ಮಂಗಳೂರು: ಕರಾವಳಿಗೆ ಅಧಿಕೃತವಾಗಿ ಮುಂಗಾರು ಮಾರುತಗಳು ಪ್ರವೇಶಿಸಿವೆ. ಮುಂದಿನ ನಾಲ್ಕೈದು ದಿನಗಳ ಕಾಲ ಆರೆಂಜ್ ಅಲರ್ಟ್ ಮುಂದುವರಿಯಲಿದ್ದು, ಮಳೆಯ ಪ್ರಮಾಣದಲ್ಲಿ ಹೆಚ್ಚಳ ಸಾಧ್ಯತೆಯಿದೆ.
ಶುಕ್ರವಾರ ಬೆಳಗ್ಗೆಯಿಂದಲ್ಲೇ ಸಾಧಾರಣದಿಂದ ಉತ್ತಮ ಮಳೆಯಾಗಿದ್ದು, ರಸ್ತೆಗಳಲ್ಲೆವೂ ತುಂಬಿ ಹರಿಯುತ್ತಿವೆ. ಮುಂಗಾರಿನ ಮೊದಲ ಭರ್ಜರಿ ಮಳೆಗೆ ಮಂಗಳೂರು ಸೇರಿದಂತೆ ಕರಾವಳಿಯ ಗ್ರಾಮಾಂತರ ಭಾಗ ತುಸು ಸ್ತಬ್ಧಗೊಂಡಿತ್ತು. ಬೆಳಗ್ಗಿನ ಅವಧಿಯಲ್ಲಿ ಸುರಿದ ಭಾರೀ ಮಳೆಗೆ ನಗರದ ಹೃದಯಭಾಗವಾದ ಕೋಡಿಯಾಲ್ಬೈಲ್ ರಸ್ತೆ ಬಹುತೇಕ ಕಡೆ ಸಂಪೂರ್ಣ ಜಲಾವೃತಗೊಂಡಿತು.
ಮೂಡುಬಿದ್ರಿಯ ಮಿಜಾರ್ನಲ್ಲಿ ರಾಷ್ಟ್ರೀಯ ಹೆದ್ದಾರಿಯ ಒಂದು ಭಾಗ ಕುಸಿದಿದ್ದು, ಕುದುರೆಮುಖ ವನ್ಯಜೀವಿ ಅಭಯಾರಣ್ಯದ ಬೆಳ್ತಂಗಡಿ ಬಳಿಯ ಬಂಡಾಜೆ ಅರಣ್ಯದಲ್ಲಿ ಭೂಕುಸಿತ ಸಂಭವಿಸಿದೆ ಎಂದು ವರದಿಯಾಗಿದೆ.
ಕಂಕನಾಡಿ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಚರಂಡಿಗಳ ಹೂಳೆತ್ತದ ಕಾರಣ, ಮಳೆನೀರು ಸರಾಗವಾಗಿ ಹರಿದುಹೋಗದೆ ರಸ್ತೆಯಲ್ಲಿ ಸಾಗುತ್ತಿತ್ತು. ಇದರಿಂದಾಗಿ ಪಾದಚಾರಿಗಳು ಹಾಗೂ ವಾಹನ ಸವಾರರು ತೀವ್ರ ಸಂಕಷ್ಟ ಅನುಭವಿಸುವಂತಾಯಿತು.
ನಿರಂತರ ಮಳೆಯ ಹೊಡೆತಕ್ಕೆ ದಂಬೇಲ್ ಸಮೀಪ ಮನೆಯೊಂದರ ತಡೆಗೋಡೆ ರಸ್ತೆಗೆ ಕುಸಿದು ಬಿದ್ದಿದ್ದು, ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ಇನ್ನು ರಾಷ್ಟ್ರೀಯ ಹೆದ್ದಾರಿ ವ್ಯಾಪ್ತಿಯ ನಂತೂರು, ಪಡೀಲ್, ಪಂಪ್ವೆಲ್ ಹಾಗೂ ಕೆಪಿಟಿ ಜಂಕ್ಷನ್ಗಳಲ್ಲಿ ಟ್ರಾಫಿಕ್ ಜಾಮ್ ಉಂಟಾಗಿ ಸಾರ್ವಜನಿಕರು ರಸ್ತೆಯಲ್ಲೇ ಕಾಯುವ ಪರಿಸ್ಥಿತಿ ನಿರ್ಮಾಣವಾಗಿತ್ತು.