ಬೆಂಗಳೂರು: ಫ್ರೀ ಲಿಫ್ಟ್ ನಂಬಿ ಕಾರು ಹತ್ತಿದ ವ್ಯಕ್ತಿಯೊಬ್ಬರನ್ನು ನಾಲ್ವರು ದುಷ್ಕರ್ಮಿಗಳು ಹಲ್ಲೆ ನಡೆಸಿ, ದರೋಡೆ ಮಾಡಿರುವ ಘಟನೆಯೊಂದು ಕನಕಪುರ ಪಟ್ಟಣದಲ್ಲಿ ಭಾನುವಾರ ಮುಂಜಾನೆ ನಡೆದಿದೆ.
ಕನಕಪುರ ತಾಲೂಕಿನ ಕಾಳೇಗೌಡನ ದೊಡ್ಡಿ ನಿವಾಸಿ ಎಂ. ರಾಜು ಕುಮಾರ್ ದರೋಡೆಗೊಳಗಾದ ವ್ಯಕ್ತಿ. ಶನಿವಾರ ರಾತ್ರಿ ಕೆಎನ್ಎಸ್ ವೃತ್ತದ ಬಳಿಯ ಔಷಧ ಅಂಗಡಿಗೆ ಔಷಧ ಖರೀದಿಸಲು ತೆರಳಿದ್ದ ಅವರು, ಮನೆಗೆ ಹಿಂತಿರುಗಲು ಬಸ್ ಸಿಗದ ಕಾರಣ ರಾತ್ರಿ ಸುಮಾರು 10.30ರ ವೇಳೆಗೆ ಫ್ರೀ ಲಿಫ್ಟ್ ನೀಡುತ್ತೇವೆಂದು ಹೇಳಿದ್ದ ವ್ಯಕ್ತಿಗಳ ನಂಬಿ ಕಾರು ಹತ್ತಿದ್ದರು.
ರಾಜು ಅವರು ಹತ್ತಿದ್ದ ಕಾರಿನಲ್ಲಿ ಅದಾಗಲೇ ಇಬ್ಬರು ವ್ಯಕ್ತಿಗಳು ಇದ್ದರು. ರಾಜು ಅವರನ್ನು ಕಾರು ಹತ್ತಿಸಿಕೊಂಡ ಆರೋಪಿಗಳು, ಅವರನ್ನು ಅವರ ಮನೆ ಕಡೆಗೆ ಕರೆದೊಯ್ಯುವ ಬದಲು ರಾಮನಗರದತ್ತ ಕರೆದುಕೊಂಡು ಹೋಗಿದ್ದಾರೆ. ಬಳಿಕ ತಮ್ಮ ಇನ್ನಿಬ್ಬರು ಸಹಚರರನ್ನು ಕರೆಸಿಕೊಂಡಿದ್ದಾರೆ.
ನಾಲ್ವರೂ ಸೇರಿ ನಿರ್ಜನ ಪ್ರದೇಶದಲ್ಲಿ ಕಾರು ನಿಲ್ಲಿಸಿ ರಾಜು ಅವರ ಮೇಲೆ ಹಲ್ಲೆ ನಡೆಸಿದ್ದಾರೆ. ಅವರ ಬಳಿಯಿದ್ದ 5,000 ರೂಪಾಯಿ ನಗದು ಕಸಿದುಕೊಂಡು, ಇನ್ನೂ 20,000 ರೂಪಾಯಿ ಕಳುಹಿಸುವಂತೆ ಸ್ನೇಹಿತರು ಅಥವಾ ಸಂಬಂಧಿಕರಿಗೆ ಕರೆ ಮಾಡಲು ಒತ್ತಾಯಿಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಆರೋಪಿಗಳು ರಾಜು ಕುಮಾರ್ ಅವರ ಮೊಬೈಲ್ ಫೋನ್ ಬಳಸಿ ವಿವಿಧ ಯುಪಿಐ ಖಾತೆಗಳಿಗೆ ಹಣ ವರ್ಗಾಯಿಸಿಕೊಂಡಿದ್ದಾರೆ. ಬಳಿಕ ಮೊಬೈಲ್ ಕಸಿದುಕೊಂಡು, ಭಾನುವಾರ ಮುಂಜಾನೆ ಸುಮಾರು 1 ಗಂಟೆ ವೇಳೆಗೆ ಚನ್ನಪಟ್ಟಣ ಸೇತುವೆ ಬಳಿ ಅವರನ್ನು ಕಾರಿನಿಂದ ತಳ್ಳಿ ಪರಾರಿಯಾಗಿದ್ದಾರೆ.
ಗಾಯಗೊಂಡಿದ್ದ ರಾಜು ಅವರು, ಬಳಿಕ ರಾಮನಗರದ ಆಸ್ಪತ್ರೆಗೆ ತೆರಳಿ ಚಿಕಿತ್ಸೆ ಪಡೆದಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು, ಯುಪಿಐ ಹಣ ವರ್ಗಾವಣೆ ವಿವರಗಳ ಆಧಾರದಲ್ಲಿ ಆರೋಪಿಗಳ ಬಗ್ಗೆ ಮಹತ್ವದ ಸುಳಿವುಗಳನ್ನು ಸಂಗ್ರಹಿಸಿದ್ದಾರೆ.
ಈ ಸಂಬಂಧ ಕನಕಪುರ ಪೊಲೀಸರು ದರೋಡೆ ಪ್ರಕರಣ ದಾಖಲಿಸಿಕೊಂಡು ಆರೋಪಿಗಳ ಬಂಧನಕ್ಕೆ ಬಲೆ ಬೀಸಿದ್ದಾರೆ.