ಬೆಂಗಳೂರು: ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಜೈಲು ಪಾಲಾಗಿರುವ ಸ್ಟಾರ್ ನಟ ದರ್ಶನ್ ತೂಗುದೀಪ ಅವರು ಜೈಲಿನಲ್ಲೇ ಆತ್ಮಹತ್ಯೆಗೆ ಯತ್ನಿಸಿದ್ದಾರೆ ಎಂಬ ವದಂತಿಗಳ ಬೆನ್ನಲ್ಲೇ ಪತ್ನಿ ವಿಜಯಲಕ್ಷ್ಮಿ ಹಾಗೂ ಪುತ್ರ ವಿನೀಶ್ ಅವರು ಮಂಗಳವಾರ ಪರಪ್ಪನ ಅಗ್ರಹಾರ ಜೈಲಿಗೆ ಭೇಟಿ ನೀಡಿದರು.
ಇಂದು ನಟ ದರ್ಶನ್ ಹಾಗೂ ವಿಜಯಲಕ್ಷ್ಮಿ ಅವರ 23ನೇ ವಿವಾಹ ವಾರ್ಷಿಕೋತ್ಸವ. ಈ ಹಿನ್ನೆಲೆಯಲ್ಲಿ ವಿಜಯಲಕ್ಷ್ಮಿ ಅವರು ಇಂದು ಮಧ್ಯಾಹ್ನ ಪುತ್ರ ವಿನೀಶ್ ಜೊತೆ ಪರಪ್ಪನ ಅಗ್ರಹಾರ ಜೈಲಿಗೆ ಭೇಟಿ ನೀಡಿದರು. ಈ ವೇಳೆ ನಟ ದರ್ಶನ್ ಅವರು ಪತ್ನಿ ಹಾಗೂ ಮಗನನ್ನು ಅಪ್ಪಿಕೊಂಡು ಭಾವುಕರಾದರು ಎನ್ನಲಾಗಿದೆ.
ಕಳೆದ ವರ್ಷ ಜಾಮೀನಿನ ಮೇಲೆ ಹೊರ ಬಂದಿದ್ದ ದರ್ಶನ್, ತಮ್ಮ ಪತ್ನಿ ಜೊತೆ ಅದ್ಧೂರಿಯಾಗಿ ಆನಿವರ್ಸರಿ ಸೆಲಬ್ರೇಟ್ ಮಾಡಿದ್ದರು. ಆದ್ರೆ ಈ ಬಾರಿ ದರ್ಶನ್ ಒಂಟಿಯಾಗಿ ಜೈಲಿನಲ್ಲಿ ಕಣ್ಣೀರು ಹಾಕಿದ್ದು, ಪತ್ನಿ ಹಾಗೂ ಪುತ್ರನ ಭೇಟಿಗೆ ಅವಕಾಶ ಕಲ್ಪಿಸುವಂತೆ ಕೋರಿ ಜೈಲಿನ ಮುಖ್ಯ ಅಧೀಕ್ಷಕ ಅಂಶುಕುಮಾರ್ ಅವರಿಗೆ ಮನವಿ ಮಾಡಿದ್ದರು. ಮತ್ತೊಂದೆಡೆ ಪತ್ನಿ ವಿಜಯಲಕ್ಷ್ಮಿ ಸಹ ಕಾರಾಗೃಹ ಎಡಿಜಿಪಿ ಅಲೋಕ್ ಕುಮಾರ್ ಅವರಿಗೆ ಪತ್ರ ಬರೆದು ಪತಿ ಭೇಟಿಗೆ ಅವಕಾಶ ನೀಡುವಂತೆ ಕೋರಿದ್ದರು. ಈ ಮನವಿ ಸ್ಪಂದಿಸಿದ ಜೈಲು ಅಧಿಕಾರಿಗಳು ಇಂದು ಪತ್ನಿ ಹಾಗೂ ಮಗನ ಭೇಟಿಗೆ ಅವಕಾಶ ಕಲ್ಪಿಸಿದ್ದಾರೆ.
ಇತ್ತೀಚಿಗೆ ಸುಪ್ರೀಂ ಕೋರ್ಟ್ ಕದ ತಟ್ಟಿದ್ರೂ ದರ್ಶನ್ ಅವರಿಗೆ ಬೇಲ್ ಸಿಕ್ಕಿಲ್ಲ. ಜಾಮೀನು ಸಿಗದೆ ನಿರಾಸೆಗೊಂಡಿರೋ ದರ್ಶನ್ ಕುಗ್ಗಿ ಹೋಗಿದ್ದಾರೆ ಎನ್ನಲಾಗುತ್ತಿದೆ. ಅಲ್ಲದೆ ಜೈಲಿನಲ್ಲೇ ದರ್ಶನ್ ಆತ್ಮಹತ್ಯೆಗೆ ಯತ್ನಿಸಿದ್ದಾರೆ ಎಂಬ ವದಂತಿ ಹರಡಿದ್ದು, ಪರಪ್ಪನ ಅಗ್ರಹಾರದಲ್ಲಿರುವ ಬೆಂಗಳೂರು ಕೇಂದ್ರ ಕಾರಾಗೃಹದ ಸುತ್ತಮುತ್ತ ಸೋಮವಾರ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿತ್ತು.