ರಾಜ್ಯ ಕಾಂಗ್ರೆಸ್ ಸರ್ಕಾರ ಮೂರು ವರ್ಷಗಳ ಆಡಳಿತಾವಧಿ ಪೂರೈಸುತ್ತಿರುವ ಸಂದರ್ಭದಲ್ಲಿ ಕಲ್ಪತರು ನಾಡು ತುಮಕೂರಿನಲ್ಲಿ ವಿಶೇಷ ಕಾರ್ಯಕ್ರಮವನ್ನು ಇಂದು ಮೇ 19ರಂದು ಹಮ್ಮಿಕೊಂಡಿದ್ದು ಈ ಸಂದರ್ಭದಲ್ಲಿ ಸಿಎಂ ಸಿದ್ದರಾಮಯ್ಯ ನಾಡಿನ ಜನತೆಯನ್ನುದ್ದೇಶಿಸಿ ವಿಶೇಷ ಸಂದೇಶ ನೀಡಿದ್ದಾರೆ.
ರಾಜ್ಯದ ಜನತೆಗೆ, ವಿಶೇಷವಾಗಿ ಕಲ್ಪತರು ನಾಡು ತುಮಕೂರು ಜಿಲ್ಲೆಯ ಜನತೆಗೆ ನನ್ನ ಶುಭಾಶಯಗಳು. ಕಾಂಗ್ರೆಸ್ ನೇತೃತ್ವದ ರಾಜ್ಯ ಸರ್ಕಾರ ಮೇ 20ರಂದು ತನ್ನ ಮೂರು ವರ್ಷದ ಆಡಳಿತಾವಧಿಯನ್ನು ಪೂರ್ಣಗೊಳಿಸುತ್ತಿದೆ. ಈ ಸಂದರ್ಭದಲ್ಲಿ, ಕಳೆದ ಮೂರು ವರ್ಷಗಳಲ್ಲಿ ರಾಜ್ಯದಾದ್ಯಂತ ಕೈಗೊಂಡ ಅಭಿವೃದ್ಧಿ ಕಾಮಗಾರಿಗಳನ್ನು ಜನರಿಗೆ ಸಮರ್ಪಿಸುವ ವಿಶೇಷ ಕಾರ್ಯಕ್ರಮವನ್ನು ಮೇ 19ರಂದು ತುಮಕೂರಿನಲ್ಲಿ ರಾಜ್ಯ ಸರ್ಕಾರ ಆಯೋಜಿಸಿದೆ.
ಮೂರು ವರ್ಷಗಳ ಹಿಂದೆ, ನಮ್ಮ ಸರ್ಕಾರ ಅಧಿಕಾರಕ್ಕೆ ಬರುವ ಮೊದಲು ನಡೆದ ಚುನಾವಣೆಯಲ್ಲಿ, ಡಾ. ಜಿ ಪರಮೇಶ್ವರ್ ಅವರ ನೇತೃತ್ವದಲ್ಲಿ ಪಕ್ಷದ ಚುನಾವಣಾ ಘೋಷಣಾಪತ್ರವನ್ನು ಸಿದ್ಧಪಡಿಸಿ, ಐದು ಗ್ಯಾರಂಟಿಗಳನ್ನೂ ಒಳಗೊಂಡ ಪ್ರಮುಖ ಯೋಜನೆಗಳ ಭರವಸೆ ನೀಡಿ ಜನರ ಆಶೀರ್ವಾದವನ್ನು ಕೇಳಿದ್ದೆವು. ಒಂದು ವರ್ಷದೊಳಗೆ ಎಲ್ಲಾ ಐದು ಗ್ಯಾರಂಟಿಗಳನ್ನು ಯಶಸ್ವಿಯಾಗಿ ಜಾರಿಗೊಳಿಸಿದ್ದೇವೆ. ಈ ಗ್ಯಾರಂಟಿಗಳು ಅಭಿವೃದ್ಧಿಗೆ ಅಡ್ಡಿಯಾಗುತ್ತವೆ ಎಂಬ ಆರೋಪವನ್ನು ತಪ್ಪೆಂದು ಸಾಬೀತುಪಡಿಸಿ, ರಾಜ್ಯವನ್ನು ಸಮಗ್ರ ಅಭಿವೃದ್ಧಿಯತ್ತ ಕೊಂಡೊಯ್ದಿದ್ದೇವೆ. ಇದರ ಮೂಲಕ ನಮ್ಮ ಸರ್ಕಾರ ನೀಡಿದ ಭರವಸೆಗಳನ್ನು ಈಡೇರಿಸಿದ್ದೇವೆ ಎಂದಿದ್ದಾರೆ.
ಜನರ ಮುಂದೆ ಜವಾಬ್ದಾರಿತನದ ಭಾಗವಾಗಿ, ಮೇ 19ರಂದು ಶಿಕ್ಷಣ ಕೇಂದ್ರ ಹಾಗೂ ಕಲ್ಪತರು ನಾಡಾದ ತುಮಕೂರಿನಲ್ಲಿ ‘ಸಾಧನೆಯ ಮೂರು ವರ್ಷಗಳು – ಅರ್ಥಪೂರ್ಣ ಜನಸೇವೆಯ ಸಮರ್ಪಣೆ’ ಕಾರ್ಯಕ್ರಮವನ್ನು ರಾಜ್ಯ ಸರ್ಕಾರ ಆಯೋಜಿಸಿದೆ. ಈ ಸಂದರ್ಭದಲ್ಲಿ ಇ-ಖಾತಾ, ದರಖಾಸ್ತು ಪೋಡಿ, ಹೊಸ ಕಂದಾಯ ಗ್ರಾಮಗಳ ರಚನೆ, ಪಿಂಚಣಿ ಯೋಜನೆಗಳು ಹಾಗೂ ಇತರ ಕಲ್ಯಾಣ ಕ್ರಮಗಳಡಿ ಸುಮಾರು 1.40 ಲಕ್ಷ ಫಲಾನುಭವಿಗಳಿಗೆ ಹಕ್ಕುಪತ್ರಗಳನ್ನು ವಿತರಿಸಲಾಗುತ್ತದೆ.
ಇದರ ಜೊತೆಗೆ, ಸುಮಾರು 662 ಕೋಟಿ ರೂಪಾಯಿ ಮೌಲ್ಯದ ಅಭಿವೃದ್ಧಿ ಕಾಮಗಾರಿಗಳಿಗೆ ಶಂಕುಸ್ಥಾಪನೆ ಹಾಗೂ ಉದ್ಘಾಟನೆ ನಡೆಯಲಿದೆ. ಈ ಕಾರ್ಯಕ್ರಮದಲ್ಲಿ ನಾನು, ಉಪ ಮುಖ್ಯಮಂತ್ರಿ ಡಿ ಕೆ ಶಿವಕುಮಾರ್, ಎಲ್ಲಾ ಸಚಿವರು, ವಿರೋಧ ಪಕ್ಷದ ನಾಯಕರು, ಶಾಸಕರು, ಸಂಸದರು ಮತ್ತು ಪಕ್ಷದ ನಾಯಕರು ಭಾಗವಹಿಸಲಿದ್ದಾರೆ. ಈ ಕಾರ್ಯಕ್ರಮದಲ್ಲಿ ಎಲ್ಲರೂ ಭಾಗವಹಿಸಿ ಯಶಸ್ವಿಗೊಳಿಸುವಂತೆ ನಾನು ವಿನಂತಿ ಮಾಡಿಕೊಳ್ಳುತ್ತೇನೆ ಎಂದಿದ್ದಾರೆ.