ಉಡುಪಿ: ಜಿಲ್ಲೆಯ ಕುಂದಾಪುರ ತಾಲೂಕಿನ ವಕ್ವಾಡಿ ಗ್ರಾಮದಲ್ಲಿ ಅಪರೂಪದ ಬೇಟೆಯ ವೀರಗಲ್ಲು ಪತ್ತೆಯಾಗಿದ್ದು, ಇದು ತುಳುನಾಡಿನ ಪುರಾತತ್ವ ಇತಿಹಾಸದಲ್ಲಿ ಮಹತ್ವದ ಸಂಶೋಧನೆಯಾಗಿದೆ.
ದಕ್ಷಿಣ ಭಾರತ ಹಾಗೂ ಕರ್ನಾಟಕದಲ್ಲಿ ವೀರಗಲ್ಲುಗಳು ಸಾಮಾನ್ಯವಾಗಿ ಕಂಡುಬರುವುದಾದರೂ, ತುಳು ಪ್ರದೇಶದಲ್ಲಿ ಇಂತಹ ಶಿಲೆಗಳು ಕಂಡು ಬರುವುದು ಬಹಳ ವಿರಳ.
ಪ್ರಸ್ತುತ ಪತ್ತೆಯಾಗಿರುವ ವೀರಗಲ್ಲು ತುಳುನಾಡಿನಲ್ಲಿ ಕಂಡುಬಂದ ಎರಡನೇ ವೀರಗಲ್ಲು ಶಾಸನವಾಗಿದೆ. ಮೊದಲನೇ ವೀರಗಲ್ಲು, ಹೆಬ್ರಿ ತಾಲ್ಲೂಕಿನ ಸೋಮೇಶ್ವರದಲ್ಲಿದೆಪತ್ತೆಯಾಗಿತ್ತು ಎಂದು ಪುರಾತತ್ವ ತಜ್ಞ ಪ್ರೊ. ಟಿ. ಮುರುಗೇಶಿ ತಿಳಿಸಿದ್ದಾರೆ. ಇವರ ಅಧೀನದಲ್ಲಿರುವ ‘ಅಡಿಮಾ ಕಲಾ ಟ್ರಸ್ಟ್’ ತಂಡ ಈ ಅನ್ವೇಷಣೆಯನ್ನು ನಡೆಸಿದೆ.
ಪ್ರಸ್ತುತ ಪತ್ತೆಯಾಗಿರುವ ಶಿಲ್ಪ ಸುಮಾರು 45 ಇಂಚು ಎತ್ತರ ಮತ್ತು 22.5 ಇಂಚು ಅಗಲ ಹೊಂದಿದ್ದು, ಈ ಚತುರ್ಭುಜಾಕಾರದ ಕಲ್ಲಿನ ಫಲಕದಲ್ಲಿ ಮೂರು ಹಂತಗಳ ಶಿಲ್ಪಾಕೃತಿಗಳು ಕೆತ್ತಲಾಗಿದೆ.
ಕೆಳಭಾಗದಲ್ಲಿ ಇಬ್ಬರು ವೀರರು ಬೇಟೆ ನಾಯಿಗಳನ್ನು ಹಿಡಿದಿರುವ ದೃಶ್ಯವಿದ್ದು, ಮಧ್ಯಭಾಗದಲ್ಲಿ ಇಬ್ಬರು ಯೋಧರು—ಒಬ್ಬನು ಬಿಲ್ಲು ಮತ್ತು ಮತ್ತೊಬ್ಬನು ಬಾಣ ಹಿಡಿದು ಜಿಂಕೆಯ ಕುತ್ತಿಗೆಯನ್ನು ಗುರಿಯಾಗಿಸಿಕೊಂಡಿರುವ ದೃಶ್ಯ ಕಂಡು ಬಂದಿದೆ.
ಇನ್ನು ಮೇಲ್ಭಾಗದಲ್ಲಿ ಲಿಂಗದ ಎರಡೂ ಬದಿಗಳಲ್ಲಿ ವೀರರು ಕುಳಿತು ನಮಸ್ಕಾರದ ಭಂಗಿ ಕುಳಿತಿರುವಂತೆ ಚಿತ್ರಿಸಲ್ಪಟ್ಟಿದ್ದು, ಅದರ ಮೇಲ್ಭಾಗದಲ್ಲಿ ದ್ರಾವಿಡ ಶೈಲಿಯ ವಿಮಾನದ ಚಿತ್ರಣವಿದೆ.
ಈ ವೀರಗಲ್ಲಿನಲ್ಲಿ ಯಾವುದೇ ಶಾಸನಗಳಿಲ್ಲದಿರುವುದರಿಂದ ನಿಖರ ಕಾಲಮಾನ ನಿರ್ಧಾರ ಕಷ್ಟವಾದರೂ, ಲಿಂಗದ ವಿನ್ಯಾಸವು 8 ರಿಂದ 10ನೇ ಶತಮಾನದ ಶೈವ ದೇವಾಲಯಗಳ ಮಾದರಿಯನ್ನು ಹೋಲುವುದರಿಂದ, ಈ ವೀರಗಲ್ಲು ಕ್ರಿ.ಶ. 9ನೇ–10ನೇ ಶತಮಾನಕ್ಕೆ ಸೇರಿದಿರಬಹುದು ಎಂದು ಅಂದಾಜಿಸಲಾಗಿದೆ.
ವೀರರ ಆಭರಣಗಳು—ಕಂಠಾಭರಣ, ಭುಜಕೀರ್ತಿ, ತೋಳ್ಬಂದಿ, ಕಡಗ, ಕಿವಿಯೋಲೆಗಳು ಹಾಗೂ ಚಿಕ್ಕ ಕತ್ತಿಗಳು—ಇವುಗಳ ಆಧಾರದ ಮೇಲೆ ಅವರು ಸಾಮಾನ್ಯ ಬೇಟೆಗಾರರಲ್ಲ, ಅಲೂಪ ವಂಶದ ರಾಜಕುಮಾರರಾಗಿರಬಹುದೆಂದು ತಜ್ಞರು ಹೇಳಿದ್ದಾರೆ.
ಸಾಮಾನ್ಯವಾಗಿ ಕಾಡುಹಂದಿ ಬೇಟೆಯ ಚಿತ್ರಣಗಳು ಹೆಚ್ಚು ಕಾಣಸಿಗುತ್ತವೆ. ಆದರೆ, ಜಿಂಕೆ ಬೇಟೆಯ ದೃಶ್ಯವನ್ನು ಚಿತ್ರಿಸಿರುವ ವೀರಗಲ್ಲುಗಳು ಪತ್ತೆಯಾಗುವುದು ಬಹಳ ಅಪರೂಪವಾಗಿದ್ದು, ಆದ್ದರಿಂದ ಈ ಪತ್ತೆ ಐತಿಹಾಸಿಕವಾಗಿ ವಿಶೇಷ ಮಹತ್ವ ಪಡೆದುಕೊಂಡಿದೆ.
ಇನ್ನೂ ವಿಶೇಷವೆಂದರೆ, ಕೊಂಬುಳ್ಳ ಜಿಂಕೆಗಳು ಇಂದಿಗೂ ಶ್ರೀ ಮೂಕಾಂಬಿಕಾ ವನ್ಯಜೀವಿ ಅರಣ್ಯ ಪ್ರದೇಶದಲ್ಲಿ ಕಾಣಿಸಿಕೊಳ್ಳುತ್ತಿದ್ದು, ಈ ವೀರಗಲ್ಲು ಆ ಪ್ರದೇಶದ ನೈಸರ್ಗಿಕ ಪರಂಪರೆಯೊಂದಿಗೆ ನೇರ ಸಂಬಂಧ ಹೊಂದಿದೆ ಎಂಬುದನ್ನು ಸೂಚಿಸುತ್ತದೆ.
ಈ ಪತ್ತೆ ತುಳುನಾಡಿನ ಯುದ್ಧ ಪರಂಪರೆ, ರಾಜವಂಶೀಯ ಸಂಸ್ಕೃತಿ ಹಾಗೂ ಪರಿಸರ ಇತಿಹಾಸವನ್ನು ಬೆಳಗಿಸುವ ಮಹತ್ವದ ಸಾಕ್ಷ್ಯವೆಂದು ಪ್ರೊ. ಮುರುಗೇಶಿ ಹೇಳಿದ್ದಾರೆ.