ಬಳ್ಳಾರಿ: ಪಶುವೈದ್ಯ ಪತಿ ಹಾಗೂ ಅತ್ತೆ-ಮಾವರಿಂದ ಮಾನಸಿಕ ಹಿಂಸೆ ಮತ್ತು ವರದಕ್ಷಿಣೆ ಕಿರುಕುಳದಿಂದ ಬೇಸತ್ತ 24 ವರ್ಷದ ಯುವತಿಯೊಬ್ಬರು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಪೊಲೀಸರು ಮಂಗಳವಾರ ತಿಳಿಸಿದ್ದಾರೆ.
ಮೇ 17 ರಂದು ಬಳ್ಳಾರಿ ಜಿಲ್ಲೆಯ ಕಂಪ್ಲಿ ಪಟ್ಟಣದ ತನ್ನ ಪೋಷಕರ ಮನೆಯಲ್ಲಿ ಯುವತಿ ಐಶ್ವರ್ಯಾ, ಸೀಲಿಂಗ್ ಫ್ಯಾನ್ಗೆ ನೇಣು ಬಿಗಿದುಕೊಂಡು ಸಾವಿಗೆ ಶರಣಾಗಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಘಟನೆಯ ನಂತರ, ಪಶುಸಂಗೋಪನಾ ಇಲಾಖೆಯಲ್ಲಿ ಪಶುವೈದ್ಯರಾಗಿರುವ ಐಶ್ವರ್ಯ ಅವರ ಪತಿ ಪ್ರದೀಪ್ ಕುಮಾರ್ ಅವರನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಸಾವಿಗೂ ಮುನ್ನ ಡೆತ್ ನೋಟ್ ಬರೆದಿರುವ ಯುವತಿ, ತಮ್ಮ ಪತಿ ಮತ್ತು ಅತ್ತೆ-ಮಾವ ಮಾನಸಿಕ ಹಿಂಸೆ ನೀಡಿದ್ದು, ವರದಕ್ಷಿಣೆ ಕಿರುಕುಳ ಸಹ ನೀಡಿದ್ದಾರೆ ಎಂದು ಆರೋಪ ಮಾಡಿದ್ದಾರೆ.
ಐಶ್ವರ್ಯ ಹಾಗೂ ಪ್ರದೀಪ್ ಕುಮಾರ್ ಅವರು ಕೇವಲ ಒಂದೂವರೆ ವರ್ಷದ ಹಿಂದಷ್ಟೇ ಪ್ರೀತಿಸಿ ಮದುವೆಯಾಗಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
ಪೊಲೀಸರ ಪ್ರಕಾರ, ಪತಿಯ ಮಾನಸಿಕ ಕಿರುಕುಳದಿಂದ ಬೇಸತ್ತು, ಐಶ್ವರ್ಯ, ಮೇ 14 ರಂದು ಗಂಡನ ಮನೆಯಿಂದ ತಮ್ಮ ಪೋಷಕರ ಮನೆಗೆ ಹೋಗಿದ್ದರು.
ಯುವತಿಯ ತಂದೆಯ ದೂರಿನ ಮೇರೆಗೆ, ಆಕೆಯ ಪತಿ ಮತ್ತು ಅತ್ತೆಯ ವಿರುದ್ಧ ಸೆಕ್ಷನ್ 80(ವರದಕ್ಷಿಣೆ ಕಿರುಕುಳ ಸಾವು) ಮತ್ತು ಭಾರತೀಯ ನ್ಯಾಯ ಸಂಹಿತಾ ಮತ್ತು ವರದಕ್ಷಿಣೆ ನಿಷೇಧ ಕಾಯ್ದೆಯ ಇತರ ಸಂಬಂಧಿತ ಸೆಕ್ಷನ್ಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸ್ ವರಿಷ್ಠಾಧಿಕಾರಿ(ಬಳ್ಳಾರಿ) ಸುಮನ್ ಡಿ ಪೆನ್ನೇಕರ್ ಅವರು ಪಿಟಿಐಗೆ ತಿಳಿಸಿದ್ದಾರೆ.