ಮಂಗಳೂರು: ಮಂಗಳೂರು ಸಮೀಪದ ಸುರತ್ಕಲ್ ಬಳಿ ಅರಬ್ಬಿ ಸಮುದ್ರದಲ್ಲಿ ಬಿರುಗಾಳಿ ಮತ್ತು ಪ್ರಕ್ಷುಬ್ಧ ಸಮುದ್ರದ ನಡುವೆ ಸಂಕಷ್ಟಕ್ಕೆ ಸಿಲುಕಿ ಮುಳುಗುವ ಸ್ಥಿತಿಯಲ್ಲಿದ್ದ ದೋಣಿಯಲ್ಲಿದ್ದ ಆರು ಮೀನುಗಾರರನ್ನು ಯಶಸ್ವಿಯಾಗಿ ರಕ್ಷಿಸಲಾಗಿದೆ ಎಂದು ಭಾರತೀಯ ಕರಾವಳಿ ರಕ್ಷಣಾ ಪಡೆ(ICGS) ಮಂಗಳವಾರ ತಿಳಿಸಿದೆ.
ಜೂನ್ 29 ರಂದು ಸಂಜೆ 4 ಗಂಟೆ ಸುಮಾರಿಗೆ, ಕರಾವಳಿಯಿಂದ ಸುಮಾರು 33 ನಾಟಿಕಲ್ ಮೈಲು ದೂರದಲ್ಲಿರುವ ಭಾರತೀಯ ಮೀನುಗಾರಿಕಾ ದೋಣಿ ಮಂಜು ಮಾಥ್ ನಿಂದ ಅಪಾಯದ ಕರೆ ಬಂದಿತು ಎಂದು ICGS ಪ್ರಕಟಣೆಯಲ್ಲಿ ತಿಳಿಸಿದೆ.
ಸಮುದ್ರದಲ್ಲಿ ಬಿರುಗಾಳಿಯ ಪರಿಣಾಮವಾಗಿ ದೋಣಿಗೆ ಹಾನಿಯಾಗಿದ್ದು, ದೋಣಿಯೊಳಗೆ ನೀರು ನುಗ್ಗತೊಡಗಿದ್ದರಿಂದ ಅದರಲ್ಲಿದ್ದ ಎಲ್ಲ ಆರು ಮಂದಿ ಮೀನುಗಾರರು ಅಪಾಯಕ್ಕೆ ಸಿಲುಕಿದ್ದರು. ಹೀಗಾಗಿ ಕರಾವಳಿ ರಕ್ಷಣಾ ಪಡೆ ಹಡಗು 'ಐಸಿಜಿಎಸ್ ಸಚೇತ್' ತಕ್ಷಣ ಸಹಾಯಕ್ಕೆ ಧಾವಿಸಿತು.
ರಕ್ಷಣಾ ತಂಡವು 90 ನಿಮಿಷಗಳಲ್ಲಿ ಹಡಗನ್ನು ಅಪಾಯದಲ್ಲಿದ್ದ ಮೀನುಗಾರಿಕೆ ಹಡಗನ್ನು ತಲುಪಿತು ಮತ್ತು ಪ್ರಕ್ಷುಬ್ಧ ಸಮುದ್ರದ, ಬಲವಾದ ಗಾಳಿ, ಕಳಪೆ ಗೋಚರತೆ ಮತ್ತು ಕತ್ತಲೆ ಸಮೀಪಿಸುತ್ತಿರುವುದರ ನಡುವೆ, ಅತ್ಯಂತ ಸವಾಲಿನ ಪರಿಸ್ಥಿತಿಯಲ್ಲಿ ಕಾರ್ಯಾಚರಣೆ ನಡೆಸಿ ಮೀನುಗಾರರನ್ನು ರಕ್ಷಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ರಕ್ಷಿಸಲ್ಪಟ್ಟ ಮೀನುಗಾರರನ್ನು ನವಮಂಗಳೂರಿಗೆ ಕರೆತರಲಾಗಿದ್ದು, ಅಗತ್ಯ ವಿಧಿವಿಧಾನಗಳು ಪೂರ್ಣಗೊಳ್ಳುವವರೆಗೆ ಅವರಿಗೆ ಆಶ್ರಯ ನೀಡಲಾಗುತ್ತಿದೆ.
ಮಂಜು ಮಾತ್ ಹಡಗು ಉಡುಪಿಯಲ್ಲಿ ನೋಂದಾಯಿಸಲ್ಪಟ್ಟಿದೆ. 10.97 ಮೀಟರ್ ಉದ್ದದ ಫೈಬರ್ಗ್ಲಾಸ್ ಹಡಗನ್ನು 2019 ರಲ್ಲಿ ನಿರ್ಮಿಸಲಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.