ಬೆಂಗಳೂರು: ಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ನೇತೃತ್ವದಲ್ಲಿ ಇಂದು ಸಚಿವ ಸಂಪುಟ ಸಭೆ ನಡೆಯಲಿದ್ದು, ರಾಜ್ಯದಲ್ಲಿ ಹೊಸದಾಗಿ ‘ಮುಖ್ಯಮಂತ್ರಿಗಳ ಜನಸ್ಪಂದನ ಮತ್ತು ಜನಹಿತ ಆಡಳಿತ ಇಲಾಖೆ’ ಹಾಗೂ ‘ಅನಿವಾಸಿ ಭಾರತೀಯ ವ್ಯವಹಾರಗಳ ಇಲಾಖೆ’ ರಚಿಸುವ ಬಗ್ಗೆ ಹಾಗೂ ವಿಧಾನಪರಿಷತ್ನ ಐದು ಸ್ಥಾನಗಳಿಗೆ ನಾಮನಿರ್ದೇಶನ ಮಾಡುವ ಕುರಿತು ಮಹತ್ವದ ಚರ್ಚೆ ನಡೆಯುವ ಸಾಧ್ಯತೆಯಿದೆ.
ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ಸಿಎಂ ಡಿ.ಕೆ.ಶಿವಕುಮಾರ್ ಅಧ್ಯಕ್ಷತೆಯಲ್ಲಿ ನಿನ್ನೆ ಕರಾವಳಿ ಪ್ರವಾಸೋದ್ಯಮ ಸಭೆ ನಡೆಸಿ ಎರಡು ನೂತನ ಇಲಾಖೆ ಸ್ಥಾಪಿಸುವ ಕುರಿತು ಘೋಷಣೆ ಮಾಡಿದ್ದರು.
ಈ ಬಗ್ಗೆ ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆಯಿಂದ ಸಚಿವ ಸಂಪುಟ ಸಭೆ ಎದುರು ವಿಷಯ ಮಂಡಿಸಲು ಅಗತ್ಯ ಕ್ರಮ ಕೈಗೊಳ್ಳುವಂತೆ ಮುಖ್ಯಕಾರ್ಯದರ್ಶಿ ಅವರು ಪತ್ರ ಬರೆದಿದ್ದು, ಇಂದಿನ ಸಚಿವ ಸಂಪುಟ ಸಭೆಯಲ್ಲಿ ಬಹುತೇಕ ವಿಷಯ ಮಂಡನೆಯಾಗಲಿದೆ.
5 ಸ್ಥಾನಗಳಿಗೆ ನಾಮ ನಿರ್ದೇಶನ
ಜುಲೈ 21ಕ್ಕೆ ಅಡಗೂರು ಎಚ್.ವಿಶ್ವನಾಥ್, ಭಾರತಿ ಶೆಟ್ಟಿ, ಶಾಂತರಾಮ್ ಬುಡ್ನಸಿದ್ಧಿ, ಡಾ.ತಳವಾರ್ ಬಾಬಣ್ಣ ಹಾಗೂ ರಮೇಶ್ ಬಾಬು ಅವರ ವಿಧಾನಪರಿಷತ್ ನಾಮನಿರ್ದೇಶನದ ಅವಧಿ ಮುಕ್ತಾಯವಾಗಲಿದೆ. ಈ ಐದು ಸ್ಥಾನಗಳಿಗೆ ರಾಜ್ಯಪಾಲರ ಮೂಲಕ ನಾಮನಿರ್ದೇಶನಗೊಳ್ಳುವ ಕುರಿತು ಸಹ ಇಂದಿನ ಸಂಪುಟ ಸಭೆಯಲ್ಲಿ ಚರ್ಚೆಯಾಗಲಿದೆ.
2,200 ತರಗತಿ ಕೊಠಡಿಗಳ ನಿರ್ಮಾಣ
ಜತೆಗೆ ರಾಜ್ಯಾದ್ಯಂತ ಸರ್ಕಾರಿ ಶಾಲೆಗಳಲ್ಲಿ 360 ಕೋಟಿ ರು. ವೆಚ್ಚದಲ್ಲಿ 2,200 ತರಗತಿ ಕೊಠಡಿಗಳ ನಿರ್ಮಾಣ ಮಾಡುವ ಬಗ್ಗೆ, ಸಾರಿಗೆ ಇಲಾಖೆಯ ವಿವಿಧ ನಿಗಮಗಳಿಂದ ಬಸ್ಸುಗಳ ಖರೀದಿಸುವ ಬಗ್ಗೆ, ಡಾ.ಬಿ.ಆರ್.ಅಂಬೇಡ್ಕರ್ ಅಭಿವೃದ್ಧಿ ನಿಗಮದಿಂದ ಪರಿಶಿಷ್ಟ ಜಾತಿ ನಿರುದ್ಯೋಗಿ ಯುವಕರಿಗೆ 63 ಕೋಟಿ ರು. ವೆಚ್ಚದಲ್ಲಿ ಫಾಸ್ಟ್ ಫುಡ್ ಟ್ರಕ್, ಟ್ರೈಲರ್, ಮೊಬೈಲ್ ಕಿಚನ್ ಫುಡ್ ಕಿಯೋಸ್ಕ್ ಸೌಲಭ್ಯ ಕಲ್ಪಿಸುವ ಬಗ್ಗೆ ಚರ್ಚೆಯಾಗಲಿದೆ.