ಬೆಂಗಳೂರು: ಕಳೆದ ಮಾರ್ಚ್ನಲ್ಲಿ ಅನುಮಾನಾಸ್ಪದವಾಗಿ ಮೃತಪಟ್ಟಿದ್ದ 6 ವರ್ಷದ ಪಿ. ವೆನ್ನೆಲ ಹೆಸರಿನ ಬಾಲಕಿಯ ಪ್ರಕರಣ ಹೊಸ ತಿರುವು ಪಡೆದುಕೊಂಡಿದ್ದು, ಐಷಾರಾಮಿ ಕಾರಿನಲ್ಲಿ ಐಸ್ಕ್ರೀಂ ಚೆಲ್ಲಿದ್ದಕ್ಕೆ ಪ್ರಿಯಕರನ ಜತೆ ಸೇರಿ ಹೆತ್ತ ಮಗಳನ್ನೇ ಕೊಂದು ಕಥೆಕಟ್ಟಿದ್ದ ಪ್ರಿಯಾಂಕಾಳನ್ನು ಗುರುವಾರ ಪೊಲೀಸರು ಬಂಧಿಸಿದ್ದಾರೆ.
ಪ್ರಕರಣವನ್ನು ಭೇದಿಸಿರುವ ಕಾಡುಗೋಡಿ ಠಾಣೆ ಪೊಲೀಸರು ಬಾಲಕಿ ತಾಯಿಯ ಪ್ರಿಯಕರನನ್ನು ಈಗಾಗಲೇ ಬಂಧಿಸಿದ್ದು, ಇದು ತಾಯಿ ಪ್ರಿಯಾಂಕಾಗಳನ್ನು ಬಂಧಿಸಿದ್ದಾರೆ.
ಇನ್ನು ಪೊಲೀಸ್ ತನಿಖೆ ವೇಳೆ ಭಯಾನಕ ಸತ್ಯ ಬಯಲಾಗಿದ್ದು, ಐಷಾರಾಮಿ ಕಾರಿನಲ್ಲಿ ಬಾಲಕಿ ಪಿ ವೆನ್ನೆಲಾ ಐಸ್ಕ್ರೀಂ ಚೆಲ್ಲಿದ್ದಕ್ಕೆ ಸಿಟ್ಟಾದ ತಾಯಿಯ ಲಿವ್ಇನ್ ಪಾರ್ಟನರ್, ಆಕೆಯ ಹೊಟ್ಟೆಗೆ ಮೊಣಕೈನಿಂದ ಗುದ್ದಿ, ಬಾಯಿ ಮುಚ್ಚಿ ಉಸಿರುಗಟ್ಟಿಸಿದ್ದಾನೆ.
ಸದ್ಯ ಆರೋಪಿ 10 ದಿನಗಳ ಕಾಲ ಪೊಲೀಸರ ವಶದಲ್ಲಿದ್ದು. ತಾಯಿ ಪ್ರಿಯಾಂಕಾಳನ್ನು ಪೊಲೀಸರು ಇಂದು ವಶಕ್ಕೆ ಪಡೆದಿದ್ದಾರೆ.
ಯಾರು ಈ ಬಾಲಕಿ?
ಬಾಲಕಿ ವೆನ್ನೆಲಾ ದಾವಣಗೆರೆಯ ಶಿಕ್ಷಣ ತಜ್ಞ ಪ್ರವೀಣ್ ಹಾಗೂ ವಕೀಲೆ ಪ್ರಿಯಾಂಕಾರ ಪುತ್ರಿ. ಪ್ರಿಯಾಂಕಾ ತನ್ನ ಕಾಲೇಜು ಸ್ನೇಹಿತ ಹಾಗೂ ರಿಯಲ್ ಎಸ್ಟೇಟ್ ಉದ್ಯಮಿ ಮೋಹನ್ ಜೊತೆ ಸಂಬಂಧ ಬೆಳೆಸಿದ್ದರು. ಈ ಹಿನ್ನೆಲೆ ಪತಿಯಿಂದ ದೂರವಾಗಿ ಬೆಂಗಳೂರಿನ ಪೂರ್ವ ಭಾಗದ ಐಷಾರಾಮಿ ವಿಲ್ಲಾದಲ್ಲಿ ಆತನೊಂದಿಗೆ ಲಿವ್-ಇನ್ ರಿಲೇಶನ್ಶಿಪ್ನಲ್ಲಿದ್ದರು ಎನ್ನಲಾಗಿದೆ.
ಮೋಹನ್ಗೂ ಮದುವೆಯಾಗಿತ್ತು
ಆರೋಪಿ ಮೋಹನ್ಗೆ ಈಗಾಗಲೇ ಮದುವೆಯಾಗಿದ್ದು, ಇಬ್ಬರು ಮಕ್ಕಳಿದ್ದಾರೆ. ಆದರೆ ತನ್ನ ಕುಟುಂಬವನ್ನು ತೊರೆದು ಆತ ಪ್ರಿಯಾಂಕಾ ಜೊತೆ ವಾಸಿಸುತ್ತಿದ್ದ. ಪ್ರಿಯಾಂಕಾ ತನ್ನ ಪತಿ ಪ್ರವೀಣ್ಗೆ ವಿಚ್ಛೇದನ ಪತ್ರಕ್ಕೆ ಸಹಿ ಹಾಕುವಂತೆ ಬೆದರಿಕೆ ಹಾಕಿದ್ದಳು ಎನ್ನಲಾಗಿದೆ.
ವೆನ್ನಿಲಾ ತಂದೆಯಿಂದ ದೂರು
ಮಗಳ ಸಾವಿನ ನಂತರ ಪತಿ ಪ್ರವೀಣ್ ಜೂನ್ 4 ರಂದು ಕಡುಗೋಡಿ ಪೊಲೀಸ್ ಠಾಣೆಯಲ್ಲಿ ಪ್ರಿಯಾಂಕಾ ಮತ್ತು ಮೋಹನ್ ವಿರುದ್ಧ ಕೊಲೆ ದೂರು ದಾಖಲಿಸಿದ್ದರು. ತನ್ನ ಮತ್ತು ಮೋಹನ್ ಅವರ ಹೊಸ ಖಾಸಗಿ ಜೀವನಕ್ಕೆ 6 ವರ್ಷದ ಮಗಳು ವೆನ್ನೆಲಾ ಅಡ್ಡಿಯಾಗಿದ್ದಾಳೆ ಎಂಬ ಕಾರಣಕ್ಕೆ ಇಬ್ಬರೂ ಸೇರಿ ಮಗುವನ್ನು ಹತ್ಯೆ ಮಾಡಿದ್ದಾರೆ ಎಂದು ತಂದೆ ಆರೋಪಿಸಿದ್ದರು. ಸದ್ಯ ಪೊಲೀಸರು ವಿಧಿವಿಜ್ಞಾನ ಪ್ರಯೋಗಾಲಯದ (FSL) ನೆರವಿನೊಂದಿಗೆ ಕಾರನ್ನು ತಪಾಸಣೆಗೆ ಒಳಪಡಿಸಿದ್ದು, ಹೆಚ್ಚಿನ ಸಾಕ್ಷ್ಯಗಳನ್ನು ಕಲೆಹಾಕುತ್ತಿದ್ದಾರೆ.