ಕೊಪ್ಪಳ: ಕೊಪ್ಪಳ ಜಿಲ್ಲೆಯ ಅಂಜನಾದ್ರಿಯ ಆಂಜನೇಯನಿಗೆ ಮೋಸ ಮಾಡಿದ ಆಘಾತಕಾರಿ ಘಟನೆ ನಡೆದಿದ್ದು, ದೇವಾಲಯದ ಟ್ರಸ್ಟಿಗಳು ಇದನ್ನು ಬಹಿರಂಗಪಡಿಸಿದ್ದಾರೆ
ಕೆಲ ದಿನಗಳ ಹಿಂದಷ್ಟೇ ಹೈದರಾಬಾದ್ನ ಉದ್ಯಮಿಯೊಬ್ಬರು, ಬರೋಬ್ಬರಿ 2.5 ಕೋಟಿ ರೂಪಾಯಿ ಮೌಲ್ಯದ 1 ಕೆಜಿ ಚಿನ್ನದ ಆಭರಣಗಳನ್ನು ನೀಡುವುದಾಗಿ ಹೇಳಿದ್ದರು.
ಅದರಂತೆ ಮೇ 8 ರಂದು ಹೈದರಾಬಾದ್ ಮೂಲದ ಉದ್ಯಮಿ ಮತ್ತು ಎಎಂಆರ್ ಇಂಡಿಯಾ ಅಧ್ಯಕ್ಷ ಮಹೇಶ್ ರೆಡ್ಡಿ ಹಾಗೂ ಅವರ ಕುಟುಂಬವು ದೇವಸ್ಥಾನಕ್ಕೆ 1ಕೆಜಿ ಚಿನ್ನದ ಪ್ರಭಾವಳಿ, ಕಿರೀಟ ಹಾಗೂ ಗದೆ ಸೇರಿದಂತೆ ಒಟ್ಟು 12 ಆಭರಣಗಳನ್ನು ಅರ್ಪಿಸಿದ್ದರು. ಮಹೇಶ್ ರೆಡ್ಡಿ ಅವರ ಸ್ನೇಹಿತರಾದ ಸ್ಥಳೀಯ ಶಾಸಕ ಮತ್ತು ಮಾಜಿ ಸಚಿವ ಜಿ ಜನಾರ್ದನ ರೆಡ್ಡಿ ಕೂಡ ಈ ವೇಳೆ ಹಾಜರಿದ್ದರು.
ಮಹೇಶ್ ರೆಡ್ಡಿ ಅರ್ಪಿಸಿದ್ದ ಆಭರಗಳ ಮೌಲ್ಯ ಒಟ್ಟು 2.5 ಕೋಟಿ ರೂ. ಎಂದು ಹೇಳಲಾಗಿತ್ತು. ಆದರೆ ಖಜಾನೆಗೆ ಕಳುಹಿಸಲು ಚಿನ್ನದ ಆಭರಗಳನ್ನು ಮತ್ತೊಮ್ಮೆ ಪರೀಕ್ಷೆ ಮಾಡಿದಾಗ ಇದು ಪೂರ್ಣ ಪ್ರಮಾಣದ ಚಿನ್ನವಲ್ಲ ಅನ್ನೋದು ಗೊತ್ತಾಗಿದೆ.
ಸರ್ಕಾರ ನೇಮಿಸಿದ ತಜ್ಞರ ತಂಡ, ಉದ್ಯಮಿ ಹೇಳಿಕೊಂಡಂತೆ ಇದು 1 ಕೆಜಿ ಚಿನ್ನದ ಆಭರಣ ಅಲ್ಲ. ಕೇವಲ 250 ಗ್ರಾಂ ಚಿನ್ನ ಇದೆ ಎಂದು ಹೇಳಿದ್ದು, ಈ ಬಗ್ಗೆ ಜಿಲ್ಲಾಡಳಿತ ತನಿಖೆಗೆ ಆದೇಶಿದೆ. ಅಲ್ಲದೆ ದೇಣಿಗೆ ನೀಡಿದ ಮಹೇಶ ರಡ್ಡಿ ಸಮ್ಮುಖದಲ್ಲಿ ಮತ್ತೊಮ್ಮೆ ಪರೀಕ್ಷೆ ಮಾಡಲು ಜಿಲ್ಲಾಡಳಿತ ಮುಂದಾಗಿದ್ದು, ನೋಟಿಸ್ ಸಹ ನೀಡಿದೆ.
ಉದ್ಯಮಿ ಬಾರದಿದ್ರೆ ದೇಣಿಗೆಯಾಗಿ ನೀಡಿದ ಆಭರಣವನ್ನ ವಾಪಸ್ಸು ಕೊಡುವ ಕುರಿತು ಚಿಂತಿಸಲಾಗುವುದು ಎಂದು ಕೊಪ್ಪಳ ಜಿಲ್ಲಾಧಿಕಾರಿ ಡಾ.ಸುರೇಶ ಇಟ್ನಾಳ ಅವರು ಹೇಳಿದ್ದಾರೆ.