ಬೆಂಗಳೂರು: ಬೆಂಗಳೂರು ಉತ್ತರ ತಾಲೂಕಿನ ಜಾರಕಬಂಡೆ ಕಾವಲ್ ಪ್ರದೇಶದಲ್ಲಿರುವ 452 ಏಕರೆ ಅರಣ್ಯ ಭೂಮಿಯನ್ನು ಭಾರತೀಯ ವಾಯುಪಡೆಯಿಂದ ಮರಳಿ ಪಡೆಯಲಾಗುತ್ತದೆ ಎಂದು ಅರಣ್ಯ ಸಚಿವ ಈಶ್ವರ್ ಖಂಡ್ರೆಯವರು ಗುರುವಾರ ಹೇಳಿದ್ದಾರೆ.
ಈ ವಿಚಾರವಾಗಿ ವಿಧಾನಸಭೆಯಲ್ಲಿ ಪ್ರತಿಪಕ್ಷ ನಾಯಕ ಆರ್.ಅಶೋಕ್ ಅವರು ಮಾತನಾಡಿ, ರಾಮಕೃಷ್ಣ ಹೆಗಡೆ ಸರ್ಕಾರದ ಅವಧಿಯಲ್ಲಿ ಈ ಭೂಮಿಯನ್ನು ತಪ್ಪಾಗಿ ಕಂದಾಯ ಇಲಾಖೆ ಭೂಮಿಯೆಂದು ಪರಿಗಣಿಸಿ ವಾಯುಪಡೆಗೆ ನೀಡಲಾಗಿದೆ ಎಂದು ಆರೋಪಿಸಿದರು.
ಈಗ ಈ ಅರಣ್ಯ ಭೂಮಿಯನ್ನು ರಕ್ಷಿಸುವುದು ಅತ್ಯಗತ್ಯ. ಅರಣ್ಯ ಪ್ರದೇಶದಲ್ಲಿ ಯಾವುದೇ ಅಭಿವೃದ್ಧಿ ಯೋಜನೆಗಳಿಗೆ ಅವಕಾಶ ನೀಡಬಾರದು. ಇದಕ್ಕೆ ಸಂಬಂಧಿಸಿದಂತೆ ನ್ಯಾಯಾಲಯದ ಆದೇಶಗಳೂ ಇವೆ ಎಂದು ಅವರು ಹೇಳಿದರು.
ಇದಕ್ಕೆ ಉತ್ತರ ನೀಡಿದ ಸಚಿವರು, 1987ರಲ್ಲಿ ಭಾರತೀಯ ವಾಯುಪಡೆಗೆ ನೀಡಲಾಗಿದ್ದ ಈ ಭೂಮಿಯನ್ನು 2017ರಲ್ಲಿ ರದ್ದುಪಡಿಸಲಾಗಿದ್ದರೂ, ಈಗಲೂ ಜಾರಕಬಂಡೆ ಹಾಗೂ ಪೀಣ್ಯಾ ಪ್ರದೇಶ ಸೇರಿ ಒಟ್ಟು 452 ಏಕರೆಗೂ ಹೆಚ್ಚು ಅರಣ್ಯ ಭೂಮಿ ವಾಯುಪಡೆಯ ವಶದಲ್ಲೇ ಇದೆ ಎಂದು ಹೇಳಿದರು. ಇದಲ್ಲದೆ, ಪೀಣ್ಯಾ ಪ್ಲಾಂಟೇಶನ್ ಪ್ರದೇಶದಲ್ಲಿರುವ 58.08 ಏಕರೆ ಭೂಮಿಯನ್ನು ಬಿಎಂಆರ್'ಸಿಎಲ್ ಗೆ ಹಸ್ತಾಂತರಿಸಿ ಮೆಟ್ರೋ ಯೋಜನೆ ಜಾರಿಗೆ ತಂದಿರುವುದನ್ನು ಕಾನೂನು ಉಲ್ಲಂಘನೆ ಎಂದು ಪರಿಗಣಿಸಲಾಗಿದ್ದು, ಆ ಹಣವನ್ನು ಕೂಡ ವಾಪಸ್ ಪಡೆಯಲಾಗುತ್ತದೆ ಎಂದು ತಿಳಿಸಿದರು.
ಈ ಭೂಮಿಯನ್ನು ಮುಂದುವರೆಸಿ ಬಳಸಬೇಕಾದರೆ ವಾಯುಪಡೆ ಅರಣ್ಯ (ಸಂರಕ್ಷಣೆ) ಕಾಯ್ದೆ-1980 ಅಡಿಯಲ್ಲಿ ನಿಯಮಿತಗೊಳಿಸಲು ಅರ್ಜಿ ಸಲ್ಲಿಸಬೇಕಾಗಿತ್ತು. ಈ ಕುರಿತು 2018ರಲ್ಲಿ ಮುಖ್ಯ ಕಾರ್ಯದರ್ಶಿಗಳು ರಕ್ಷಣಾ ಇಲಾಖೆಗೆ ಪತ್ರ ಬರೆದಿದ್ದರೂ, ಇದುವರೆಗೆ ಯಾವುದೇ ಅರ್ಜಿ ಸಲ್ಲಿಸಿಲ್ಲ.
ಇದಲ್ಲದೆ, ಬೆಂಗಳೂರು ಉತ್ತರ ತಾಲ್ಲೂಕಿನ ಯಲಹಂಕ ಹೋಬಳಿಯ ಗಂಟಿಗಾನಹಳ್ಳಿ ಗ್ರಾಮದ ಸರ್ವೇ ನಂ.47 ಮತ್ತು 48ರಲ್ಲಿ ಇರುವ 159 ಏಕರೆ 29 ಗುಂಟೆ ಭೂಮಿಯೂ ಅರಣ್ಯ ಪ್ರದೇಶವಾಗಿದ್ದು, ಇಲ್ಲಿ ಪ್ರತಿವರ್ಷ ಏರ್ ಶೋ ನಡೆಯುತ್ತಿದೆ ಎಂದು ಸಚಿವರು ಮಾಹಿತಿ ನೀಡಿದರು.