ಬೆಂಗಳೂರು: ಹುಟ್ಟುಹಬ್ಬದ ಖುಷಿ ಮನೆಯನ್ನೆಲ್ಲ ಆವರಿಸಬೇಕಿದ್ದ ಸಮಯದಲ್ಲಿ, ಆರು ವರ್ಷದ ಪುಟ್ಟ ಬಾಲಕಿಯ ಸಾವಿನ ಸುದ್ದಿ ಆ ಕುಟುಂಬದ ಬದುಕನ್ನೇ ಕತ್ತಲೆಯಲೆಗೆ ದೂಡಿದೆ.
ಮೇ 3ರಂದು ತನ್ನ ಹುಟ್ಟುಹಬ್ಬವನ್ನು ಸಂಭ್ರಮಿಸಲು ಕಾಯುತ್ತಿದ್ದ ಮುಸವೀರ್ ಬೇಗಂ, ಹೊಸ ಬಟ್ಟೆ ಖರೀದಿಸಲು ಹೋದಾಗ ರಕ್ಕಸ ಮಳೆ ಆಕೆಯನ್ನು ಬಲಿಪಡೆದುಕೊಂಡಿದೆ.
ಬಾಲಕಿಯ ಹುಟ್ಟುಹಬ್ಬ ಹಿನ್ನೆಲೆಯಲ್ಲಿ ತಾಯಿ ಮುಬೀನ್ ತಾಜ್ ಹಾಗೂ ಅತ್ತೆ ತಬ್ರೀನ್ ತಾಜ್ ಜೊತೆ ಶಿವಾಜಿನಗರಕ್ಕೆ ಹೊಸ ಬಟ್ಟೆ ಖರೀದಿಸಲು ತೆರಳಿದ್ದಳು. ಮಳೆಯ ತೀವ್ರತೆಯಿಂದ ಬೌರಿಂಗ್ ಆಸ್ಪತ್ರೆ ಕಾಂಪೌಂಡ್ ಬಳಿ ಆಶ್ರಯ ಪಡೆದಿದ್ದರು. ಆದರೆ, ಕಾಂಪೌಂಡ್ ಗೋಡೆ ಏಕಾಏಕಿ ಕುಸಿದು ಮೂವರ ಮೇಲೂ ಬಿದ್ದಿದೆ. ಪರಿಣಾಮವಾಗಿ ಮುಸವೀರ್ ಸ್ಥಳದಲ್ಲೇ ಮೃತಪಟ್ಟಿದ್ದು, ತಾಯಿ ಮತ್ತು ಆಕೆಯ ಅಜ್ಜಿ ಗಾಯಗೊಂಡು ಚಿಕಿತ್ಸೆ ಪಡೆಯುತ್ತಿದ್ದಾರೆ.
ಮನೆಗೆ ಹಿಂದಿರುಗಬೇಕಿದ್ದ ಪುಟ್ಟ ಬಾಲಕಿ ಇನ್ನು ಮುಂದೆ ಬರುವುದಿಲ್ಲ ಎಂಬ ನಿಜವನ್ನು ಒಪ್ಪಿಕೊಳ್ಳಲು ಕುಟುಂಬ ಇನ್ನೂ ಸಿದ್ಧವಾಗಿಲ್ಲ. ತಮ್ಮ ಏಕೈಕ ಮಗಳನ್ನು ಕಳೆದುಕೊಂಡ ತಾಯಿ-ತಂದೆಯ ನೋವು ಮುಗಿಲು ಮುಟ್ಟಿದೆ.
1ನೇ ತರಗತಿಯ ವಿದ್ಯಾರ್ಥಿನಿಯಾಗಿದ್ದ ಮುಸವೀರ್ ಓದಿನಲ್ಲಿ ಚುರುಕಾಗಿದ್ದಳು, ಮುದ್ದಾದ ನಗುವಿನಿಂದ ಎಲ್ಲರ ಮನ ಗೆದ್ದಿದ್ದಳು. ಆಕೆಯ ಹುಟ್ಟುಹಬ್ಬದ ಸಂಭ್ರಮಕ್ಕೆ ಸಜ್ಜಾಗಿದ್ದ ಮನೆ, ಈಗ ಶೋಕಾಚರಣೆಯ ಮೌನದಲ್ಲಿ ಮುಳುಗಿದೆ.
ಮುಸವೀರ್ ಜೊತೆ ಆಟವಾಡುತ್ತಿದ್ದ ಸ್ನೇಹಿತರು, ಏನಾಯಿತು ಎಂಬುದೇ ತಿಳಿಯದೆ ಆತಂಕಕ್ಕೊಳಗಾಗಿದ್ದು, ‘ಅವಳು ಬರುತ್ತಾಳೆ’ ಎಂಬ ನಿರೀಕ್ಷೆಯಲ್ಲಿದ್ದ ಪುಟ್ಟ ಹೃದಯಗಳಿಗೆ, ಈ ಸುದ್ದಿ ದೊಡ್ಡ ಆಘಾತ ತಂದೊಡ್ಡಿದೆ.
ಒಂದು ಗೋಡೆಯ ಕುಸಿತ—ಒಂದು ಕುಟುಂಬದ ಕನಸುಗಳನ್ನೇ ಚೂರುಚೂರು ಮಾಡಿದೆ. ನಗರದಲ್ಲಿ ಮಳೆಯಾದಾಗ ಇಂತಹ ಅಪಾಯಕರ ಕಟ್ಟಡಗಳ ಬಗ್ಗೆ ಎಚ್ಚರಿಕೆ ಅಗತ್ಯವೆಂಬ ಸಂದೇಶವನ್ನು ಈ ಘಟನೆ ನೀಡಿದೆ.