ಬೆಂಗಳೂರು: ಬೆಂಗಳೂರಿನಲ್ಲಿ ಕಸದ ಸಮಸ್ಯೆ ದೊಡ್ಡ ತಲೆನೋವಾಗಿ ಪರಿಣಮಿಸಿದೆ. ಪಾಲಿಕೆ ಎಷ್ಟೇ ನಿಯಮಗಳನ್ನು ಜಾರಿಗೆ ತಂದರೂ ಜನರು ಮಾತ್ರ ನಿರ್ಲಕ್ಷ್ಯ ತೋರುತ್ತಲೇ ಇದ್ದಾರೆ.
ಈ ಇಂತಹ ನಡವಳಿಕೆಗೆ ಕಡಿವಾಣ ಹಾಕಲು ಬೆಂಗಳೂರು ಘನತ್ಯಾಜ್ಯ ನಿರ್ವಹಣಾ ಲಿಮಿಟೆಡ್ (BSWML) ಮುಂದಾಗಿದೆ.
ಮಿಶ್ರ ಕಸ ಹಾಕುವವರಿಗೆ ದಂಡ ವಿಧಿಸುವುದೂ ಅಲ್ಲದೆ, ಅವರ ಮನೆಯ ಮುಂದೆಯೇ ಲೋಡ್ ಕಸವನ್ನು ಸುರಿಯಲು ನಿರ್ಧರಿಸಿದೆ.
ನಗರದಲ್ಲಿ ದಿನಕ್ಕೆ ಸುಮಾರು 5,500 ಮೆಟ್ರಿಕ್ ಟನ್ ಕಸ ಉತ್ಪತ್ತಿಯಾಗುತ್ತಿದೆ. ಇದರಲ್ಲಿ ಕೇವಲ 2,300 ಟನ್ ಮಾತ್ರ ವಿಂಗಡಿತ ತ್ಯಾಜ್ಯ ಸಂಸ್ಕರಣಾ ಘಟಕಗಳಿಗೆ ಹೋಗುತ್ತಿದ್ದು, ಉಳಿದ ಕಸ ಬೆಳ್ಳಹಳ್ಳಿ ಪ್ರದೇಶಕ್ಕೆ ಕಳುಹಿಸಲಾಗುತ್ತಿದೆ.
ಮೇ ತಿಂಗಳೊಳಗೆ ಮತ್ತಷ್ಟು 1,500 ಮೆಟ್ರಿಕ್ ಟನ್ ವಿಂಗಡಿತ ತ್ಯಾಜ್ಯವನ್ನು ಮರುಬಳಕೆಗಾಗಿ ಹೆಚ್ಚಿಸಲು ಉದ್ದೇಶಿಸಿದ್ದೇವೆ. ಈ ಸಂಬಂಧ ಗುತ್ತಿಗೆದಾರರು, ಹಿರಿಯ ಇಂಜಿನಿಯರ್ಗಳು ಮತ್ತು ಮಾರ್ಷಲ್ಗಳೊಂದಿಗೆ ಸಭೆ ನಡೆಸಲಾಗಿದೆ. ಮಿಶ್ರ ಕಸ ಸಂಗ್ರಹಿಸಿ ಕಳುಹಿಸುವ ಗುತ್ತಿಗೆದಾರರಿಗೆ ದಂಡ ವಿಧಿಸಲಾಗುತ್ತದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಮಿಶ್ರ ಕಸ ಸ್ವೀಕರಿಸದಂತೆ ಪೌರಕಾರ್ಮಿಕರಿಗೆ ಸೂಚಿಸಲಾಗುವುದು. ಪದೇ ಪದೇ ಮನವಿ ಮಾಡಿದರೂ ಮಿಶ್ರ ಕಸ ನೀಡುವ ನಿವಾಸಿಗಳ ಕುರಿತು ಮಾಹಿತಿ ನೀಡುವಂತೆ ಸೂಚಿಸಲಾಗುವುದು. ಜೊತೆಗೆ, ಆಟೋ ಟಿಪ್ಪರ್ಗಳಲ್ಲಿ ಕಸ ಮಿಶ್ರಣವಾಗುತ್ತಿದೆಯೇ ಎಂಬುದನ್ನು ಪರಿಶೀಲಿಸಲು ಪಾಲಿಕೆ ಇಂಜಿನಿಯರ್ಗಳಿಗೆ ನಿರ್ದೇಶನ ನೀಡಲಾಗಿದೆ.
ಕಸ ಸಂಗ್ರಹಣೆ ಮತ್ತು ವಿಂಗಡಣೆಯನ್ನು ಶಿಸ್ತಿನಲ್ಲಿಡಲು ತಪಾಸಣೆ ಮತ್ತು ಕಠಿಣ ಕ್ರಮ ಕೈಗೊಳ್ಳಲಾಗುತ್ತಿದೆ. ವಾರ್ಡ್ವಾರು ಕಸ ಸಂಗ್ರಹಣೆಯನ್ನು ಟ್ರ್ಯಾಕ್ ಮಾಡಲು ಸಾಫ್ಟ್ವೇರ್ ವ್ಯವಸ್ಥೆ ಕಲ್ಪಿಸಲಾಗಿದ್ದು, ತ್ಯಾಜ್ಯ ವಿಂಗಡಣೆಯ ಮಹತ್ವದ ಕುರಿತು ಜಾಗೃತಿ ಚಟುವಟಿಕೆಗಳನ್ನು ತೀವ್ರಗೊಳಿಸಲಾಗುತ್ತದೆ.
ಅಗತ್ಯವಿದ್ದರೆ ಮಿಶ್ರ ಕಸ ನೀಡುವವರ ಮನೆಬಾಗಿಲಿಗೆ ಕಸ ಸುರಿದು ಎಚ್ಚರಿಕೆ ನೀಡುವ ಕ್ರಮವೂ ಜಾರಿಯಾಗಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.