ಬೆಂಗಳೂರು: ಕರ್ನಾಟಕದಲ್ಲಿ ಮತಾಂತರ ನಿಷೇಧ ಕಾಯ್ದೆಯನ್ನು ರದ್ದುಗೊಳಿಸುವಂತೆ ಕೋರಿ, ಕ್ರೈಸ್ತ ಸಮುದಾಯದ ಮುಖಂಡರು ಎಐಸಿಸಿ (AICC) ಅಧ್ಯಕ್ಷರು ಹಾಗೂ ರಾಜ್ಯಸಭೆಯ ವಿರೋಧ ಪಕ್ಷದ ನಾಯಕರಾದ ಮಲ್ಲಿಕಾರ್ಜುನ ಖರ್ಗೆ ಅವರಲ್ಲಿ ಮನವಿ ಮಾಡಿದರು.
ಬೆಂಗಳೂರಿನ ಆರ್ಚ್ಬಿಷಪ್ ರೆವರೆಂಡ್ ಡಾ. ಪೀಟರ್ ಮಚಾದೊ ಅವರ ನೇತೃತ್ವದ ಕ್ರೈಸ್ತ ಸಮುದಾಯದ ನಿಯೋಗವೊಂದು ಖರ್ಗೆ ಅವರನ್ನು ಭೇಟಿ ಮಾಡಿ, ರಾಜ್ಯದಲ್ಲಿ ಸಮುದಾಯವು ಎದುರಿಸುತ್ತಿರುವ ಸಮಸ್ಯೆಗಳ ಪರಿಹಾರಕ್ಕಾಗಿ ಅವರ ಮಧ್ಯಪ್ರವೇಶ ಮತ್ತು ಬೆಂಬಲವನ್ನು ಕೋರಿತು.
ಇದರ ಜೊತೆಗೆ ಕ್ರೈಸ್ತ ಸಮುದಾಯಕ್ಕೆ ಹಿಂದುಳಿದ ವರ್ಗದ ಅಡಿಯಲ್ಲಿ ಪ್ರತ್ಯೇಕ ಶೇ.1ರಷ್ಟು ಮೀಸಲಾತಿ, ವಿಧಾನ ಪರಿಷತ್ತಿಗೆ ಕ್ರೈಸ್ತ ಪ್ರತಿನಿಧಿಯ ನಾಮನಿರ್ದೇಶನ ಹಾಗೂ ಸರ್ಕಾರಿ ಮಂಡಳಿ–ನಿಗಮಗಳಲ್ಲಿ ಸಮರ್ಪಕ ರಾಜಕೀಯ ಮತ್ತು ಆಡಳಿತಾತ್ಮಕ ಪ್ರಾತಿನಿಧ್ಯ ನೀಡುವಂತೆ ಮನವಿ ಮಾಡಲಾಗಿದೆ.
ಬೆಂಗಳೂರಿನ ಆರ್ಚ್ಬಿಷಪ್ ಮೋಸ್ಟ್ ರೆವರೆಂಡ್ ಡಾ. ಪೀಟರ್ ಮಚಾಡೊ ಅವರ ನೇತೃತ್ವದ ನಿಯೋಗವು ಖರ್ಗೆ ಅವರನ್ನು ಭೇಟಿ ಮಾಡಿದ್ದು, ಸಮುದಾಯ ಎದುರಿಸುತ್ತಿರುವ ವಿವಿಧ ಸಮಸ್ಯೆಗಳನ್ನು ವಿವರಿಸಿದೆ. ಶಿಕ್ಷಣ, ಉದ್ಯೋಗ ಹಾಗೂ ಅಭಿವೃದ್ಧಿಯ ಅವಕಾಶಗಳಲ್ಲಿ ಹಿಂದುಳಿದಿರುವ ವರ್ಗಗಳಿಗೆ ಹೆಚ್ಚಿನ ಅವಕಾಶ ಕಲ್ಪಿಸುವ ಉದ್ದೇಶದಿಂದ ಪ್ರತ್ಯೇಕ ಮೀಸಲಾತಿಯ ಅಗತ್ಯವಿದೆ ಎಂದು ನಿಯೋಗ ಪ್ರತಿಪಾದಿಸಿದೆ.
ವಿಧಾನ ಪರಿಷತ್ತಿಗೆ ಕ್ರೈಸ್ತ ಸಮುದಾಯದ ಪ್ರತಿನಿಧಿಯೊಬ್ಬರನ್ನು ನಾಮನಿರ್ದೇಶನ ಮಾಡುವುದರಿಂದ, ಸಮುದಾಯವು ತನ್ನ ಸಮಸ್ಯೆಗಳನ್ನು ವ್ಯಕ್ತಪಡಿಸಲು ಮತ್ತು ಶಾಸಕಾಂಗ ಪ್ರಕ್ರಿಯೆಯಲ್ಲಿ ರಚನಾತ್ಮಕವಾಗಿ ಕೊಡುಗೆ ನೀಡಲು ಸೂಕ್ತ ವೇದಿಕೆ ದೊರೆತಂತಾಗುತ್ತದೆ ಎಂದು ಅವರು ಹೇಳಿದರು.
ಕ್ರೈಸ್ತ ಸಮುದಾಯದ ಕೆಲವು ವರ್ಗಗಳು ಎದುರಿಸುತ್ತಿರುವ ಸಾಮಾಜಿಕ-ಆರ್ಥಿಕ ಸವಾಲುಗಳನ್ನು ನಿಯೋಗವು ಪ್ರಸ್ತಾಪಿಸಿತು; ಅಲ್ಲದೆ, ಶಿಕ್ಷಣ, ಉದ್ಯೋಗ ಮತ್ತು ಅಭಿವೃದ್ಧಿಯ ಇತರ ಕ್ಷೇತ್ರಗಳಲ್ಲಿ ಹೆಚ್ಚಿನ ಅವಕಾಶಗಳನ್ನು ಖಚಿತಪಡಿಸಿಕೊಳ್ಳಲು ಸೂಕ್ತ ಕ್ರಮಗಳನ್ನು ಕೈಗೊಳ್ಳುವಂತೆ ಒತ್ತಾಯಿಸಿತು.
ವಿವಿಧ ಸರ್ಕಾರಿ ಮಂಡಳಿಗಳು, ನಿಗಮಗಳು ಹಾಗೂ ಇತರ ಶಾಸನಬದ್ಧ ಮತ್ತು ನಾಮನಿರ್ದೇಶಿತ ಸಂಸ್ಥೆಗಳಲ್ಲಿ ಕ್ರೈಸ್ತ ಸಮುದಾಯದ ಸದಸ್ಯರಿಗೆ ಸಮರ್ಪಕ ಮತ್ತು ಅರ್ಥಪೂರ್ಣ ಪ್ರಾತಿನಿಧ್ಯವನ್ನು ನೀಡುವಂತೆಯೂ ನಿಯೋಗವು ಮನವಿ ಮಾಡಿತು.