ಹಾಸನ : ದಸರಾ ಸಂದರ್ಭದಲ್ಲಿ ನಾಡ ದೇವತೆ ಚಾಮುಂಡೇಶ್ವರಿ ದೇವಿಯನ್ನು ಹೊತ್ತು ಮೆರೆಸುತ್ತಿದ್ದ ಹೆಮ್ಮೆಯ ಅರ್ಜುನ ಆನೆಯ ಸ್ಮಾರಕವನ್ನು ಹಾಸನ ಜಿಲ್ಲೆಯ ಸಕಲೇಶಪುರ ತಾಲ್ಲೂಕಿನ ದಬ್ಬಳ್ಳಿಕಟ್ಟೆ ಮೀಸಲು ಅರಣ್ಯ ಪ್ರದೇಶದಲ್ಲಿ ಇಂದು ಅರಣ್ಯ ಸಚಿವ ಈಶ್ವರ್ ಖಂಡ್ರೆ ಲೋಕರ್ಪಣೆಗೊಳಿಸಿದರು.
ಡಿ.4 ರ 2023 ರಂದು ಕಾಡಾನೆ ಸೆರೆ ಹಿಡಿಯುವ ಕಾರ್ಯಾಚರಣೆ ವೇಳೆ ಮದಗಜದೊಂದಿಗೆ ಕಾದಾಡಿ ವೀರ ಮರಣವನ್ನಪ್ಪಿದ್ದ ಅರ್ಜುನ ಆನೆಯ ಮೃತದೇಹವನ್ನು ಅದೇ ಸ್ಥಳದಲ್ಲಿ ಅಂತ್ಯ ಕ್ರಿಯೆ ನೆರವೇರಿಸಲಾಗಿತ್ತು.
ಎರಡೂವರೆ. ವರ್ಷಗಳ ನಂತರ ಇಂದು ಅರ್ಜುನ ಆನೆಯ ಸ್ಮಾರಕ ಲೋಕರ್ಪನೆಗೊಂಡಿದ್ದ್ದು ಈ ವೇಳೆ ಹಾಸನ ಜಿಲ್ಲಾ ಉಸ್ತುವಾರಿ ಸಚಿವ ಕೃಷ್ಣಭೈರೇಗೌಡ, ಸಂಸದ ಶ್ರೇಯಸ್ಪಟೇಲ್, ಶಾಸಕರುಗಳಾದ ಕೆ.ಎಂ.ಶಿವಲಿಂಗೇಗೌಡ, ಸಿಮೆಂಟ್ಮಂಜು, ಸಿಸಿಎಫ್ ಏಡುಕುಂಡಲ, ಡಿಸಿಎಫ್ ಸೌರಭ್ಕುಮಾರ್, ಡಿಸಿ ಕೆ.ಎಸ್.ಲತಾಕುಮಾರಿ, ಎಸ್ಪಿ ಶುಭನ್ವಿತಾ ಸೇರಿದಂತೆ ಇತರರು ಭಾಗವಹಿಸಿದ್ದರು.
ಸುಮಾರು 10 ಅಡಿ ಎತ್ತರ, 13 ಅಡಿ ಉದ್ದದ ಅರ್ಜುನ ಆನೆಯ ಸ್ಮಾರಕವನ್ನು ಮೂಲ ಸ್ವರೂಪದಂತೆ ಪ್ರತಿಕೃತಿ ನಿರ್ಮಿಸಲಾಗಿದೆ, ಇಂದಿನಿಂದ ಈ ಪ್ರದೇಶ ಪ್ರವಾಸಿ ತಾಣವಾಗಿ ಮಾರ್ಪಟ್ಟಿದ್ದು ಪ್ರವಾಸಿಗರಿಗೆ ಅನುಕೂಲಕರ ವಾತಾವರಣ ನಿರ್ಮಿಸುವಲ್ಲಿ ಅರಣ್ಯ ಇಲಾಖೆ ಯಶಸ್ವಿಯಾಗಿದೆ.
ಇದರ ಜೊತೆಗೆ ಅರ್ಜುನ ಆನೆಯು ಪಾಲ್ಗೊಂಡ ಹುಲಿ, ಕಾಡಾನೆ, ಚಿರತೆ ಸೇರಿದಂತೆ ಇತರ ವನ್ಯ ಪ್ರಾಣಿಗಳ ಯಶಸ್ವಿ ಸೆರೆ ಕಾರ್ಯಾಚರಣೆಯ ಭಾವಚಿತ್ರಗಳನ್ನು ಪ್ರದರ್ಶಿಸುವ ಮೂಲಕ ಅರ್ಜುನನ ಸಾಧನೆ ಹಾಗೂ ಪರಾಕ್ರಮದ ಸಾರವನ್ನು ವರ್ಣಿಸಲಾಗಿದೆ.