ಬೆಂಗಳೂರು: ರಾಜ್ಯದ ರಾಜಧಾನಿ ಬೆಂಗಳೂರು ನಗರವನ್ನು ಉಳಿಸಲು ವರ್ಷಕ್ಕೆ ಕನಿಷ್ಠ 10,000 ಕೋಟಿ ರೂ. ಅಗತ್ಯವಿದೆ, ಇಲ್ಲವಾದರೆ ನಗರ ಕುಸಿಯುವ ಪರಿಸ್ಥಿತಿ ಎದುರಿಸಲಿದೆ ಎಂದು ಬಿಜೆಪಿ ಎಚ್ಚರಿಸಿದೆ.
ವಿಧಾನಸಭೆಯಲ್ಲಿ ಮಾತನಾಡಿದ ಬಿಜೆಪಿ ಶಾಸಕ ಎಸ್.ಆರ್. ವಿಶ್ವನಾಥ್ ಅವರು, ನಗರ ಪಾಲಿಕೆಗೆ ತೀವ್ರ ಹಣಕಾಸು ಸಂಕಷ್ಟ ಎದುರಾಗಿದ್ದು, ಸಿಬ್ಬಂದಿಗೆ ಸಂಬಳ ನೀಡಲು ಸಹ ತೊಂದರೆ ಉಂಟಾಗಿದೆ. ರಸ್ತೆ ಗುಂಡಿ ತುಂಬುವ ಕೆಲಸಕ್ಕೂ ಹಣವಿಲ್ಲದ ಸ್ಥಿತಿ ನಿರ್ಮಾಣವಾಗಿದೆ ಎಂದು ಹೇಳಿದರು.
ಕಳೆದ ಐದು ವರ್ಷಗಳಿಂದ ಚುನಾಯಿತ ಪಾಲಿಕೆ ಆಡಳಿತ ಇಲ್ಲದಿರುವುದರಿಂದ, ಅಧಿಕಾರಿಗಳು ಆಡಳಿತ ನಡೆಸುತ್ತಿದ್ದಾರೆ. ಇದರಿಂದ ಪಾರದರ್ಶಕತೆ ಕೊರತೆ ಹಾಗೂ ಮಾಹಿತಿ ಹಂಚಿಕೆಯಲ್ಲಿ ಸಮಸ್ಯೆಗಳು ಎದುರಾಗುತ್ತಿವೆ ಎಂದು ಆರೋಪಿಸಿದರು.
ಬೆಂಗಳೂರು ಕೇವಲ 28 ಶಾಸಕರು ಮತ್ತು ಐದು ಸಂಸದರಿಗೆ ಸೀಮಿತವಲ್ಲ; ಇದು ರಾಜ್ಯದ ಆರ್ಥಿಕ ಹೃದಯವಾಗಿದೆ. ಇಲ್ಲಿ ಸಂಗ್ರಹವಾಗುವ ತೆರಿಗೆ ಆದಾಯದ ಬಹುಪಾಲು ರಾಜ್ಯದ ಇತರ ಭಾಗಗಳಿಗೆ ಹಂಚಿಕೆ ಆಗುತ್ತಿದೆ. ಆದ್ದರಿಂದ ನಗರದ ಅಭಿವೃದ್ಧಿಗೆ ಆದ್ಯತೆ ನೀಡಬೇಕು ಎಂದು ಒತ್ತಾಯಿಸಿದರು.
ಇದೇ ವೇಳೆ, ಸರ್ಕಾರದ ರೂ.17,000 ಕೋಟಿ ವೆಚ್ಚದ ಟನಲ್ ರಸ್ತೆ ಯೋಜನೆಗೂ ವಿಶ್ವನಾಥ್ ಅವರು ವಿರೋಧ ವ್ಯಕ್ತಪಡಿಸಿದರು.
BOOT (Build-Own-Operate-Transfer) ಮಾದರಿಯಲ್ಲಿ ಕೈಗೊಳ್ಳಲಿರುವ ಈ ಯೋಜನೆಗಾಗಿ 22.36 ಏಕರೆ ಭೂಮಿಯನ್ನು ಸ್ವಾಧೀನಪಡಿಸಿಕೊಂಡು 54 ವರ್ಷಗಳ ಕಾಲ ಗುತ್ತಿಗೆದಾರರಿಗೆ ನೀಡಲಾಗುತ್ತದೆ ಎಂದು ಆರೋಪಿಸಿದರು.
ಹಿಂದೆ ಮೈಸೂರು ರಾಜಕುಟುಂಬಕ್ಕೆ ಸೇರಿದ ಭೂಮಿಗೆ ಸಂಬಂಧಿಸಿದ ಪ್ರಕರಣದಲ್ಲಿ ರೂ.3,000 ಕೋಟಿ ಪರಿಹಾರ ನೀಡಬೇಕೆಂದು ಸುಪ್ರೀಂಕೋರ್ಟ್ ಸೂಚಿಸಿದ ಹಿನ್ನೆಲೆಯಲ್ಲಿ ಬಳ್ಳಾರಿ ರಸ್ತೆ ವಿಸ್ತರಣೆ ಯೋಜನೆ ಕೈಬಿಡಲಾಗಿತ್ತು. ಈಗಿನ ಪರಿಸ್ಥಿತಿಯಲ್ಲಿ ಈ ಹೊಸ ಯೋಜನೆ ಯಶಸ್ವಿಯಾಗುವುದು ಹೇಗೆ? ಎಂದು ಪ್ರಶ್ನಿಸಿದರು.
ಇದೇ ವೇಳೆ ಭವಿಷ್ಯದಲ್ಲಿ ಬೆಂಗಳೂರು ಗಂಭೀರ ಕುಡಿಯುವ ನೀರಿನ ಸಂಕಷ್ಟವನ್ನು ಎದುರಿಸಬಹುದು ಎಂದು ಅವರು ಎಚ್ಚರಿಸಿದರು.
ಮಂಡ್ಯದಲ್ಲಿ ಬೆಂಗಳೂರಿಗೆ ನೀರು ಪೂರೈಕೆಗೆ ವಿರೋಧ ಹೆಚ್ಚುತ್ತಿದೆ. ಜೊತೆಗೆ, ಎತ್ತಿನಹೊಳೆ ಯೋಜನೆ ಇನ್ನೂ ಸಕಲೇಶಪುರವನ್ನೂ ತಲುಪಿಲ್ಲ ಎಂದು ಹೇಳಿದರು.
ಬಳಿಕ ಕೋಲಾರಕ್ಕೆ ಶುದ್ಧೀಕರಿಸದ ನೀರು ಪೂರೈಕೆ ಆಗುತ್ತಿರುವ ಬಗ್ಗೆ ಆತಂಕ ವ್ಯಕ್ತಪಡಿಸಿದ ಅವರು, ಅದರಿಂದ ಬೆಳೆದ ತರಕಾರಿಗಳು ಹಾನಿಕಾರಕವಾಗುವ ಸಾಧ್ಯತೆ ಇದೆ ಎಂದರು.
ಜಾಗತಿಕ ಕಂಪನಿಗಳು ಶುದ್ಧ ನೀರಿಗೆ ಬೇಡಿಕೆ ಇಡುತ್ತಿರುವ ಹಿನ್ನೆಲೆಯಲ್ಲಿ ಈ ಸಮಸ್ಯೆಯನ್ನು ತಕ್ಷಣ ಪರಿಹರಿಸಬೇಕು ಎಂದು ಒತ್ತಾಯಿಸಿದರು.
ಇದೇ ವೇಳೆ ಮಾತನಾಡಿದ ಬೊಮ್ಮನಹಳ್ಳಿ ಶಾಸಕ ಸತೀಶ್ ರೆಡ್ಡಿ ತೆರಿಗೆ ಅಧಿಕಾರಿಗಳ ಕ್ರಮದ ವಿರುದ್ಧ ಕಿಡಿಕಾರಿದರು ಆಸ್ತಿ ತೆರಿಗೆ ಪಾವತಿಸದಿದ್ದಕ್ಕಾಗಿ ಮನೆ ಮಾಲೀಕರಿಗೆ ನೋಟಿಸ್ ನೀಡಲಾಗಿದೆ. ಮಾಲ್ಗಳಿಗೆ ಇದೇ ರೀತಿಯ ನೋಟಿಸ್ಗಳನ್ನು ನೀಡುವ ಧೈರ್ಯವಿದೆಯೇ ಎಂದು ಸವಾಲು ಹಾಕಿದರು. ಅವೈಜ್ಞಾನಿಕ ಕಸ ವಿಲೇವಾರಿ ಬಗ್ಗೆಯೂ ಅವರು ಮಾತನಾಡಿದರು.