ಬೆಂಗಳೂರು: ಉತ್ತರ ವಿಭಾಗ ಡಿಸಿಪಿ ನೇಮಗೌಡ ಸೇರಿದಂತೆ ಪೊಲೀಸರ ಮೇಲೆ ಯೂತ್ ಕಾಂಗ್ರೆಸ್ ಅಧ್ಯಕ್ಷ ಮಂಜುನಾಥ್ ನಡೆಸಿದ್ದಾರೆ ಎನ್ನಲಾದ ಹಲ್ಲೆಯ ವಿಡಿಯೋವೊಂದು ವೈರಲ್ ಆಗುತ್ತಿದೆ. ಕಳೆದ ಭಾನುವಾರ ಸಂಜೆ ಬಿಜೆಪಿ ಕಚೇರಿ ಬಳಿ ಗಲಾಟೆ ನಡೆದಿತ್ತು.
ಬಿಜೆಪಿ ಕಚೇರಿಗೆ ಮುತ್ತಿಗೆಗೆ ಯತ್ನಿಸಿದ್ದ ಕಾಂಗ್ರೆಸ್ ಕಾರ್ಯಕರ್ತರನ್ನ ನಿಯಂತ್ರಿಸಲು ಪೊಲೀಸರು ಲಾಠಿ ಚಾರ್ಜ್ ಮಾಡಿದ್ರು. ಈ ವೇಳೆ ಯೂತ್ ಕಾಂಗ್ರೆಸ್ ಅಧ್ಯಕ್ಷ ಮಂಜುನಾಥ್ ಪೊಲೀಸರ ಮೇಲೆಯೇ ಹಲ್ಲೆಗೆ ಯತ್ನಿಸಿದ್ರು ಎನ್ನುವ ಆರೋಪ ಕೇಳಿಬಂದಿದೆ.
ರಾಜ್ಯ ಯೂತ್ ಕಾಂಗ್ರೆಸ್ ಅಧ್ಯಕ್ಷ ಮಂಜುನಾಥ್ ಅವರು ಉತ್ತರ ವಿಭಾಗ ಡಿಸಿಪಿ ನೇಮಗೌಡ ಅವರ ಮೇಲೆಯೇ ಕೈ ಮಾಡಿದ್ದಲ್ಲದೆ, ಲಾಠಿ ಚಾರ್ಜ್ ಮಾಡುತ್ತಿದ್ದ ಡಿಸಿಪಿ ಮೇಲೆ ಗೂಂಡಾಗಳಂತೆ ಎರಗಿದ್ದಾರೆ. ಡಿಸಿಪಿಯನ್ನು ಹಿಡಿದು ತಳ್ಳಾಡಿ ಹಲ್ಲೆ ಮಾಡಿದ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ಈ ವಿಡಿಯೋವನ್ನು ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಹಂಚಿಕೊಂಡಿರುವ ಜೆಡಿಎಸ್ ಗೃಹ ಸಚಿವ ಪ್ರಿಯಾಂಕ್ ಖರ್ಗೆ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದೆ. ಮಂಜುನಾಥ್ ಮತ್ತು ಆತನ ಗ್ಯಾಂಗ್ ಬೀದಿ ರೌಡಿಗಳಂತೆ ಹಲ್ಲೆ ನಡೆಸಿರುವುದು ವಿಡಿಯೋ ಸಾಕ್ಷಿಯಲ್ಲೇ ಸ್ಪಷ್ಟವಾಗಿದೆ. ಪ್ರಿಯಾಂಕ್ ಖರ್ಗೆ ಅವರೇ ನೀವೇನು ರಾಜ್ಯಕ್ಕೆ ಗೃಹ ಸಚಿವರೋ ಅಥವಾ ಕೇವಲ ವಿಪಕ್ಷಗಳಿಗೋ? ಎಂದು ಪ್ರಶ್ನಿಸಿದೆ.
ಕರ್ತವ್ಯನಿರತ IPS ಅಧಿಕಾರಿಯ ಮೇಲೆಯೇ ಹಲ್ಲೆ ನಡೆದರೂ FIR ಇಲ್ಲ, ಬಂಧನವೂ ಇಲ್ಲ, ಯಾರ ರಕ್ಷಣೆಗಿದು? ಕಾಂಗ್ರೆಸ್ ಸರ್ಕಾರದ ಮೌನವೇ ಗೂಂಡಾಗಿರಿಗೆ ಪರವಾನಗಿಯೇ? ನಿಮ್ಮ ಪೌರುಷ ಕೇವಲ ಅಮಾಯಕರು & ವಿರೋಧ ಪಕ್ಷಗಳ ಮೇಲೆ ಮಾತ್ರವೇ ? ಡಿಕೆ ಶಿವಕುಮಾರ್ ಅವರೇ ? ಆರಕ್ಷಕರ ಮೇಲೆಯೇ ಕೈಮಾಡಿದರೂ FIR ದಾಖಲಿಸದೆ ಪೊಲೀಸರ ಕೈಕಟ್ಟಿ ಹಾಕಿದ್ದು ಯಾರು? ಗೂಂಡಾಗಿರಿ ಮಾಡಿದ ಸ್ವಪಕ್ಷೀಯರನ್ನು ರಕ್ಷಿಸಲು ಇಡೀ ಪೊಲೀಸ್ ವ್ಯವಸ್ಥೆಯನ್ನೇ ದುರುಪಯೋಗ ಪಡಿಸಿಕೊಳ್ಳುತ್ತಿದ್ದೀರಾ ? ಎಂದು ಪ್ರಶ್ನಿಸಿದೆ.
ಗೃಹ ಸಚಿವರೇ, ಕಾನೂನು ಎಲ್ಲರಿಗೂ ಒಂದೇ ಆಗಿದ್ದರೆ, ಕೂಡಲೇ ಪೊಲೀಸರ ಮೇಲೆ ಹಲ್ಲೆಗೈದಿರುವ ಈ ಕಾಂಗ್ರೆಸ್ ಪುಂಡರನ್ನು ಬಂಧಿಸಿ ಜೈಲಿಗಟ್ಟಿ ಎಂದು ಒತ್ತಾಯಿಸಿದೆ.