ಬೆಳಗಾವಿ: ನಗರ ಪೊಲೀಸ್ ಕಮಿಷನರ್ ಆಗಿ ಐಪಿಎಸ್ ಅಧಿಕಾರಿ ಪ್ರಕಾಶ ನಿಕ್ಕಂ ಗುರುವಾರ ಅಧಿಕಾರ ಸ್ವೀಕರಿಸಿದರು.
ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಈ ಹಿಂದೆ ಬೆಳಗಾವಿಯಲ್ಲಿ ಕೆಲಸ ಮಾಡಿದ್ದೆ. ಆದರೆ, ನಗರ ಪೊಲೀಸ್ ಕಮಿಷನರೇಟ್ ರಚನೆಯಾದ ನಂತರ, ಮೊದಲ ಸಲ ಕರ್ತವ್ಯ ನಿರ್ವಹಣೆಗೆ ಬಂದಿದ್ದೇನೆ. ಭೂಷಣ ಬೊರಸೆ ಇಲ್ಲಿ ಉತ್ತಮ ಕೆಲಸ ಮಾಡಿದ್ದಾರೆ. ಅದನ್ನು ಮುಂದುವರಿಸಿಕೊಂಡು ಹೋಗುವೆ. ಸಂಚಾರ ವ್ಯವಸ್ಥೆ ಮತ್ತು ಸೈಬರ್ ಕ್ರೈಂ ನಿಯಂತ್ರಣಕ್ಕೆ ನಿಗಾ ವಹಿಸುವೆ ಎಂದು ಹೇಳಿದರು.
ಬೆಳಗಾವಿ ಗಣೇಶೋತ್ಸವದಲ್ಲಿ ಹಿಂದೆಯೂ ಕೆಲಸ ಮಾಡಿದ್ದೇನೆ. ಆದರೆ, ಈಗ ಪರಿಸ್ಥಿತಿ ಬದಲಾಗಿದೆ. ಹಾಗಾಗಿ ಅಧಿಕಾರಿಗಳು ಹಾಗೂ ಸಾರ್ವಜನಿಕ ಗಣೇಶೋತ್ಸವ ಮಂಡಳಿಗಳ ಜತೆ ಸಭೆ ಮಾಡಿ, ಶಾಂತಿಯುತವಾಗಿ ಗಣೇಶೋತ್ಸವ ಆಚರಿಸಲಾಗುವುದು’ ಎಂದರು.
ವರ್ಗಾವಣೆಯಾಗಿರುವ ಭೂಷಣ ಬೊರಸೆ ಅಧಿಕಾರ ಹಸ್ತಾಂತರಿಸಿ ಮಾತನಾಡಿದರು. ಬೆಳಗಾವಿಯಲ್ಲಿ ಸೇವೆ ಸಲ್ಲಿಸಿರುವುದು ನನ್ನ ವೃತ್ತಿಯಲ್ಲಿ ಮರೆಯಲಾರದ ಅನುಭವ. ಇಲ್ಲಿನ ಜನರು, ನಮ್ಮ ಅಧಿಕಾರಿಗಳು ಹಾಗೂ ಸಿಬ್ಬಂದಿ ಸಹಕಾರದಿಂದ ಉತ್ತಮ ಕೆಲಸ ಮಾಡಲು ಸಾಧ್ಯವಾಯಿತು. ಹೊಸ ಪೊಲೀಸ್ ಕಮಿಷನರ್ ಕೂಡ ಒಳ್ಳೆಯ ರೀತಿ ಕೆಲಸ ಮಾಡಲಿದ್ದಾರೆ ಎಂದು ಭೂಷಣ ಬೊರಸೆ ವಿಶ್ವಾಸ ವ್ಯಕ್ತಪಡಿಸಿದರು.
ಮಹಾರಾಷ್ಟ್ರ ರಾಜ್ಯದ ನಾಶಿಕ್ ನ ಪ್ರಕಾಶ ನಿಕ್ಕಂ 2012ನೇ ಐಪಿಎಸ್ ಬ್ಯಾಚ್ ಅಧಿಕಾರಿಯಾಗಿದ್ದಾರೆ. ಬೆಳಗಾವಿಯಲ್ಲೆ ಪ್ರೊಬೇಷನರಿ ಅಧಿಕಾರಿ ಆಗಿ ಕೆಲಸ ಮಾಡಿರುವ ಇವರು, ಆ ಬಳಿಕ ವಿಜಯಪುರ, ಬೀದರ್ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಾಗಿ ಮತ್ತು ಬ್ಯುರೊ ಆಫ್ ಸಿವಿಲ್ ಏವಿಯೇಷನ್ಸ್ ಸೆಕ್ಯೂರಿಟಿಯಲ್ಲಿ ಕರ್ತವ್ಯ ನಿರ್ವಹಿಸಿದ್ದಾರೆ.