ಮೈಸೂರು: ಕೆಎಸ್ ಆರ್ ಟಿಸಿ ಉಪನಗರ ಬಸ್ ನಿಲ್ದಾಣದ ಹೊರಭಾಗದಲ್ಲಿ ಸಾರ್ವಜನಿಕ ಮೂತ್ರವಿಸರ್ಜನೆ ಸಮಸ್ಯೆಗೆ ಪರಿಹಾರ ಕಂಡುಹಿಡಿಯಲು ಮೈಸೂರು ಮಹಾನಗರ ಪಾಲಿಕೆ (MCC) ಅಧಿಕಾರಿಗಳು ಹೊಸ ಪ್ರಯೋಗ ಕೈಗೊಂಡಿದ್ದಾರೆ.
ಬಸ್ ನಿಲ್ದಾಣದ ಎದುರಿನ ಬೆಂಗಳೂರು-ನೀಲಗಿರಿ ರಸ್ತೆ ಪಾದಚಾರಿ ಮಾರ್ಗದ ಮೇಲೆ ಪ್ರತಿಬಿಂಬ ಕನ್ನಡಿಯಂತಿರುವ ಸ್ಟೇನ್ಲೆಸ್ ಸ್ಟೀಲ್ ಶೀಟ್ಗಳನ್ನು ಅಳವಡಿಸಲಾಗಿದ್ದು, ಸಾರ್ವಜನಿಕವಾಗಿ ಮೂತ್ರವಿಸರ್ಜನೆ ಮಾಡುವವರನ್ನು ತಡೆಯುವ ಉದ್ದೇಶ ಇದಾಗಿದೆ.
85 ಮೀಟರ್ ವ್ಯಾಪ್ತಿಯಲ್ಲಿ ಅಳವಡಿಸಿರುವ ಈ ಹೊಳೆಯುವ ಸ್ಟೇನ್ಲೆಸ್ ಸ್ಟೀಲ್ ಫ್ರೇಮ್ಗಳು ಕನ್ನಡಿಯಂತೆ ಕಾರ್ಯನಿರ್ವಹಿಸುತ್ತವೆ. ಇದರಿಂದ ಸಾರ್ವಜನಿಕವಾಗಿ ಮೂತ್ರವಿಸರ್ಜನೆ ಮಾಡಲು ಯತ್ನಿಸುವವರು ತಾವು ಎಲ್ಲರಿಗೂ ಕಾಣಿಸುತ್ತಿರುವುದನ್ನು ಅರಿತು ಆ ವರ್ತನೆ ತಪ್ಪಿಸುವ ಸಾಧ್ಯತೆ ಹೆಚ್ಚಿದೆ.
ಈ ಪ್ರದೇಶ ದುರ್ವಾಸನೆ ಬೀರುತ್ತಿದ್ದು, ಅಲ್ಲಿ ಓಡಾಡಲು ಕಷ್ಟವಾಗುತ್ತಿದೆ, ಮಹಿಳೆಯರು ಮತ್ತು ಮಕ್ಕಳಿಗೆ ತೊಂದರೆ ಉಂಟಾಗುತ್ತಿತ್ತು. ಬಸ್ ನಿಲ್ದಾಣದೊಳಗಿನ ಸಾರ್ವಜನಿಕ ಶೌಚಾಲಯ ಬಳಸುವ ಬದಲು ಹಲವರು ರಸ್ತೆಯ ಪಕ್ಕದ ಮಳೆನೀರು ಕಾಲುವೆಯಲ್ಲೇ ಮೂತ್ರವಿಸರ್ಜನೆ ಮಾಡುತ್ತಿದ್ದರು.
ಈ ಹಿಂದೆ ಎಚ್ಚರಿಕೆ ಫಲಕಗಳು ಹಾಗೂ ಸೂಚನೆಗಳನ್ನು ಹಾಕಿದ್ದರೂ ಸಮಸ್ಯೆ ಮುಂದುವರಿದ ಕಾರಣ, ಮಹಾನಗರ ಪಾಲಿಕೆ ಈ ಪ್ರದೇಶವನ್ನು ಪ್ರಮುಖ “ಯೆಲ್ಲೋ ಸ್ಪಾಟ್” ಎಂದು ಗುರುತಿಸಿ ತುರ್ತು ಕ್ರಮ ಕೈಗೊಂಡಿದೆ.
ಮಹಾನಗರ ಪಾಲಿಕೆ ಎಂಜಿನಿಯರ್ ಫೈಝಲ್ ಎ ಎಂ, ಮೊದಲು ಕನ್ನಡಿಗಳನ್ನು ಅಳವಡಿಸುವ ಯೋಚನೆ ಇತ್ತು. ನಂತರ ಮೈಕಾ ಗ್ಲಾಸ್ ಮತ್ತು ಅಕ್ರಿಲಿಕ್ ಶೀಟ್ಗಳನ್ನೂ ಪರಿಗಣಿಸಲಾಯಿತು. ಆದರೆ ದೀರ್ಘಕಾಲಿಕ ಬಳಕೆ ಹಾಗೂ ಕಡಿಮೆ ವೆಚ್ಚದ ದೃಷ್ಟಿಯಿಂದ ಸ್ಟೇನ್ಲೆಸ್ ಸ್ಟೀಲ್ ಆಯ್ಕೆ ಮಾಡಲಾಯಿತು. ಫ್ರೇಮ್ಗಳನ್ನು ರಸ್ತೆಯ ಬದಿಗೆ ವೆಲ್ಡ್ ಮಾಡಲಾಗಿದೆ. ಜೊತೆಗೆ ಬೀದಿ ದೀಪಗಳಿಗೆ ಸಂಪರ್ಕಿತ ಬೆಳಕು ವ್ಯವಸ್ಥೆಯೂ ಅಳವಡಿಸಲಾಗಿದೆ, ಇದರಿಂದ ರಾತ್ರಿ ವೇಳೆಯಲ್ಲೂ ಪ್ರದೇಶ ಮೇಲ್ವಿಚಾರಣೆಯಲ್ಲಿರುತ್ತದೆ ಎಂದು ಹೇಳಿದರು.
ಶೇಖ್ ತನ್ವೀರ್ ಆಸಿಫ್, ಈ ಪ್ರಯತ್ನವು ಸಾರ್ವಜನಿಕ ಮೂತ್ರವಿಸರ್ಜನೆ ತಡೆಯುವುದರ ಜೊತೆಗೆ ಪ್ರವಾಸಿಗ ಸ್ನೇಹಿ ನಗರ ಎಂಬ ಮೈಸೂರು ನಗರದ ಪ್ರತಿಷ್ಠೆಯನ್ನು ಹೆಚ್ಚಿಸಲು ಸಹಕಾರಿಯಾಗಲಿದೆ ಎಂದು ಹೇಳಿದ್ದಾರೆ.
ಪ್ರಾರಂಭಿಕ ವರದಿಗಳ ಪ್ರಕಾರ, ಈ ಪ್ರತಿಬಿಂಬದ ಸ್ಟೀಲ್ ಶೀಟ್ಗಳು ಜನರನ್ನು ಸಾರ್ವಜನಿಕವಾಗಿ ಮೂತ್ರವಿಸರ್ಜನೆ ಮಾಡುವುದರಿಂದ ಯಶಸ್ವಿಯಾಗಿ ತಡೆಯುತ್ತಿರುವುದು ಕಂಡುಬಂದಿದೆ.