ಬೆಂಗಳೂರು: ಜಾಲಹಳ್ಳಿ ಸಮೀಪ ನಡೆದ ರೋಡ್ ರೇಜ್ ಪ್ರಕರಣದಲ್ಲಿ ಭಾರತೀಯ ವಾಯುಪಡೆಯ (IAF) ವಿಂಗ್ ಕಮಾಂಡರ್ ಹಾಗೂ ಅವರ ಪತ್ನಿ ಮೇಲೆ ದುಷ್ಕರ್ಮಿಗಳ ಗುಂಪೊಂದು ಹಲ್ಲೆ ನಡೆಸಿದೆ.
ಜಾಲಹಳ್ಳಿಯ ನಿವಾಸಿಯಾಗಿರುವ ಭಾರತೀಯ ವಾಯುಪಡೆಯ (IAF) ವಿಂಗ್ ಕಮಾಂಡರ್ ಸಂತೋಷ್ ಕುಮಾರ್ ಹಾಗೂ ದಂತ ವೈದ್ಯೆಯಾಗಿರುವ ಅವರ ಪತ್ನಿ, ಮೈಕ್ರೋವೇವ್ ಓವನ್ ಖರೀದಿಸಲು ಬೆಂಗಳೂರು-ತುಮಕೂರು ಮುಖ್ಯರಸ್ತೆಯಲ್ಲಿರುವ ಎಲೆಕ್ಟ್ರಾನಿಕ್ ಶೋರೂಂಗೆ ತೆರಳಿದ್ದರು. ಭಾರೀ ಟ್ರಾಫಿಕ್ ಜಾಮ್ ಹಿನ್ನೆಲೆ ಅವರು ವಾಹನವನ್ನು ದೂರದಲ್ಲಿ ನಿಲ್ಲಿಸಿದ್ದರು.
ಹಿಂತಿರುಗುವ ವೇಳೆ ಫುಟ್ಪಾತ್ ಮೇಲೆ ಅಡ್ಡಾದಿಡ್ಡಿಯಾಗಿ ವಾಹನಗಳನ್ನು ನಿಲ್ಲಿಸಿದ್ದರಿಂದ ನಡೆಯಲು ತೊಂದರೆಯಾಗಿತ್ತು. ಈ ವೇಳೆ ಸ್ವಲ್ಪ ಜಾಗ ನೀಡುವಂತೆ ಆಟೋ ಚಾಲಕನಿಗೆ ಕೇಳಿದ್ದಾಗಿ ತಿಳಿದುಬಂದಿದೆ.
ಈ ವೇಳೆ ಆಟೋದಲ್ಲಿದ್ದ ವ್ಯಕ್ತಿಯೊಬ್ಬ ದಂಪತಿಯನ್ನು ನಿಂದಿಸಿ, ರಸ್ತೆ ಬದಿಯ ಮರದ ಕೊಂಬೆಯಿಂದ ವಿಂಗ್ ಕಮಾಂಡರ್ ಮೇಲೆ ಹಲ್ಲೆ ನಡೆಸಿದ್ದಾನೆ ಎನ್ನಲಾಗಿದೆ. ಬಳಿಕ 6 ರಿಂದ 7 ಮಂದಿ ದುಷ್ಕರ್ಮಿಗಳು ಆಟೋದಲ್ಲಿ ದಂಪತಿಯನ್ನು ಹಿಂಬಾಲಿಸಿ ಹಲ್ಲೆ ನಡೆಸಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.
ಕಳೆದ ಶನಿವಾರ ರಾತ್ರಿ 9ರಿಂದ 9.15ರ ನಡುವೆ ಜಾಲಹಳ್ಳಿ ಕ್ರಾಸ್ ಸಮೀಪ ಅಯ್ಯಪ್ಪ ದೇವಸ್ಥಾನ ರಸ್ತೆಯ ಬಳಿ ಘಟನೆ ನಡೆದಿದೆ.
ದಂಪತಿ ಪೊಲೀಸ್ ಕಂಟ್ರೋಲ್ ರೂಂಗೆ ಕರೆ ಮಾಡಲು ಯತ್ನಿಸಿದಾಗ ಆರೋಪಿಗಳು ಪರಾರಿಯಾಗಿದ್ದಾರೆ. ಈ ಸಂಬಂಧ ಬಾಗಲಗುಂಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಆರೋಪಿಗಳ ಪೂರ್ಣ ವಾಹನ ಸಂಖ್ಯೆಯನ್ನು ಗಮನಿಸಲು ಸಾಧ್ಯವಾಗಲಿಲ್ಲ ಎಂದು ಸಂತೋಷ್ ಕುಮಾರ್ ದೂರಿನಲ್ಲಿ ತಿಳಿಸಿದ್ದಾರೆ.
ಸಿಸಿಟಿವಿ ದೃಶ್ಯಗಳನ್ನು ಪರಿಶೀಲಿಸಲಾಗುತ್ತಿದ್ದು, ಒಂದು ದೃಶ್ಯದಲ್ಲಿ ದೂರುದಾರ ಮತ್ತು ಆರೋಪಿಗಳ ನಡುವೆ ವಾಗ್ವಾದ ನಡೆದಿರುವುದು ಕಂಡುಬಂದಿದೆ. ಆದರೆ ಹಲ್ಲೆಯ ದೃಶ್ಯ ಸ್ಪಷ್ಟವಾಗಿಲ್ಲ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಆರೋಪಿಗಳ ವಿರುದ್ಧ ಅಪಾಯಕಾರಿ ಆಯುಧ ಬಳಸಿ ಗಾಯಗೊಳಿಸಿದ ಹಾಗೂ ಮಹಿಳೆಯ ಮೇಲಿನ ದೌರ್ಜನ್ಯಕ್ಕೆ ಸಂಬಂಧಿಸಿದ ಪ್ರಕರಣಗಳನ್ನು ದಾಖಲಿಸಿಕೊಳ್ಳಲಾಗಿದೆ ಎಂದು ಹೇಳಿದ್ದಾರೆ.