ಬೆಂಗಳೂರು: ಬೆಂಗಳೂರಿನ ಪ್ರಸಿದ್ಧ ಪಿಇಎಸ್ ವಿಶ್ವವಿದ್ಯಾಲಯನಲ್ಲಿ ಪ್ರೊಫೆಸರ್ ವಿರುದ್ಧ ಗಂಭೀರ ಆರೋಪ ಕೇಳಿಬಂದು ಆಡಳಿತ ಮಂಡಳಿ ಅವರನ್ನು ಸೇವೆಯಿಂದ ವಜಾಗೊಳಿಸಿದ ಘಟನೆ ನಡೆದಿದೆ.
ಬೆಂಗಳೂರಿನ ಬನಶಂಕರಿ ರಿಂಗ್ ರೋಡ್ನಲ್ಲಿರುವ ಪಿಇಎಸ್ ಕ್ಯಾಂಪಸ್ನಲ್ಲಿ ಪಾಠ ಮಾಡುತ್ತಿದ್ದ ವೇಳೆ ಕೋಪಗೊಂಡ ಪ್ರೊಫೆಸರ್ ಡಾ. ಮುರಳೀಧರ ದೇಶಪಾಂಡೆ ತರಗತಿಯಲ್ಲಿದ್ದ ಅಫ್ಫಾನ್ ಎಂಬ ಮುಸ್ಲಿಂ ವಿದ್ಯಾರ್ಥಿಯನ್ನು ‘ಭಯೋತ್ಪಾದಕ’, ಟೆರರಿಸ್ಟ್ ಎಂದು ಕರೆದು ಅವಮಾನಿಸಿದ್ದಾರೆ ಎಂಬ ಆರೋಪ ಕೇಳಿಬಂದಿದೆ.
ಈ ಘಟನೆ ಮಾರ್ಚ್ 24ರಂದು ನಡೆದಿದ್ದು ಇಂದು ಸೋಷಿಯಲ್ ಮೀಡಿಯಾದಲ್ಲಿ ವಿಡಿಯೊ ವೈರಲ್ ಆಗಿ ವಿವಾದ ಉಂಟಾದ ಹಿನ್ನೆಲೆಯಲ್ಲಿ ವಿವಿ ಆಡಳಿತ ಮಂಡಳಿ ಸೇವೆಯಿಂದ ಅವರನ್ನು ವಜಾಗೊಳಿಸಿದೆ.
ಪಾಠದ ಮಧ್ಯದಲ್ಲಿ ಬಹುಶಃ ವಿದ್ಯಾರ್ಥಿಗಳು ಗಲಾಟೆ ಮಾಡಿರಬೇಕು, ಇದರಿಂದ ಪ್ರೊಫೆಸರ್ ಕೋಪಗೊಂಡು ಗರಂ ಆಗಿದ್ದು, ನೀವೆಲ್ಲಾ ಭಯೋತ್ಪಾದಕರು ಎಂದೆಲ್ಲಾ ನಿಂದಿಸಿದ್ದಾರೆ. ಇದೇ ವೇಳೆ ತರಗತಿಯಲ್ಲಿ ಕುಳಿತಿದ್ದ ವಿದ್ಯಾರ್ಥಿಗಳು ತಮ್ಮ ಮೊಬೈಲ್ನಲ್ಲಿ ಘಟನೆಯನ್ನು ಸೆರೆ ಹಿಡಿದಿದ್ದಾರೆ.
ಈ ವಿಡಿಯೊ ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಆಕ್ರೋಶಕ್ಕೆ ಕಾರಣವಾಗಿದೆ. ನ್ಯಾಷನಲ್ ಸ್ಟೂಡೆಂಟ್ಸ್ ಯೂನಿಯನ್ ಆಫ್ ಇಂಡಿಯಾ ಈ ಬಗ್ಗೆ ದೂರು ದಾಖಲಿಸಿದೆ. ಪ್ರಕರಣದ ಗಂಭೀರತೆಯನ್ನು ಗಮನಿಸಿದ ವಿಶ್ವವಿದ್ಯಾಲಯ ಆಡಳಿತವು ತಕ್ಷಣ ಕ್ರಮ ಕೈಗೊಂಡು ಪ್ರೊಫೆಸರ್ ಅವರನ್ನು ಅಮಾನತು ಮಾಡಿದೆ.
ಮಾರ್ಚ್ 24ರಂದು ಈ ಘಟನೆ ನಡೆದಿದ್ದು ಒಂದು ನಿಮಿಷದ ವಿಡಿಯೋದಲ್ಲಿ ದೇಶಪಾಂಡೆ ಅವರು ಟೆರರಿಸ್ಟ್ ಪದವನ್ನು ಹಲವು ಬಾರಿ ಬಳಸಿರುವುದು ಹಾಗೂ ಇತರ ಅವಮಾನಕಾರಿ ಭಾಷೆಯನ್ನು ಬಳಸಿರುವುದು ಕಾಣುತ್ತದೆ. ವಿದ್ಯಾರ್ಥಿಯೊಬ್ಬರ ದೂರು ಆಧರಿಸಿ, ಉಪಕುಲಪತಿಗಳ ಪತ್ರದ ಪ್ರಕಾರ, PES ವಿಶ್ವವಿದ್ಯಾಲಯವು ವಿವರವಾದ ತನಿಖೆ ನಡೆಯುವವರೆಗೆ ಅವರನ್ನು ಅಮಾನತು ಮಾಡಿದೆ.
NSUI ಸಾರ್ವಜನಿಕ ಕ್ಷಮೆಯಾಚನೆ ಕೋರಿ ಪೊಲೀಸ್ ದೂರು ಸಲ್ಲಿಸಿದ್ದು, SIO ಎಫ್ಐಆರ್ ದಾಖಲಿಸಲು ಒತ್ತಾಯಿಸಿದೆ. ಪೊಲೀಸರು ಇನ್ನೂ ಅಧಿಕೃತ ಪ್ರಕರಣ ದಾಖಲಿಸದೇ, ನ್ಯಾಯಾಲಯದ ಅನುಮತಿ ಇಲ್ಲದೆ ಪೊಲೀಸ್ ಕ್ರಮ ಕೈಗೊಳ್ಳಲಾದ ಅಪರಾಧ ವರದಿ ದಾಖಲಿಸಿದ್ದಾರೆ.
ಪ್ರೊಫೆಸರ್ ಹೇಳಿದ್ದೇನು?
“ನಿನಗೆ ನಾಚಿಕೆ ಇಲ್ಲವೇ?” ಎಂದು ಪ್ರೊಫೆಸರ್ ದೇಶಪಾಂಡೆ ವಿದ್ಯಾರ್ಥಿಗೆ ಕೈತೋರಿಸಿ ಕೇಳುತ್ತಿರುವುದು ವಿಡಿಯೊದಲ್ಲಿ ದಾಖಲಾಗಿದೆ. ನಾನು ಇವತ್ತು ಕ್ಲಾಸಿನಲ್ಲಿ ಸಿಟ್ಟಾಗಬಾರದು ಎಂದು ಭಾವಿಸಿಕೊಂಡಿದ್ದೆ. ನಿಮ್ಮಂಥವರಿಂದಲೇ ಇರಾನ್ ಯುದ್ಧದ ರೀತಿಯ ಘಟನೆಗಳು ನಡೆಯುವುದು, ಡೊನಾಲ್ಡ್ ಟ್ರಂಪ್ ಬಂದು ನಿನ್ನಂಥವರನ್ನು ಕರೆದುಕೊಂಡು ಹೋಗುತ್ತಾರೆ, ನೀನು ನರಕಕ್ಕೆ ಹೋಗ್ತೀಯಾ ಎಂದು ಸಿಟ್ಟಿನಿಂದ ಬೈದಿದ್ದಾರೆ.
ವಿದ್ಯಾರ್ಥಿಯಿಂದ ದೂರು ಸ್ವೀಕರಿಸಲಾಗಿದೆ. ವಿಷಯದ ವಿವರವಾದ ತನಿಖೆ ಪೂರ್ಣಗೊಳ್ಳುವವರೆಗೆ ನಿಮಗೆ ತಕ್ಷಣದಿಂದಲೇ ಅಮಾನತು ವಿಧಿಸಲಾಗಿದೆ ಎಂದು PES ವಿಶ್ವವಿದ್ಯಾಲಯದ ಉಪಕುಲಪತಿಗಳು ಸಹಿ ಮಾಡಿರುವ ಪತ್ರದಲ್ಲಿ, ಅಪರಾಧದ ವಿವರವನ್ನು ಉಲ್ಲೇಖಿಸದೆ ಹೇಳಲಾಗಿದೆ.