ಬೆಂಗಳೂರು: ಸಚಿವ ಕೃಷ್ಣ ಬೈರೇಗೌಡ ಅವರು ಸೋಮವಾರ ಬೆಳ್ಳಂಬೆಳಿಗ್ಗೆ ನಗರದ ಘನತ್ಯಾಜ್ಯ ನಿರ್ವಹಣಾ ವ್ಯವಸ್ಥೆಯನ್ನು ಪರಿಶೀಲಿಸಲು ದಿಢೀರ್ ತಪಾಸಣೆ ನಡೆಸಿದರು.
ಮುಂಜಾನೆ 5:30 ಕ್ಕೆ ಆರಂಭವಾದ ಈ ಕಾರ್ಯಾಚರಣೆಯು ಬೆಂಗಳೂರು ಉತ್ತರ ನಗರ ನಿಗಮ (BNCC) ವ್ಯಾಪ್ತಿಯ ಮಲ್ಲಸಂದ್ರ ಮತ್ತು ಜಾಲಹಳ್ಳಿ ಪ್ರದೇಶಗಳಲ್ಲಿ ಬಿರುಸಿನಿಂದ ನಡೆಯಿತು.
ಬಿಎನ್ಸಿಸಿ ಕಮಿಷನರ್ ಪೊಮ್ಮಲ ಸುನಿಲ್ ಕುಮಾರ್ ಅವರೊಂದಿಗೆ ಸಚಿವರು ಸ್ಥಳದಲ್ಲೇ ಇದ್ದು ವ್ಯವಸ್ಥೆಯನ್ನು ಹತ್ತಿರದಿಂದ ವೀಕ್ಷಿಸಿದರು.
ಮಲ್ಲಸಂದ್ರದಲ್ಲಿ ಕಸ ಸಂಗ್ರಹಿಸುವ ವಾಹನಗಳ ಚಾಲಕರು ಹಾಗೂ ಸಹಾಯಕರ ಹಾಜರಾತಿ, ವಾಹನಗಳ ಆರ್ಎಫ್ಐಡಿ ಸ್ಕ್ಯಾನಿಂಗ್ ಮತ್ತು ಅವುಗಳ ಕಾರ್ಯನಿರ್ವಹಣೆಯನ್ನು ಪರಿಶೀಲಿಸಿದರು.
ಬಳಿಕ ಪೌರಕಾರ್ಮಿಕರ ಮುಸ್ಟರಿಂಗ್ ಪಾಯಿಂಟ್ಗೆ ಭೇಟಿ ನೀಡಿದ ಅವರು, ಸಿಬ್ಬಂದಿಯ ಹಾಜರಾತಿ, ಸಮವಸ್ತ್ರ, ಕೈಗವಸುಗಳು ಹಾಗೂ ಕೆಲಸದ ಪರಿಸ್ಥಿತಿಗಳನ್ನು ಪರಿಶೀಲಿಸಿದರು. ಪೌರಕಾರ್ಮಿಕರೊಂದಿಗೆ ಸಂವಾದ ನಡೆಸಿ, ಅವರ ಸಮಸ್ಯೆಗಳು ಮತ್ತು ಅಹವಾಲುಗಳನ್ನು ಆಲಿಸಿದರು.
ಮನೆ-ಮನೆಗೆ ತ್ಯಾಜ್ಯ ಸಂಗ್ರಹಿಸುವ ಸ್ಥಳಗಳಲ್ಲಿ ಸಚಿವರು ಹಾಗೂ ಬಿಎನ್ಸಿಸಿ ಆಯುಕ್ತರು ಮನೆಗಳಿಂದ ಹಸಿ ಮತ್ತು ಒಣ ತ್ಯಾಜ್ಯವನ್ನು ಪ್ರತ್ಯೇಕವಾಗಿ ವಿಂಗಡಿಸಲಾಗುತ್ತಿದೆಯೇ, ನಿಯಮಿತವಾಗಿ ಕಸ ಸಂಗ್ರಹಿಸಲಾಗುತ್ತಿದೆಯೇ ಹಾಗೂ ರಸ್ತೆಗಳನ್ನು ಸ್ವಚ್ಛವಾಗಿಡಲಾಗುತ್ತಿದೆಯೇ ಎಂಬುದನ್ನು ಪರಿಶೀಲಿಸಿದರು.
ಸರಿಯಾಗಿ ನಿರ್ವಹಿಸದ ಖಾಲಿ ನಿವೇಶನಗಳನ್ನೂ ಪರಿಶೀಲಿಸಿದ ಸಚಿವರು, ಅವುಗಳ ಮಾಲೀಕರಿಗೆ ನೋಟಿಸ್ ನೀಡಿ ಸ್ವಚ್ಛಗೊಳಿಸುವಂತೆ ಕ್ರಮ ಕೈಗೊಳ್ಳಲು ಅಧಿಕಾರಿಗಳಿಗೆ ಸೂಚಿಸಿದರು. ಬಳಿಕ ಜಾಲಹಳ್ಳಿ ವಾರ್ಡ್ನಲ್ಲೂ ಕಸ ಸಂಗ್ರಹಣೆ ಹಾಗೂ ತ್ಯಾಜ್ಯ ವಿಂಗಡಣೆ ವ್ಯವಸ್ಥೆಯನ್ನು ಪರಿಶೀಲಿಸಿದರು.