ಬೆಂಗಳೂರು: ನೀರಾನೆ ದಾಳಿಯಿಂದ ಪಶುವೈದ್ಯೆ ಸಾವನ್ನಪ್ಪಿದ ಘಟನೆ ಬೆನ್ನಲ್ಲೇ ರಾಜ್ಯ ಸರ್ಕಾರ ಎಚ್ಚೆತ್ತುಕೊಂಡಿದ್ದು, ಪಶುವೈದ್ಯರ ಸುರಕ್ಷಿತ ಕಾರ್ಯನಿರ್ವಹಣೆಗೆ ಮಾನದಂಡ ಕಾರ್ಯವಿಧಾನ (SOP)ಗಳನ್ನು ರೂಪಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.
ನಿಧನರಾದ ಪಶುವೈದ್ಯೆ ಸಮೀಕ್ಷಾ ರೆಡ್ಡಿ ಅವರ ಮನೆಗೆ ಭೇಟಿ ನೀಡಿದ ಸಂದರ್ಭದಲ್ಲಿ ಸಚಿವ ಈಶ್ವರ್ ಖಂಡ್ರೆಯವರು ಪ್ರತಿಕ್ರಿಯೆ ನೀಡಿದರು.
ಸಮೀಕ್ಷಾ ರೆಡ್ಡಿ ಸಾವಿಗೆ ಕಾರಣವೇನು ಎಂಬುದರ ಕುರಿತು ವಿವರವಾದ ತನಿಖೆಯನ್ನು ಕೈಗೊಳ್ಳಲು ಸೂಚನೆಗಳನ್ನು ನೀಡಲಾಗಿದೆ ಎಂದು ಹೇಳಿದರು.
ಸಿಬ್ಬಂದಿ ಮತ್ತು ಪಶುವೈದ್ಯರು ಕರ್ತವ್ಯದಲ್ಲಿರುವಾಗ ಅವರ ಸುರಕ್ಷತೆ ಅತ್ಯಂತ ಮುಖ್ಯವಾಗಿರುತ್ತದೆ. ಅವರ ಕಾಳಜಿಗಳನ್ನು ಅರ್ಥಮಾಡಿಕೊಳ್ಳಲು ಪಶುವೈದ್ಯರನ್ನು ಸಂಪರ್ಕಿಸಲು ಅರಣ್ಯ ಮತ್ತು ಮೃಗಾಲಯ ಇಲಾಖೆ ಅಧಿಕಾರಿಗಳಿಗೆ ನಿರ್ದೇಶಿಸಲಾಗಿದೆ ಎಂದು ತಿಳಿಸಿದರು.
ಸಮೀಕ್ಷಾ ರೆಡ್ಡಿ ಅವರ ಕುಟುಂಬವು ಸ್ಮಾರಕ ನಿರ್ಮಿಸುವಂತೆ ಒತ್ತಾಯಿಸಿದ್ದು, ಕೆಲವರು ಆನೆಗೆ ಅವರ ಹೆಸರಿಡಬೇಕೆಂದು ಸೂಚಿಸಿದ್ದಾರೆ. ಈ ವಿಷಯವನ್ನು ಅಧಿಕಾರಿಗಳು ಮತ್ತು ಸರ್ಕಾರದೊಂದಿಗೆ ಚರ್ಚಿಸಿ ನಂತರ ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದು ಹೇಳಿದರು.
ಈ ನಡುವೆ ಪಶುವೈದ್ಯರ ಸುರಕ್ಷಿತ ಕಾರ್ಯನಿರ್ವಹಣೆಗೆ ಮಾನದಂಡ ಕಾರ್ಯವಿಧಾನ (SOP)ಗಳನ್ನು ರೂಪಿಸುವಂತೆ ಅಧಿಕಾರಿಗಳಿಗೆ ಈಶ್ವರ್ ಖಂಡ್ರೆಯವರು ಸೂಚನೆ ನೀಡಿದ್ದಾರೆ.
ಮಾನದಂಡ ಕಾರ್ಯವಿಧಾನದಲ್ಲಿ ಪಶುವೈದ್ಯರು ವನ್ಯಜೀವಿಗಳಿಗೆ ಚಿಕಿತ್ಸೆ ನೀಡುವಾಗ ಅನುಸರಿಸಬೇಕಾದ ಕ್ರಮಗಳು, ಅವರ ವೈಯಕ್ತಿಕ ಸುರಕ್ಷತೆ ಹಾಗೂ ಪ್ರಾಣಿಗಳ ಭದ್ರತೆ ಕುರಿತ ಅಂಶಗಳು ಒಳಗೊಂಡಿರಬೇಕು ಎಂದೂ ಸೂಚನೆ ನೀಡಿದ್ದಾರೆ.