ಸ್ಥಳಕ್ಕೆ ಪೊಲೀಸರ ಭೇಟಿ 
ರಾಜ್ಯ

ಮಂಗಳೂರಿನಲ್ಲಿ ಮನಕಲಕುವ ಘಟನೆ: ಮನೆಯಲ್ಲಿ ತಂದೆ-ತಾಯಿ ಶವವಾಗಿ ಪತ್ತೆ; ಗೋಗರೆದ 2 ವರ್ಷದ ಮಗು!

ಕಡಬ ತಾಲೂಕಿನ ಆಲಂಕಾರು ಸಮೀಪದ ಕಜೆಯಲ್ಲಿ ಈ ಮನಕಲಕುವ ಘಟನೆ ನಡೆದಿದ್ದು, ದಂಪತಿಯ ಎರಡು ವರ್ಷದ ಮಗು ಅನಾಥವಾಗಿದೆ.

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಕಡಬ ತಾಲೂಕಿನಲ್ಲಿ ಹೃದಯವಿದ್ರಾವಕ ಘಟನೆ ನಡೆದಿದ್ದು, ಪತಿ ಮತ್ತು ಪತ್ನಿ ಮನೆಯಲ್ಲಿ ಶವವಾಗಿ ಪತ್ತೆಯಾಗಿರುವ ಘಟನೆ ಶನಿವಾರ ಬೆಳಕಿಗೆ ಬಂದಿದೆ.

ಕಡಬ ತಾಲೂಕಿನ ಆಲಂಕಾರು ಸಮೀಪದ ಕಜೆಯಲ್ಲಿ ಈ ಮನಕಲಕುವ ಘಟನೆ ನಡೆದಿದ್ದು, ದಂಪತಿಯ ಎರಡು ವರ್ಷದ ಮಗು ಅನಾಥವಾಗಿದೆ.

ಮೃತ ದಂಪತಿಯನ್ನು ಬಜಗೋಳಿ ಮೂಲದ ದಿನೇಶ್ ಹಾಗೂ ಸಿದ್ದಕಟ್ಟೆ ನಿವಾಸಿ ಸಂಗೀತಾ ಎಂದು ಗುರುತಿಸಲಾಗಿದ್ದು, ಪತ್ನಿಯನ್ನು ಹತ್ಯೆ ಮಾಡಿದ ಬಳಿಕ ಪತಿ ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆ ವ್ಯಕ್ತವಾಗಿದೆ. ಘಟನೆಯಿಂದ ಸ್ಥಳೀಯರು ಬೆಚ್ಚಿಬಿದ್ದಿದ್ದಾರೆ.

ಆಲಂಕಾರು ಪೇಟೆಯಲ್ಲಿ ದಿನೇಶ್ ಹೋಟೆಲ್ ವ್ಯವಹಾರ ನಡೆಸುತ್ತಿದ್ದರು. ಪತ್ನಿ ಸಂಗೀತಾ ಹಾಗೂ ಎರಡು ವರ್ಷದ ಹೆಣ್ಣು ಮಗುವಿನೊಂದಿಗೆ ಕಜೆಯ ಬಾಡಿಗೆ ಮನೆಯಲ್ಲಿ ದಿನೇಶ್ ವಾಸಿಸುತ್ತಿದ್ದರು. ಕೆಲ ದಿನಗಳಿಂದ ದಂಪತಿಯ ನಡುವೆ ಕುಟುಂಬ ಕಲಹ ನಡೆಯುತ್ತಿದ್ದು, ಸುಮಾರು ಒಂದು ತಿಂಗಳ ಹಿಂದೆ ಮನೆ ಬಿಟ್ಟಿದ್ದ ಅವರು ಶುಕ್ರವಾರ ಸಂಜೆ ಮತ್ತೆ ಮನೆಗೆ ಬಂದಿದ್ದರು ಎನ್ನಲಾಗಿದೆ.

ಶನಿವಾರ ಬೆಳಗ್ಗೆ ಮನೆಯಿಂದ ಯಾವುದೇ ಚಲನವಲನ ಕಾಣಿಸದ ಹಿನ್ನೆಲೆಯಲ್ಲಿ ಸ್ಥಳೀಯರು ಅನುಮಾನಗೊಂಡು ಪರಿಶೀಲಿಸಿದಾಗ ಘಟನೆ ಬೆಳಕಿಗೆ ಬಂದಿದೆ.

ತಂದೆ - ತಾಯಿ ಶವದ ಮುಂದೆ ಗೋಗರೆದ ಮಗು

ಮನೆಯೊಳಗೆ ಸಂಗೀತಾ ಮೃತ ಸ್ಥಿತಿಯಲ್ಲಿ ಕಂಡುಬಂದರೆ, ದಿನೇಶ್ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ಘಟನೆಯ ಸಂದರ್ಭದಲ್ಲಿ ಎರಡು ವರ್ಷದ ಮಗು ಮನೆಯಲ್ಲೇ ಅಳುತ್ತಾ ಇದ್ದುದಾಗಿ ಸ್ಥಳೀಯರು ತಿಳಿಸಿದ್ದಾರೆ.

ಮಾಹಿತಿ ತಿಳಿಯುತ್ತಿದ್ದಂತೆ ಕಡಬ ಪೊಲೀಸ್ ಠಾಣೆಯ ಉಪನಿರೀಕ್ಷಕ ಜಂಬುರಾಜ್ ಹಾಗೂ ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದಾರೆ.

ಪತಿ ಮತ್ತು ಪತ್ನಿ ಮೃತ ಘಟನೆಯ ಹಿನ್ನೆಲೆಯಲ್ಲಿ ಪ್ರದೇಶದಲ್ಲಿ ಶೋಕದ ವಾತಾವರಣ ನಿರ್ಮಾಣವಾಗಿದೆ. ಇನ್ನು ಎರಡು ವರ್ಷದ ಮಗು ಅನಾಥವಾಗಿರುವುದು ಸಾರ್ವಜನಿಕರ ಮನಕಲಕುವಂತೆ ಮಾಡಿದೆ.

ಘಟನಾ ಸ್ಥಳಕ್ಕೆ ಪೊಲೀಸ್ ಅಧಿಕಾರಿಗಳು ಆಗಮಿಸಿ, ಪರಿಶೀಲನೆ ನಡೆಸಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು, ವಿವಿಧ ಆಯಾಮಗಳಲ್ಲಿ ತನಿಖೆ ಮುಂದುವರಿಸಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಒಪ್ಪಂದದ ಹೊರತಾಗಿಯೂ ಲೆಬನಾನ್ ಮೇಲೆ ಇಸ್ರೇಲ್ ದಾಳಿ: ರೊಚ್ಚಿಗೆದ್ದ ಇರಾನ್; ಹಾರ್ಮುಜ್ ಜಲಸಂಧಿ ಮತ್ತೆ ಬಂದ್!

ರಕ್ತದೊತ್ತಡ: ನಟ ವಿನೋದ್ ಪ್ರಭಾಕರ್ ಆರೋಗ್ಯದಲ್ಲಿ ಏರುಪೇರು, ಆಸ್ಪತ್ರೆಗೆ ದಾಖಲು!

3rd ODI: 22 ವರ್ಷಗಳ ಹಳೆಯ ದಾಖಲೆ ಕೇವಲ 6 ಎಸೆತಗಳಲ್ಲಿ ಮುರಿದ ಭಾರತ

3rd ODI: ಆಫ್ಘಾನಿಸ್ತಾನ ವಿರುದ್ಧ ಭಾರತಕ್ಕೆ 9 ವಿಕೆಟ್ ಭರ್ಜರಿ ಜಯ, 3-0 ಅಂತರದಲ್ಲಿ ಏಕದಿನ ಸರಣಿ ಕ್ಲೀನ್ ಸ್ವೀಪ್!

ಪ್ರಿಯಾಂಕ್ ಖರ್ಗೆ 'ಹಳೇ ರೇಡಿಯೋ' ಇದ್ದಂತೆ; ಅವರ ಮಾತಿಗೆ ಕಿಮ್ಮತ್ತಿಲ್ಲ- ಕೇಂದ್ರ ಸಚಿವ ಪ್ರಲ್ಹಾದ ಜೋಶಿ