆಸಿದ್ದನ್ನು ಖಂಡಿಸಿ ಗುರುವಾರ ವಿಧಾನಸೌಧದ ಗಾಂಧಿ ಪ್ರತಿಮೆಯ ಮುಂದೆ ಬಿಜೆಪಿ ನಾಯಕರು ಪ್ರತಿಭಟನೆ ನಡೆಸಿದರು. ಪ್ರತಿಭಟನೆಯಲ್ಲಿ ರಾಹುಲ್ ಗಾಂಧಿ ಹಾಗೂ ರಾಜ್ಯ ಸರ್ಕಾರದ ವಿರುದ್ಧ ಘೋಷಣೆ ಕೂಗಿದರು.
ಪ್ರತಿಭಟನೆ ವೇಳೆ ಮಾತನಾಡಿದ ವಿಪಕ್ಷ ನಾಯಕ ಆರ್ ಅಶೋಕ್ ಸಿಜೆಪಿಗೆ ನೂರಾರು ಕೋಟಿ ಯಾರು ಕೊಡ್ತಿದ್ದಾರೆ? ಊಟ ತಿಂಡಿ ಎಲ್ಲಿಂದ ಬರ್ತಾ ಇದೆ. ಸಿಜೆಪಿಗೆ ಬೆಂಬಲ ನೀಡುತ್ತಿರುವುದು ಕಾಂಗ್ರೆಸ್ ಪಕ್ಷದ ಹೀನ ಸಂಸ್ಕೃತಿಯಾಗಿದೆ ಎಂದು ಅಶೋಕ್ ಕಿಡಿಕಾರಿದರು.
ಅಲ್ಲದೆ ರಾಜ್ಯದಲ್ಲಿ ಗೂಂಡಾ ಸರ್ಕಾರದ ವಿರುದ್ಧ ನಮ್ಮ ಪ್ರತಿಭಟನೆ. ರಾಜ್ಯದಲ್ಲಿ ಕೊತ್ವಾಲ್ ಶಿಷ್ಯರ ಸರ್ಕಾರ ನಡೆಯುತ್ತಿದೆ. ಶಿವಾಜಿನಗರದಲ್ಲಿ ಅಧಿಕಾರಿಗಳ ವಿರುದ್ಧ ಹಲ್ಲೆ ಆಗಿದೆ. ಗೂಂಡಾ ಸರ್ಕಾರದ ನೇತೃತ್ವವನ್ನು ಸಿಎಂ ಡಿಕೆ ಶಿವಕುಮಾರ್ ಹಾಗೂ ಕೆಪಿಸಿಸಿ ಅಧ್ಯಕ್ಷ ಬಿಕೆ ಹರಿಪ್ರಸಾದ್ ವಹಿಸಿದ್ದಾರೆ ಎಂದರು.
ಪ್ರತಿಭಟನೆಯಲ್ಲಿ ವಿಧಾನಸಭೆ ವಿರೋಧ ಪಕ್ಷದ ಉಪ ನಾಯಕ ಅರವಿಂದ ಬೆಲ್ಲದ ಮಾತನಾಡಿ, ನೀಟ್ ಅಕ್ರಮದ ವಿರುದ್ಧ ಕೇಂದ್ರ ಸರ್ಕಾರದ ಕ್ರಮ ಕೈಗೊಂಡಿದೆ. ನೀಟ್ ಪ್ರಕ್ರಿಯೆಯಲ್ಲಿ ಭವಿಷ್ಯದಲ್ಲಿ ಸಮಸ್ಯೆ ಆಗದಂತೆ ಸುಧಾರಣೆ ತರಲಾಗುತ್ತಿದೆ. ಹೀಗಿದ್ದರೂ ದೇಶದಲ್ಲಿ ಅರಾಜಕತೆ ಸೃಷ್ಟಿ ಮಾಡುತ್ತಿದೆ. ಕಾಂಗ್ರೆಸ್ ವಿದ್ಯಾರ್ಥಿಗಳನ್ನು ತಪ್ಪು ದಾರಿಗೆ ಎಳೆಯುವ ಕೆಲಸ ಮಾಡುತ್ತಿದೆ" ಎಂದು ವಾಗ್ದಾಳಿ ನಡೆಸಿದರು.
ಈ ವೇಳೆ ವಿಧಾನಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣ ಸ್ವಾಮಿ ಮಾತನಾಡಿ, "ರಾಹುಲ್ ಗಾಂಧಿ ತುಕಡೇ ಗ್ಯಾಂಗ್ ಹಾಗೂ ಕಾಕ್ರೋಚ್ ಗ್ಯಾಂಗ್ ನಾಯಕ. ವಿದ್ಯಾರ್ಥಿಗಳನ್ನು ಗೌರವಿಸಬೇಕು. ಅವರಿಗೆ ಭವಿಷ್ಯ ರೂಪಿಸಬೇಕು. ನೀಟ್ ಪರೀಕ್ಷೆಯಲ್ಲಿ ಏನಾದ್ರೂ ತಪ್ಪಾದ್ರೆ ಕ್ರಮ ಆಗುತ್ತೆ. ವಿದ್ಯಾರ್ಥಿಗಳ ಬಗ್ಗೆ ಕೇಂದ್ರ ಸರ್ಕಾರಕ್ಕೆ ಕಾಳಜಿ ಇದೆ. ಕರ್ನಾಟಕದಲ್ಲಿ ಕೆಪಿಎಸ್ ಸಿ ಹಗರಣ ಆಗಿತ್ತು, ಆ ವೇಳೆ ಕ್ರಮ ಆಗಿದ್ಯಾ? ನಾವು ಗಲಭೆ ಮಾಡಿಸಿದ್ವಾ? ಎಂದು ಪ್ರಶ್ನೆ ಮಾಡಿದರು.