ಬೆಂಗಳೂರು: ಅಂಗವಿಕಲನಂತೆ ನಟಿಸಿ ಭಿಕ್ಷೆ ಬೇಡುತ್ತಾ ಜನರ ಮೊಬೈಲ್ ಕಳವು ಮಾಡುತ್ತಿದ್ದಾನೆ ಎಂಬ ಆರೋಪದ ಮೇಲೆ ಉತ್ತರ ಪ್ರದೇಶ ಮೂಲದ ವ್ಯಕ್ತಿಯೊಬ್ಬನನ್ನು ಸ್ಥಳೀಯರೇ ಸೆರೆ ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ.
ಬೆಂಗಳೂರಿನ ಬ್ಯಾಟರಾಯನಪುರ ಸಮೀಪದ ಐಟಿಐ ಲೇಔಟ್ ನಲ್ಲಿ ಈ ಘಟನೆ ನಡೆದಿದ್ದು, ಬಂಧಿತ ಆರೋಪಿಯನ್ನು ಮುಕೇಶ್ ಎಂದು ಗುರುತಿಸಲಾಗಿದೆ.
ಆತ ಕಾಲು ಊನವಾದಂತೆ ಕುಂಟುತ್ತಾ ನಡೆದು ಜನರ ಅನುಕಂಪ ಗಳಿಸಿ ಭಿಕ್ಷೆ ಬೇಡುತ್ತಿದ್ದ ಎಂದು ಸ್ಥಳೀಯರು ಆರೋಪಿಸಿದ್ದಾರೆ.
ಅನುಮಾನಗೊಂಡ ಸ್ಥಳೀಯರು ಹಿಡಿದು ವಿಚಾರಣೆ
ಇತ್ತೀಚಿನ ದಿನಗಳಲ್ಲಿ ಆತನ ಚಲನವಲನ ಅನುಮಾನಾಸ್ಪದವಾಗಿದ್ದರಿಂದ ಸ್ಥಳೀಯರು ಆತನನ್ನು ತಡೆದು ಪ್ರಶ್ನಿಸಿದ್ದಾರೆ. ಈ ವೇಳೆ ಆತ ನಿಜವಾಗಿ ಅಂಗವಿಕಲನಲ್ಲ ಎಂಬುದು ಬೆಳಕಿಗೆ ಬಂದಿರುವುದಾಗಿ ಹೇಳಲಾಗಿದೆ.
ಸ್ಥಳೀಯರ ಪ್ರಕಾರ, ಮುಕೇಶ್ ಯಾವುದೇ ದೈಹಿಕ ಅಂಗವೈಕಲ್ಯವಿಲ್ಲದಿದ್ದರೂ ಅಂಗವಿಕಲನಂತೆ ನಟಿಸಿ ಭಿಕ್ಷೆ ಬೇಡುವ ನೆಪದಲ್ಲಿ ಮೊಬೈಲ್ಗಳನ್ನು ಕಳವು ಮಾಡುತ್ತಿದ್ದ ಎಂದು ಆರೋಪಿಸಲಾಗಿದೆ.
ನೇರವಾಗಿ ನಿಂತು ಕ್ಷಮೆ ಕೇಳಿದ ಆರೋಪಿ!
ಇತ್ತ ಸ್ಥಳೀಯರು ಪ್ರಶ್ನಿಸಿದ ಬಳಿಕ ಮುಕೇಶ್ ನೇರವಾಗಿ ನಿಂತು ಕೈಮುಗಿದು ಕ್ಷಮೆ ಕೇಳಿದನೆಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ. ಬಳಿಕ ನಿವಾಸಿಗಳು ಆತನನ್ನು ಪೊಲೀಸರಿಗೆ ಒಪ್ಪಿಸಿದ್ದು, ಹೆಚ್ಚಿನ ತನಿಖೆ ನಡೆಸಲಾಗುತ್ತಿದೆ.
ಸಾಮಾಜಿಕ ಜಾಲತಾಣದಲ್ಲಿ ವೈರಲ್ ವಿಡಿಯೊ
ಈ ಘಟನೆಯ ವಿಡಿಯೊಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಸಾರ್ವಜನಿಕರಿಂದ ವ್ಯಾಪಕ ಪ್ರತಿಕ್ರಿಯೆ ವ್ಯಕ್ತವಾಗಿದೆ. ಪೊಲೀಸರು ವೈರಲ್ ವಿಡಿಯೊಗಳನ್ನೂ ಪರಿಶೀಲಿಸುತ್ತಿದ್ದು, ಮೊಬೈಲ್ ಕಳವು ಆರೋಪ ಸೇರಿದಂತೆ ಪ್ರಕರಣದ ಎಲ್ಲ ಆಯಾಮಗಳಲ್ಲಿ ತನಿಖೆ ಮುಂದುವರಿಸಿದ್ದಾರೆ.