ಗದಗ: ಲಕ್ಷ್ಮೇಶ್ವರ ಹೊರವಲಯದ ಜಮೀನಲ್ಲಿ ಯುವಕನೋರ್ವನನ್ನು ಕತ್ತು ಕೊಯ್ದು ಬರ್ಬರವಾಗಿ ಹತ್ಯೆ ಮಾಡಲಾಗಿತ್ತು. ಕೊಲೆಯ ಜಾಡು ಹಿಡಿದು ಬೆನ್ನತ್ತಿದ ಪೊಲೀಸರಿಗೆ ಇದೀಗ ಆರೋಪಿಗಳು ಸಿಕ್ಕಿಬಿದ್ದಿದ್ದಾರೆ. 25 ವರ್ಷದ ಫಾರೂಕ್ ಸನದಿಯನ್ನು ಬರ್ಬರವಾಗಿ ಹತ್ಯೆ ಮಾಡಲಾಗಿತ್ತು. ಕೊಲೆಗೆ ಕಾರಣ ನಿಶ್ಚಿತಾರ್ಥ ಎಂದು ತಿಳಿದುಬಂದಿದೆ.
ಹೌದು... ಫಾರೂಕ್ ಮೂರು ತಿಂಗಳ ಹಿಂದೆ ಯುವತಿ ಜೊತೆಗೆ ನಿಶ್ಚಿತಾರ್ಥ ಮಾಡಿಕೊಂಡಿದ್ದನು. ಇದೇ ಕಾರಣಕ್ಕೆ ಫಾರೂಕ್ ನನ್ನು ಯುವತಿಯ ಪ್ರಿಯಕರ ದಾವಲಸಾಬ್ ತನ್ನ ಸ್ನೇಹಿತ ಮಕ್ಕಬೂಲ್ ಸಾಬ್ ಜೊತೆ ಸೇರಿಕೊಂಡು ಕೊಲೆ ಮಾಡಿದ್ದಾನೆ.
ತನ್ನ ಪ್ರೇಯಸಿ ಜೊತೆ ನಿಶ್ಚಿತಾರ್ಥ ಮಾಡಿಕೊಂಡಿದ್ದ ವಿಷಯ ತಿಳಿದ ದಾವಲಸಾಬ್, ಮಾತನಾಡಬೇಕೆಂದು ಗದಗ ಜಿಲ್ಲೆ ಲಕ್ಷ್ಮೇಶ್ವರ ಶಿಗ್ಲಿ ಗ್ರಾಮದ ನಿವಾಸಿಯಾದ ಫಾರೂಕ್ ನನ್ನು ಜಮೀನಿಗೆ ಕರೆಯಿಸಿಕೊಂಡಿದ್ದನು. ಈ ವೇಳೆ ಮಾತಿಗೆ ಮಾತು ಬೆಳೆದು ಇಬ್ಬರ ನಡುವೆ ಗಲಾಟೆಯಾಗಿದೆ. ಈ ವೇಳೆ ಕೋಪದಲ್ಲಿ ದಾವಲಸಾಬ್ ಕೊಡಲಿಯಿಂದ ಫಾರೂಕ್ ನನ್ನು ಕೊಚ್ಚಿ ಕೊಲೆ ಮಾಡಿ ಪರಾರಿಯಾಗಿದ್ದರು.