ಬೆಂಗಳೂರು: ಗ್ರಾಮ ಪಂಚಾಯಿತಿ ಮಟ್ಟದಲ್ಲೂ ‘ಗ್ಯಾರಂಟಿ ಸಮಿತಿ’ಗಳನ್ನು ರಚಿಸುವ ಮೂಲಕ ಕಾಂಗ್ರೆಸ್ ಸರ್ಕಾರದ ಬೊಕ್ಕಸವನ್ನು ಲೂಟಿ ಮಾಡಲು ಹೊರಟಿದೆ’ ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್.ಅಶೋಕ ಆರೋಪಿಸಿದ್ದಾರೆ.
‘ಗ್ಯಾರಂಟಿ ಸಮಿತಿ ಎಂದರೆ ಸಾರ್ವಜನಿಕರ ತೆರಿಗೆ ಹಣದಲ್ಲಿ ಕಾಂಗ್ರೆಸ್ನ ಅತೃಪ್ತ ನಾಯಕರು ಮತ್ತು ಕಾರ್ಯಕರ್ತರನ್ನು ಸಾಕುವ ‘ಗಂಜಿ ಕೇಂದ್ರವೇ’ ಎಂದು ಅವರು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರನ್ನು ಪ್ರಶ್ನಿಸಿದ್ದಾರೆ.
‘ಹಣವಿಲ್ಲದೆ ಅಭಿವೃದ್ಧಿ ಕಾರ್ಯಗಳು ನಿಂತಿವೆ. ಸರ್ಕಾರಿ ಶಾಲೆಗಳ ಮಕ್ಕಳು ಪಠ್ಯ ಪುಸ್ತಕ, ಸಮವಸ್ತ್ರಕ್ಕಾಗಿ ಕಾಯುತ್ತಿದ್ದಾರೆ. ಕುಸಿಯುತ್ತಿರುವ ಕೊಠಡಿಗಳ ದುರಸ್ತಿಗೆ, ಮೊಟ್ಟೆಗೂ ದುಡ್ಡಿಲ್ಲದ ದುಸ್ಥಿತಿ ಇದೆ. ರಾಗಿ ಬೆಳೆದ ರೈತರು ಬೆಂಬಲ ಬೆಲೆ ಬಾಕಿಗಾಗಿ ಕಚೇರಿಗಳಿಗೆ ಅಲೆಯುತ್ತಿದ್ದಾರೆ.
ಇಂತಹ ಪರಿಸ್ಥಿತಿಯಲ್ಲಿ ಸಾರ್ವಜನಿಕರ ಹಣವನ್ನು ಪಕ್ಷದ ನಿರುದ್ಯೋಗಿ ಕಾರ್ಯಕರ್ತರಿಗೆ, ಅತೃಪ್ತ ನಾಯಕರಿಗೆ ಉದ್ಯೋಗ ನೀಡಲು ಬಳಸಿಕೊಳ್ಳುತ್ತಿರುವುದು ನಾಚಿಕೆಗೇಡು’ ಎಂದಿದ್ದಾರೆ.
ಕಾಂಗ್ರೆಸ್ ಸರ್ಕಾರಕ್ಕೆ ಕಿಂಚಿತ್ತಾದರೂ ನಾಚಿಕೆ, ಮಾನ, ಮರ್ಯಾದೆ ಇದ್ದರೆ, ಈಗಿರುವ ನಾಲಾಯಕ್ ಗ್ಯಾರಂಟಿ ಸಮಿತಿಗಳನ್ನು ತಕ್ಷಣವೇ ವಿಸರ್ಜನೆ ಮಾಡಿ, ಈವರೆಗೂ ಕೊಟ್ಟಿರುವ ಸಂಬಳ ಮತ್ತು ಸವಲತ್ತುಗಳನ್ನು ವಾಪಸ್ ಪಡೆಯಬೇಕು’ ಎಂದು ಒತ್ತಾಯಿಸಿದ್ದಾರೆ.