ಚಿಕ್ಕಮಗಳೂರು: 2023ರ ಶೃಂಗೇರಿ ವಿಧಾನಸಭಾ ಕ್ಷೇತ್ರದ ಅಂಚೆ ಮತಗಳ ಮರು ಎಣಿಕೆ ಪ್ರಕ್ರಿಯೆ ಮುಕ್ತಾಯಗೊಂಡಿದ್ದು Congress ಅಭ್ಯರ್ಥಿ ಟಿಡಿ ರಾಜೇಗೌಡ ಅವರೇ ಮತ್ತೆ ಗೆಲುವು ಸಾಧಿಸಿದ್ದಾರೆ. ಚಿಕ್ಕಮಗಳೂರಿನ ಐಡಿಎಸ್ಜಿ ಕಾಲೇಜಿನಲ್ಲಿ ಬಿಗಿ ಪೊಲೀಸ್ ಭದ್ರತೆಯಲ್ಲಿ ಅಂಚೆ ಮತಗಳ ಮರು ಎಣಿಕೆ ಕಾರ್ಯ ನಡೆಯಿತು. ಈ ಹಿಂದೆ 201 ಮತಗಳ ಅಂತರದಿಂದ ಗೆಲುವು ಸಾಧಿಸಿದ್ದ ಟಿಡಿ ರಾಜೇಗೌಡ ತಮ್ಮ ಲೀಡ್ ಹೆಚ್ಚಿಸಿಕೊಂಡಿದ್ದು 203 ಮತಗಳಿಗೆ ತಲುಪಿದೆ.
2023ರಲ್ಲಿ 1,822 ಅಂಚೆ ಮತಗಳು ಚಲಾವಣೆಯಾಗಿದ್ದವು. ಅವುಗಳಲ್ಲಿ 279 ತಿರಸ್ಕರಿಸಲ್ಪಟ್ಟಿತ್ತು. ಇದರಲ್ಲಿ ಮೂರು ನೋಟಾ ಮತಗಳು ಇದ್ದವು. ಒಟ್ಟು 1,540 ಅಂಚೆ ಮತಗಳನ್ನು ಪರಿಗಣನೆಗೆ ತೆಗೆದುಕೊಳ್ಳಲಾಯಿತು. ರಾಜೇಗೌಡರನ್ನು 201 ಮತಗಳ ಕಡಿಮೆ ಅಂತರದಿಂದ ವಿಜೇತರೆಂದು ಘೋಷಿಸಲಾಯಿತು. ಎರಡನೇ ಸ್ಥಾನ ಪಡೆದ ಜೀವರಾಜ್ ಹೈಕೋರ್ಟ್ ಮೆಟ್ಟಿಲೇರಿದ್ದರು.
279 ಅಂಚೆ ಮತಗಳ ತಿರಸ್ಕಾರವು ಚುನಾವಣಾ ಫಲಿತಾಂಶದ ಬಗ್ಗೆ ಅನುಮಾನಗಳನ್ನು ಹುಟ್ಟುಹಾಕಿತ್ತು. ಏಪ್ರಿಲ್ 6 ರಂದು ಹೈಕೋರ್ಟ್ ತನ್ನ ಆದೇಶದಲ್ಲಿ ತಿರಸ್ಕೃತ 279 ಮತಗಳನ್ನು ಮರು ಪರಿಶೀಲಿಸುವಂತೆ ಮತ್ತು ಫಲಿತಾಂಶವನ್ನು ಹೊಸದಾಗಿ ಪ್ರಕಟಿಸುವ ಮೊದಲು ಎಲ್ಲಾ ಅಂಚೆ ಮತಪತ್ರಗಳನ್ನು ಮರುಎಣಿಕೆ ಮಾಡುವಂತೆ ಜಿಲ್ಲಾಡಳಿತಕ್ಕೆ ನಿರ್ದೇಶನ ನೀಡಿತ್ತು.