ಬರಹ: ಪ್ರಭಾಕರ್ ಕಾರಂತ್, ಹಿರಿಯ ಪತ್ರಕರ್ತರು
ಶೃಂಗೇರಿ: ಪಂಚರಾಜ್ಯಗಳ ಚುನಾವಣೆ ಫಲಿತಾಂಶದ ಭರಾಟೆಯಲ್ಲಿ ಶೃಂಗೇರಿ ವಿಧಾನಸಭಾ ಕ್ಷೇತ್ರದ ಮರು ಮತ ಎಣಿಕೆ ಸುದ್ದಿ ಅಡಿ ಬಿದ್ದಿದೆ. ,2023 ರ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ರಾಜೇಗೌಡ 59171 ಮತ ಪಡೆದು ವಿಜಯ ಗಳಿಸಿದ್ದರು.ಬಿಜೆಪಿಯ ಜೀವರಾಜ್ ಗಳಿಸಿದ್ದು 58970 ಮತಗಳು.ಗೆಲುವಿನ ಅಂತರ 201 ಮತಗಳು.
ಆಗ ಚಲಾವಣೆ ಆದ ಅಂಚೆ ಮತಗಳು 1822.ಇದರಲ್ಲಿ ಜೀವರಾಜ್ 692 ಮಾತ ಪಡೆದರೆ ರಾಜೇಗೌಡ 569 ಮತ ಗಳಿಸಿದ್ದರು.ಆಗ 279 ಮತ ತಿರಸ್ಕೃತ ಆಗಿತ್ತು.
ಗೆಲುವಿನ ಅಂತರ ತಿರಸ್ಕೃತ ಮತಗಳಿಗಿಂತ ಕಡಿಮೆ ಇದ್ದರೆ ಮರು ಎಣಿಕೆ ಕೇಳಬಹುದು.ಜೀವರಾಜ್ ಪರ ಚುನಾವಣಾ ಏಜೆಂಟರು ಮರು ಎಣಿಕೆ ಕೋರಿದರು.ಚುನಾವಣಾಧಿಕಾರಿ ನಿಯಮ ಮೀರಿ ಅದನ್ನು ತಿರಸ್ಕರಿಸಿ ರಾಜೇಗೌಡ ವಿಜೇತ ಅಭ್ಯರ್ಥಿ ಎಂದು ಘೋಷಿಸಿದರು.
ಇದರ ವಿರುದ್ಧ ಪರಾಜಿತ ಅಭ್ಯರ್ಥಿ ಜೀವರಾಜ್ ರಾಜ್ಯ ಉಚ್ಚ ನ್ಯಾಯಾಲಯದಲ್ಲಿ ರಿಟ್ ಅರ್ಜಿ ಸಲ್ಲಿಸಿದರು.ಈ ಅರ್ಜಿ ವಿಚಾರಣೆ ನಡೆಸದೇ ವಜಾ ಮಾಡಬೇಕು ಎಂದು ರಾಜೇಗೌಡರು ನ್ಯಾಯಾಲಯವನ್ನು ಕೋರಿದರು.ವಾದ ವಿವಾದ ನಡೆದು ನ್ಯಾಯಾಲಯ ವಿಚಾರಣೆ ನಡೆಸಲು ತೀರ್ಮಾನಿಸಿತು.ಉಚ್ಛ ನ್ಯಾಯಾಲಯದ ಈ ತೀರ್ಮಾನವನ್ನು ರಾಜೇಗೌಡರು ಸರ್ವೋಚ್ಚ ನ್ಯಾಯಾಲಯದಲ್ಲಿ ಪ್ರಶ್ನಿಸಿದರು.ಅಲ್ಲಿ ಮತ್ತೆ ವಿಚಾರಣೆ ನಡೆದು ಈ ಪ್ರಕರಣದ ವಿಚಾರಣೆಗೆ ಸರ್ವೋಚ್ಚ ನ್ಯಾಯಾಲಯ ಆದೇಶಿಸಿತು.
ಉಚ್ಚ ನ್ಯಾಯಾಲಯದಲ್ಲಿ ವಿಚಾರಣೆ ನಡೆದು ಮರು ಎಣಿಕೆಗೆ ನ್ಯಾಯಾಲಯ ಆದೇಶಿಸಿತು.ಈ ತೀರ್ಪಿನ ವಿರುದ್ಧ ರಾಜೇಗೌಡ ಮತ್ತೆ ಸರ್ವೋಚ್ಚ ನ್ಯಾಯಾಲಯಕ್ಕೆ ಮೇಲ್ಮನವಿ ಸಲ್ಲಿಸಿದರು.ಮತ್ತೆ ವಿಚಾರಣೆ ನಡೆದು ಉಚ್ಚ ನ್ಯಾಯಾಲಯದ ತೀರ್ಪನ್ನು ಸರ್ವೋಚ್ಚ ನ್ಯಾಯಾಲಯ ಎತ್ತಿ ಹಿಡಿಯಿತು.ಕಳೆದ ಏಪ್ರಿಲ್ 6 ರಂದು ಮರು ಎಣಿಕೆ ಆದೇಶಕ್ಕೆ ರಾಜೇಗೌಡರು 2 ವಾರಗಳ ತಡೆಯಾಜ್ಞೆ ಪಡೆದರು.ತಡೆಯಾಜ್ಞೆ ಅವಧಿ ಮುಗಿದ ನಂತರ ಮೇ 2 ರಂದು ಮರು ಎಣಿಕೆ ಚಿಕ್ಕಮಗಳೂರಿನಲ್ಲಿ ನಡೆಯಿತು.ಜೀವರಾಜ್ ಪಡೆದ ಮತಗಳ ಎಣಿಕೆ ನಡೆದಾಗ ಅವರ ಎರಡು ಮತ ತಿರಸ್ಕೃತ ಆಯಿತು.ಇದನ್ನು ರಾಜೇಗೌಡರ ಗೆಲುವು ಎಂದು ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ಸಂಭ್ರಮಾಚರಣೆ ಸಹ ಮಾಡಿದರು.
ಆಗ ತಿರಸ್ಕೃತ ಆದ ಮತಗಳು ಈ ಭಾರಿಯೂ ತಿರಸ್ಕೃತ ಆಯಿತು.ಈ ಮತಗಳಿಗೆ ಘೋಷಣಾ ಪತ್ರ ಆಥವಾ ಅಧಿಕಾರಿಗಳ ಪ್ರಮಾಣ ಪತ್ರ ಇರದೇ ತಿರಸ್ಕೃತ ಆಗಿತ್ತು.ಚುನಾವಣೆ ನಡೆಯುವಾಗಲೇ ವಿರೋಧಿಗೆ ಬೀಳಬಹುದೆಂದು ಊಹೆಯ ಮತಗಳನ್ನು ಹೀಗೆ ತಿರಸ್ಕೃತವಾಗುವಂತೆ ನೋಡಿಕೊಳ್ಳಲು ಪ್ರಯತ್ನ ನಡೆದಿತ್ತೇ ಎಂಬ ಸಂಶಯಕ್ಕೆ ಇದು ಕಾರಣವಾಯಿತು.
ರಾಜೇಗೌಡರಿಗೆ ಬಂದ ಮತ ಪರಿಶೀಲನೆ ಮಾಡಿದಾಗ ಹೊಸತಾಗಿ 255 ಮತ ತಿರಸ್ಕೃತ ಆಯಿತು.ಈ ಮತಪತ್ರದಲ್ಲಿ ಮತದಾರರು ಈರ್ವರಿಗೆ ಮತ ಚಲಾಯಿಸಿದ್ದರು, ಆದರೂ ಈ ತಿರಸ್ಕೃತ ಮತಗಳನ್ನು ಸೇರಿಸಿ ರಾಜೇಗೌಡ ರನ್ನು ವಿಜಯಿ ಎಂದು ಘೋಷಣೆ ಮಾಡಲಾಗಿತ್ತು. ಮರು ಎಣಿಕೆಯಲ್ಲಿ 255 ಮತ ಕಳೆದುಕೊಂಡ ರಾಜೇಗೌಡರು 52 ಮತಗಳಿಂದ ಸೋಲುಂಡರು.
ಮೇ 2 ರಂದು ನಡುರಾತ್ರಿ ಫಲಿತಾಂಶ ಘೋಷಣೆ ಮಾಡಲು ಚುನಾವಣಾ ಅಧಿಕಾರಿ ನಿರಾಕರಿಸಿದರು.ಉಚ್ಛ ನ್ಯಾಯಾಲಯದ ಸ್ಪಷ್ಟ ಆದೇಶ ಇದ್ದರೂ ಜೀವರಾಜ್ ವಿಜಯಕ್ಕೆ ಮತ್ತೊಂದು ದಿನ ಕಾಯಬೇಕಾಯಿತು.ರಾಜ್ಯ ಚುನಾವಣೆ ಆಯೋಗ ಉನ್ನತ ಮಟ್ಟದ ಪರಾಮರ್ಶೆ ನಡೆಸಿ ಫಲಿತಾಂಶ ಘೋಷಿಸುವಂತೆ ಚುನಾವಣಾ ಅಧಿಕಾರಿಗೆ ಸೂಚಿಸಿತು.ಫಲಿತಾಂಶ ಗೋಷಿಸಿದ ಚುನಾವಣಾಧಿಕಾರಿ ಪ್ರಮಾಣ ಪತ್ರ ವಿಜೇತ ಅಭ್ಯರ್ಥಿಗೆ ನೀಡಲು ತನಗೆ ಆಯೋಗದ ಆದೇಶ ಬೇಕು ಎಂದರು.ಕಡೆಗೂ ರಾಜ್ಯ ಆಯೋಗದ ಕಟ್ಟು ನಿಟ್ಟಿನ ಸೂಚನೆಯಂತೆ ಪ್ರಮಾಣಪತ್ರ ಪಡೆದುಕೊಳ್ಳಲು ಅಭ್ಯರ್ಥಿಗೆ ಸಂದೇಶ ರವಾನೆ ಆಯಿತು.ಮೇ 4 ರ ಬೆಳಗ್ಗೆ ಜೀವರಾಜ್ ಪ್ರಮಾಣ ಪತ್ರ ಅಂತೂ ಪಡೆದುಕೊಂಡರು.
ಮರು ಎಣಿಕೆ ನಿಲ್ಲಿಸಲು ಆಡಳಿತ ಪಕ್ಷ ಎಲ್ಲಾ ಪ್ರಯತ್ನಗಳನ್ನು ಮಾಡಿತು.ಮತಪತ್ರ ಇಟ್ಟ ಕೊಠಡಿ ಭದ್ರತೆ ಸಾಲದು,ಅಲ್ಲಿ ದಾಖಲೆಗಳನ್ನು ಇಟ್ಟ ಟ್ರಂಕ್ ಗೆ ಬೀಗ ಹಾಕಿಲ್ಲ,ಮತ ಟ್ಯಾಂಪರಿಂಗ್ ಆಗಿದೆ ಎಂದೆಲ್ಲಾ ನಾನಾ ರೀತಿಯ ತಕರಾರು ಮಾಡಲಾಯಿತು.ಕಡೆಗೆ ಚುನಾವಣೆ ಅಧಿಕಾರಿ ಮತ ಪತ್ರಗಳನ್ನು ಇಟ್ಟ ಬಾಕ್ಸ್ ಸುಸ್ಥಿತಿಯಲ್ಲಿ ಇರುವುದು ಮತ್ತು ಅವುಗಳು ಸೀಲ್ ಆಗಿರುವುದು ತೋರಿಸಿದ ಮೇಲೆ ಅವುಗಳನ್ನು ಎಣಿಕೆ ಸ್ಥಳಕ್ಕೆ ಸಾಗಿಸಲು ಒಪ್ಪಿಗೆ ನೀಡಿದ್ದು.ಎಣಿಕೆ ನಂತರ ಸೋಲುಂಡ ಅಭ್ಯರ್ಥಿ ಪೊಲೀಸ್ ಠಾಣೆಯಲ್ಲಿ ವಿಜೇತ ಅಭ್ಯರ್ಥಿ ಮೇಲೆ ಮತಪತ್ರ ತಿರುಚಿದ ಆರೋಪ ಹೊರಿಸಿ ದೂರು ದಾಖಲಿಸಿದ್ದಾರೆ.ಈ ಚುನಾವಣೆ ತಕರಾರು ಮುಂದಿನ ಚುನಾವಣೆ ತನಕವೂ ಮುಂದುವರೆಯುವ ಲಕ್ಷಣ ಗೋಚರಿಸುತ್ತಿದೆ.
ಜೀವರಾಜ್ ಮೂರು ವರ್ಷಗಳ ಕಾಲ ಶಾಸಕರಾಗಿ ಕರ್ತವ್ಯ ನಿರ್ವಹಿಸುವುದರಿಂದ ವಂಚಿತರಾದರು.ರಾಜೇಗೌಡರು ಮೂರು ವರ್ಷಗಳ ಕಾಲ ಶಾಸಕರಾಗಿ ಕರ್ತವ್ಯ ನಿರ್ವಹಿಸಲು ಸರಿಯಾದ ಎಣಿಕೆ ಮಾಡದಿದ್ದುದೇ ಕಾರಣವಾಯಿತು. 2023 ರಲ್ಲಿ ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರುವುದು ಖಚಿತವಾದ ಮೇಲೆ ಶೃಂಗೇರಿಯ ಫಲಿತಾಂಶ ಘೋಷಣೆ ಆಯಿತು.ಇಲ್ಲಿ ಅಧಿಕಾರಿಗಳ ಮೇಲೆ ಒತ್ತಡ ಹೇರಿ ಫಲಿತಾಂಶ ತಿರುಚಲಾಗಿತ್ತೇ ಎಂಬ ಪ್ರಶ್ನೆ ಏಳುತ್ತದೆ.ರಾಜೇಗೌಡರು ಮರು ಮತ ಎಣಿಕೆ ನಡೆಯದಂತೇ ಎಲ್ಲಾ ಪ್ರಯತ್ನಗಳನ್ನು ಮಾಡಿದ್ದೂ ಸಂಶಯ ಹೆಚ್ಚಲು ಕಾರಣವಾಗಿದೆ.ಒಟ್ಟಿನಲ್ಲಿ ಶೃಂಗೇರಿಯ ಈ ಚುನಾವಣೆ ಮತ್ತು ಫಲಿತಾಂಶ ಹಲವು ಸ್ವಾರಸ್ಯಕರ ವಿದ್ಯಮಾನಗಳಿಗೆ ಸಾಕ್ಷಿ ಆಯಿತು.
-ಪ್ರಭಾಕರ್ ಕಾರಂತ್, ಹಿರಿಯ ಪತ್ರಕರ್ತರು