ಕೆ.ಆರ್. ಮಾರುಕಟ್ಟೆಯಲ್ಲಿ ಅಕ್ರಮವಾಗಿ ನಡೆಸುತ್ತಿರುವ ಅಂಗಡಿ. 
ರಾಜ್ಯ

KR Marketನಲ್ಲಿ ಅತಿಕ್ರಮಣ ತೆರವು ಕೇವಲ ನಾಟಕವೇ..? 22 ಅಕ್ರಮ ಅಂಗಡಿಗಳ ಮುಟ್ಟದ ಅಧಿಕಾರಿಗಳು, ಪಾಲಿಕೆ ವಿರುದ್ಧ ವ್ಯಾಪಾರಿಗಳ ಆಕ್ರೋಶ

ಬುಧವಾರ ಬಿಸಿಸಿಸಿ ಅಧಿಕಾರಿಗಳು ಕೆಆರ್‌ ಮಾರ್ಕೆಟ್‌ನ ಪ್ರವೇಶ ದ್ವಾರ, ಕಾಲುದಾರಿಗಳು ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಅತಿಕ್ರಮಣ ತೆರವು ಮತ್ತು ಸ್ವಚ್ಛತಾ ಕಾರ್ಯಾಚರಣೆ ನಡೆಸಿದ್ದರು.

ಬೆಂಗಳೂರು: ಕೆಆರ್‌ ಮಾರ್ಕೆಟ್‌ನಲ್ಲಿ ಅತಿಕ್ರಮಣ ತೆರವು ಕಾರ್ಯಾಚರಣೆ ಬಳಿಕ ಹೊಸ ವಿವಾದ ಹುಟ್ಟಿಕೊಂಡಿದೆ. ಎಲ್ಲಾ ಅಕ್ರಮ ನಿರ್ಮಾಣಗಳನ್ನು ತೆರವುಗೊಳಿಸಲಾಗಿದೆ ಎಂಬ ಅಧಿಕಾರಿಗಳ ಹೇಳಿಕೆಯನ್ನು ತಳ್ಳಿಹಾಕಿರುವ ಹೂವಿನ ವ್ಯಾಪಾರಿಗಳು, 22 ಅಕ್ರಮ ಅಂಗಡಿಗಳು ಇನ್ನೂ ಯಥಾಸ್ಥಿತಿಯಲ್ಲೇ ಕಾರ್ಯನಿರ್ವಹಿಸುತ್ತಿವೆ ಎಂದು ಆರೋಪಿಸಿದ್ದಾರೆ.

ಬುಧವಾರ ಬಿಸಿಸಿಸಿ ಅಧಿಕಾರಿಗಳು ಕೆಆರ್‌ ಮಾರ್ಕೆಟ್‌ನ ಪ್ರವೇಶ ದ್ವಾರ, ಕಾಲುದಾರಿಗಳು ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಅತಿಕ್ರಮಣ ತೆರವು ಮತ್ತು ಸ್ವಚ್ಛತಾ ಕಾರ್ಯಾಚರಣೆ ನಡೆಸಿದ್ದರು. ಆದರೆ, ಗಾಳಿ ಮತ್ತು ಬೆಳಕಿಗಾಗಿ ಮೀಸಲಿಟ್ಟ ಜಾಗವನ್ನು ಆಕ್ರಮಿಸಿಕೊಂಡಿರುವ 22 ಅಕ್ರಮ ಅಂಗಡಿಗಳ ವಿರುದ್ಧ ಯಾವುದೇ ಕ್ರಮ ಕೈಗೊಳ್ಳಲಾಗಿಲ್ಲ ಎಂದು ವ್ಯಾಪಾರಿಗಳು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಕೆಆರ್‌ ಮಾರ್ಕೆಟ್‌ ಹೂವಿನ ವ್ಯಾಪಾರಿಗಳ ಸಂಘದ ಅಧ್ಯಕ್ಷ ಜಿ.ಎನ್. ದಿವಾಕರ್‌ ಅವರು ಮಾತನಾಡಿ, ಈ ಅಕ್ರಮ ಅಂಗಡಿಗಳ ಕುರಿತು 2016ರಿಂದಲೇ ಆಗಿನ ಬಿಬಿಎಂಪಿ ಮಾರುಕಟ್ಟೆ ವಿಭಾಗ, ಕಂದಾಯ ಇಲಾಖೆ ಹಾಗೂ ಎಂಜಿನಿಯರಿಂಗ್ ವಿಭಾಗದ ಅಧಿಕಾರಿಗಳಿಗೆ ಹಲವು ಬಾರಿ ದೂರು ನೀಡಲಾಗಿತ್ತು. ಆದರೂ ಯಾವುದೇ ಪರಿಣಾಮಕಾರಿ ಕ್ರಮ ಕೈಗೊಳ್ಳಲಿಲ್ಲ ಎಂದು ಆರೋಪಿಸಿದ್ದಾರೆ.

“ನಿಯಮಗಳ ಪ್ರಕಾರ ತುರ್ತು ಪರಿಸ್ಥಿತಿಗಳು ಹಾಗೂ ಅಗ್ನಿ ಅವಘಡಗಳ ಸಂದರ್ಭದಲ್ಲಿ ಬಳಕೆಯಾಗಬೇಕಾದ ಮಾರ್ಗಗಳಲ್ಲಿ ಯಾವುದೇ ಅಡ್ಡಿ ಇರಬಾರದು. ಅಧಿಕಾರಿಗಳ ನಿರ್ಲಕ್ಷ್ಯದ ಕಾರಣ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನೂ (PIL) ಸಲ್ಲಿಸಲಾಗಿತ್ತು.

ನ್ಯಾಯಾಲಯಕ್ಕೆ ಸಲ್ಲಿಸಿದ ಪ್ರಮಾಣಪತ್ರದಲ್ಲಿ ಅಂಗಡಿಗಳನ್ನು ತೆರವುಗೊಳಿಸಲಾಗಿದೆ ಎಂದು ಹೇಳಲಾಗಿದೆ. ಆದರೆ ವಾಸ್ತವದಲ್ಲಿ ಅವು ಇನ್ನೂ ಕಾರ್ಯನಿರ್ವಹಿಸುತ್ತಿವೆ ಎಂದು ಹೇಳಿದ್ದಾರೆ.

ಗ್ರೇಟರ್ ಬೆಂಗಳೂರು ಪ್ರಾಧಿಕಾರ (GBA) ವ್ಯಾಪ್ತಿಯಲ್ಲಿ ಮಾರ್ಷಲ್‌ಗಳು ಮತ್ತು ಎಂಜಿನಿಯರ್‌ಗಳ ತಂಡವನ್ನು ನಿಯೋಜಿಸಿ ಬುಧವಾರ ಹಾಗೂ ಗುರುವಾರ ಅತಿಕ್ರಮಣ ತೆರವು ಕಾರ್ಯಾಚರಣೆ ನಡೆಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಜಿಬಿಎ ಮುಖ್ಯ ಆಯುಕ್ತರ ಇತ್ತೀಚಿನ ಭೇಟಿ ಹಿನ್ನೆಲೆಯಲ್ಲಿ ಮಾರುಕಟ್ಟೆಯ ಪ್ರವೇಶ ದ್ವಾರ ಮತ್ತು ನೆಲಮಾಳಿಗೆಯ ಅತಿಕ್ರಮಣ ತೆರವುಗೊಳಿಸುವಂತೆ ಸೂಚನೆ ನೀಡಲಾಗಿತ್ತು. ಕಾರ್ಯಾಚರಣೆಯಲ್ಲಿ 22 ಅಕ್ರಮ ಅಂಗಡಿಗಳನ್ನೂ ತೆರವುಗೊಳಿಸಲಾಗಿದೆ ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಆದರೆ ಈ ಹೇಳಿಕೆಯನ್ನು ತಳ್ಳಿಹಾಕಿರುವ ಹೂವಿನ ವ್ಯಾಪಾರಿಗಳ ಸಂಘ, “22 ಅಂಗಡಿಗಳ ತೆರವು ಬಗ್ಗೆ ಅಧಿಕಾರಿಗಳು ಸುಳ್ಳು ಹೇಳುತ್ತಿದ್ದಾರೆ” ಎಂದು ಆರೋಪಿಸಿದೆ.

ಇದೇ ವೇಳೆ, ಕೆಳ ಮಹಡಿಯನ್ನು ಖಾಸಗಿ ಪಾರ್ಕಿಂಗ್ ಕಂಪನಿಗೆ ನೀಡಿದ ನಂತರ ಮೇಲಿನ ನೆಲಮಾಳಿಗೆಯಲ್ಲಿರುವ ಹೂವು ಹಾಗೂ ಪೂಜಾ ಸಾಮಗ್ರಿಗಳ ಅಂಗಡಿಗಳಿಗೆ ಮಳೆ ನೀರಿನ ಸಮಸ್ಯೆ ಹೆಚ್ಚಾಗಿದೆ ಎಂದು ವ್ಯಾಪಾರಿಗಳು ದೂರಿದ್ದಾರೆ.

ಖಾಸಗಿ ಕಂಪನಿ ಬಹುಮಟ್ಟದ ಪಾರ್ಕಿಂಗ್ ನಿರ್ಮಾಣಕ್ಕಾಗಿ ಕೈಗೊಂಡ ನಾಗರೀಕ ಕಾಮಗಾರಿಗಳಿಂದ ಮಳೆ ನೀರಿನ ಹರಿವು ಮಾರ್ಪಟ್ಟಿದ್ದು, ಹಿಂದೆ ಕೆಳ ಮಹಡಿಗೆ ಹರಿದು ಚರಂಡಿಗೆ ಸೇರುತ್ತಿದ್ದ ನೀರು ಈಗ ಅಂಗಡಿಗಳೊಳಗೆ ನುಗ್ಗುತ್ತಿದೆ ಎಂದು ವ್ಯಾಪಾರಿಗಳು ಹೇಳಿದ್ದಾರೆ.

ಈ ಹಿನ್ನೆಲೆಯಲ್ಲಿ ಅಕ್ರಮ ಅಂಗಡಿಗಳ ತೆರವು ಹಾಗೂ ಮಳೆ ನೀರಿನ ಸಮಸ್ಯೆ ಪರಿಹಾರಕ್ಕೆ ಬಿಸಿಸಿಸಿ ಮತ್ತು ಜಿಬಿಎ ತುರ್ತು ಕ್ರಮ ಕೈಗೊಳ್ಳಬೇಕು ಎಂದು ವ್ಯಾಪಾರಿಗಳು ಒತ್ತಾಯಿಸಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

FIFA World Cup 2026: ಉದ್ಘಾಟನಾ ಪಂದ್ಯದಲ್ಲಿ ಮೂರು ರೆಡ್ ಕಾರ್ಡ್ ಗಳು; 2-0 ಅಂತರದಿಂದ ದಕ್ಷಿಣ ಆಫ್ರಿಕಾ ಮಣಿಸಿದ ಮೆಕ್ಸಿಕೊ

ಭಾರತೀಯ 'ಶೂಟಿಂಗ್' ದಂತಕತೆ, ಮನುಬಾಕರ್ ಕೋಚ್ ಜಸ್ಪಾಲ್ ರಾಣಾ ನಿಧನ!

ಇರಾನ್‌ ಜೊತೆ ಯುದ್ಧ ಅಂತ್ಯಗೊಂಡಿದೆ, ವಾರಾಂತ್ಯದಲ್ಲಿ ಯುರೋಪಿನಲ್ಲಿ ಶಾಂತಿ ಒಪ್ಪಂದ: ಡೊನಾಲ್ಡ್ ಟ್ರಂಪ್ ಘೋಷಣೆ

ಇಂಧನ ಸಂಗ್ರಹಣೆ-ಕಾಳಸಂತೆ ವಿರುದ್ಧ ಕೇಂದ್ರ ಸರ್ಕಾರ ಕಠಿಣ ಕ್ರಮ: ಪೆಟ್ರೋಲ್ ಬಂಕ್‌ಗಳಲ್ಲಿ Bulk ಇಂಧನ ಖರೀದಿಗೆ ನಿಷೇಧ..!

US-Iran war: 'ಒಪ್ಪಂದಕ್ಕೆ ಒಪ್ಪಿಗೆ ಸಿಕ್ಕಿದೆ’ ಎಂದ ಟ್ರಂಪ್‌; ‘ಇನ್ನೂ ನಿರ್ಧಾರವೇ ಆಗಿಲ್ಲ’ ಎಂದ ಇರಾನ್‌ - ಶಾಂತಿ ಒಪ್ಪಂದದ ಸುತ್ತ ಹೆಚ್ಚಿದ ಅನಿಶ್ಚಿತತೆ..!

SCROLL FOR NEXT