ಬೆಂಗಳೂರು: ವಿಜ್ಞಾನ ಶಿಕ್ಷಣದಲ್ಲಿ ಬೆಂಗಳೂರಿನ ಪ್ರಯೋಗ್ ಇನ್ಸ್ಟಿಟ್ಯೂಟ್ ಆಫ್ ಎಜುಕೇಶನ್ ರಿಸರ್ಚ್ ಸಂಸ್ಥೆಯ ಅನ್ವೇಷಣಾ’ ಯೋಜನೆಗೆ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಭಾನುವಾರ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ತಮ್ಮ ಮಾಸಿಕ ರೇಡಿಯೋ ಕಾರ್ಯಕ್ರಮ 'ಮನ್ ಕಿ ಬಾತ್'ನ 132ನೇ ಸಂಚಿಕೆಯಲ್ಲಿಂದು ಮಾತನಾಡಿದ ಅವರು, ಶಾಲಾ ಮಟ್ಟದಲ್ಲೇ ಸಂಶೋಧನೆ ಆಧಾರಿತ ಕಲಿಕೆಯನ್ನು ಉತ್ತೇಜಿಸುವ ಈ ಕಾರ್ಯಕ್ರಮವು ವಿದ್ಯಾರ್ಥಿಗಳಲ್ಲಿ ವಿಜ್ಞಾನಾಸಕ್ತಿ ಬೆಳೆಸುವಲ್ಲಿ ಮಹತ್ವದ ಪಾತ್ರ ವಹಿಸುತ್ತಿದೆ ಎಂದು ಹೇಳಿದರು.
‘ಅನ್ವೇಷಣಾ’ ಯೋಜನೆಯ ಮೂಲಕ 9ರಿಂದ 12ನೇ ತರಗತಿಯ ವಿದ್ಯಾರ್ಥಿಗಳಿಗೆ ರಸಾಯನಶಾಸ್ತ್ರ, ಭೂ ವಿಜ್ಞಾನ ಹಾಗೂ ಆರೋಗ್ಯ ವಿಜ್ಞಾನ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಸಂಶೋಧನಾ ಅನುಭವ ಪಡೆಯುವ ಅವಕಾಶ ಕಲ್ಪಿಸಲಾಗುತ್ತಿದೆ. ಈ ಯೋಜನೆಯಿಂದ ವಿದ್ಯಾರ್ಥಿಗಳಿಗೆ ತಮ್ಮ ಸಂಶೋಧನೆಗಳನ್ನು ಪ್ರಕಟಿಸುವ ವೇದಿಕೆಯೂ ಲಭ್ಯವಾಗುತ್ತಿದೆ ಎಂದು ತಿಳಿಸಿದರು.
ಇದೇ ವೇಳೆ ವಿದ್ಯಾರ್ಥಿಗಳಲ್ಲಿ ವಿಜ್ಞಾನ ವಿಷಯದ ಭಯದ ಬಗ್ಗೆ ಮಾತನಾಡಿದ ಪ್ರಧಾನಿ, “ಕೆಲವರು ವಿಜ್ಞಾನ ಕಲಿಯಲು ಇಷ್ಟಪಟ್ಟರೂ ಭಯದಿಂದ ಹಿಂದೆ ಸರಿಯುತ್ತಾರೆ. ಇಂತಹ ಯೋಜನೆಗಳು ಅವರಲ್ಲಿ ಆತ್ಮವಿಶ್ವಾಸ ಹೆಚ್ಚಿಸಿ, ಪ್ರಾಯೋಗಿಕವಾಗಿ ಕಲಿಯಲು ಪ್ರೇರೇಪಿಸುತ್ತವೆ” ಎಂದು ಹೇಳಿದರು.
ಕೈಹಿಡಿದು ಕಲಿಸುವ ವಿಧಾನದಿಂದ ವಿದ್ಯಾರ್ಥಿಗಳಲ್ಲಿ ಕುತೂಹಲ ಮತ್ತು ಆಸಕ್ತಿ ಸಹಜವಾಗಿ ಬೆಳೆಯುತ್ತದೆ ಎಂಬುದನ್ನೂ ಅವರು ಒತ್ತಿ ಹೇಳಿದರು.
2022ರಲ್ಲಿ ಆರಂಭವಾದ ಈ ಅನ್ವೇಷಣಾ ಯೋಜನೆ, ವಿದ್ಯಾರ್ಥಿಗಳಿಗೆ ಮಾರ್ಗದರ್ಶಕರ ನೆರವಿನಿಂದ ನೇರ ಸಂಶೋಧನಾ ಕಾರ್ಯಗಳಲ್ಲಿ ತೊಡಗಿಸಿಕೊಳ್ಳುವ ಅವಕಾಶ ನೀಡುತ್ತಿದೆ. ಇದೂವರೆಗೆ ಹಲವಾರು ವಿದ್ಯಾರ್ಥಿಗಳ ಸಂಶೋಧನಾ ಪ್ರಬಂಧಗಳು ಅಂತಾರಾಷ್ಟ್ರೀಯ ಜರ್ನಲ್ಗಳಲ್ಲಿ ಪ್ರಕಟವಾಗಿರುವುದು ಗಮನಾರ್ಹ ಸಾಧನೆಯಾಗಿದೆ.
ಕರ್ನಾಟಕದ ಗ್ರಾಮೀಣ ಭಾಗದ ನಾಲ್ವರು ವಿದ್ಯಾರ್ಥಿಗಳು ಈ ಯೋಜನೆಯಡಿ ಸಸ್ಯ ಆಧಾರಿತ ವಿಧಾನದಿಂದ ತಾಮ್ರ ಆಕ್ಸೈಡ್ ನ್ಯಾನೋ ಕಣಗಳ ತಯಾರಿಕೆ ಕುರಿತು ಸಂಶೋಧನೆ ನಡೆಸಿದ್ದು, ಅವರ ಕೆಲಸ ಅಂತಾರಾಷ್ಟ್ರೀಯ ಜರ್ನಲ್ನಲ್ಲಿ ಪ್ರಕಟಗೊಂಡಿದೆ. ಈ ಸಾಧನೆಗಾಗಿ ಅವರಿಗೆ ರಾಜ್ಯ ಸರ್ಕಾರದಿಂದ ಸನ್ಮಾನವೂ ದೊರಕಿದೆ.