ಹಾಸನ: ಬೆಂಗಳೂರು ಮೂಲದ ಯುವಕರ ತಂಡವೊಂದು ಧರ್ಮಸ್ಥಳ ಪ್ರವಾಸಕ್ಕೆ ತೆರಳಿದ್ದು ವಾಪಸ್ಸಾಗುತ್ತಿದ್ದಾಗ ಈಜಾಡಲು ಹಾಸನದ ಗೊರೂರು ಬಳಿಯಿರುವ ಹೇಮಾವತಿ ಜಲಾಶಯದ ಹಿನ್ನೀರಿಗೆ ಇಳಿದಿದ್ದಾಗ ಮೂವರು ಯುವಕರು ನೀರುಪಾಲಾಗಿದ್ದಾರೆ. ಇನ್ನು ಕಣ್ಣೇದುರೇ ಸ್ನೇಹಿತರು ಮುಳುಗುತ್ತಿದ್ದರೂ ಏನು ಮಾಡಲು ಸಾಧ್ಯವಾಗದೇ ಯುವಕರ ತಂಡ ಅಸಹಾಯಕನಾಗಿ ನೋಡುತ್ತ ನಿಂತಿದ್ದರು.
ಈಜು ಬಾರದಿದ್ದರೂ ಯುವಕರು ಜಲಾಶಯಕ್ಕೆ ಇಳಿದ್ದರಿಂದ ಈ ದುರಂತ ಸಂಭವಿಸಿದೆ. ಮೃತರನ್ನು 20 ವರ್ಷದ ಮಣಿಕಂಠ, ಚರಣ್, 23 ವರ್ಷದ ಮಿಲನ್ ಎಂದು ತಿಳಿದುಬಂದಿದೆ. ಗೊರೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ. ಘಟನಾ ಸ್ಥಳಕ್ಕೆ ಗೊರೂರು ಪೊಲೀಸರು ಹಾಗೂ ಅಗ್ನಿಶಾಮಕ ದಳದ ಸಿಬ್ಬಂದಿ ದೌಡಾಯಿಸಿದ್ದು ಮೃತದೇಹಗಳಿಗಾಗಿ ಶೋಧ ನಡೆಸುತ್ತಿದ್ದಾರೆ.