ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಇಂದು ಶನಿವಾರ ಬೆಳಗ್ಗೆ ಸಚಿವ ಯು.ಟಿ. ಖಾದರ್ ಅವರೊಂದಿಗೆ ಮಂಗಳೂರು ಬಂದರು ಹಾಗೂ ಮೀನುಗಾರಿಕಾ ಯಾರ್ಡ್ಗೆ ದಿಢೀರ್ ಭೇಟಿ ನೀಡಿದರು.
ಬಿಗಿ ಪೊಲೀಸ್ ಬಂದೋಬಸ್ತ್ನಲ್ಲಿ ಸಿಎಂ ಡಿಕೆ ಶಿವಕುಮಾರ್ ದಕ್ಕೆ ಪ್ರದೇಶವನ್ನು ಕಾಲ್ನಡಿಗೆಯಲ್ಲಿ ಸುತ್ತಿ ವೀಕ್ಷಿಸಿದರು. ಸಮುದ್ರದಿಂದ ಬಂದ ತಾಜಾ ಮೀನುಗಳನ್ನು ಪರಿಶೀಲಿಸಿದ ಸಿಎಂ ಮೀನುಗಾರಿಕೆ ಬೋಟ್ಗಳನ್ನೂ ವೀಕ್ಷಿಸಿದರು.
ಈ ವೇಳೆ ಅಲ್ಲಿದ್ದ ಮೀನುಗಾರರು ಮುಖ್ಯಮಂತ್ರಿಗಳಿಗೆ ಜೈಕಾರ ಕೂಗಿದರು. ಸಿಎಂ ಅವರು ಮೀನುಗಾರರೊಂದಿಗೆ ಕೆಲಕಾಲ ಮಾತುಕತೆ ನಡೆಸಿ, ಅವರ ಸಮಸ್ಯೆಗಳನ್ನು ಆಲಿಸಿದರು. ಸ್ವತಃ ಮೀನುಗಳನ್ನು ಕೈಯಲ್ಲಿ ಹಿಡಿದುಕೊಂಡು ಪರಿಶೀಲಿಸಿದರು.
ಮೀನುಗಾರಿಕೆ ದಕ್ಕೆಯಲ್ಲಿ ವ್ಯಾಪಾರ ವಹಿವಾಟು ಬಂದ್ ಆಗಿರುವುದನ್ನು ಗಮನಿಸಿದ ಸಿಎಂ ಆ ಬಗ್ಗೆ ಪ್ರಶ್ನಿಸಿದರು. ಅಲ್ಲದೆ, ಧಕ್ಕೆ ಬಂದ್ ಮಾಡಿಸಿದ ಅಧಿಕಾರಿಗಳ ಅಮಾನತಿಗೆ ಸೂಚನೆ ನೀಡಿದರು.
ನಂತರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಸಿಎಂ, ನಿನ್ನೆ ಕೂಡ ನಾನು ಘೋಷಿಸಿದ್ದೇನೆ. ಕಡಲ ಹಾಗೂ ಮೀನುಗಾರಿಕಾ ಉದ್ಯಮ ಮತ್ತು ಸಾಗರ ಆರ್ಥಿಕತೆಗೆ ಸಂಬಂಧಿಸಿದ ವಿಶ್ವವಿದ್ಯಾಲಯವನ್ನು ಸ್ಥಾಪಿಸಲಾಗುವುದು. ವಿದ್ಯಾರ್ಥಿಗಳ ಪ್ರವೇಶ ಸಂಖ್ಯೆಯನ್ನೂ ಹೆಚ್ಚಿಸಲಾಗುವುದು. ಪ್ರಸ್ತುತ 40 ಅಥವಾ 50 ಸೀಟುಗಳಿದ್ದು, ಅದನ್ನು 60ಕ್ಕೆ, ಬಳಿಕ 200 ಸೀಟುಗಳಿಗೆ ಹೆಚ್ಚಿಸಲಾಗುವುದು” ಎಂದು ಹೇಳಿದರು.
ಸಮುದ್ರ ಮತ್ತು ಜಲ ಸಂಪನ್ಮೂಲಗಳಿಗೆ ಸಂಬಂಧಿಸಿದ ಇಡೀ ಕ್ಷೇತ್ರದ ಶಿಕ್ಷಣಕ್ಕೆ ಸಂಬಂಧಿಸಿದಂತೆ ಹೊಸ ಮಾಸ್ಟರ್ ಪ್ಲಾನ್ನ್ನೂ ರೂಪಿಸುತ್ತಿದ್ದೇವೆ ಎಂದು ಹೇಳಿದರು.
ಈ ಹಿಂದೆಯೂ ನಾನು ಕಾಂಗ್ರೆಸ್ ಅಧ್ಯಕ್ಷನಾಗಿದ್ದಾಗ ಅವರ ಸಮಸ್ಯೆಗಳನ್ನು ಆಲಿಸಿದ್ದೇನೆ. ಮೀನು ಹಿಡಿಯುವವರು, ಮೀನು ಮಾರಾಟ ಮಾಡುವವರು, ವ್ಯಾಪಾರಿಗಳು ಎದುರಿಸುತ್ತಿರುವ ಸಮಸ್ಯೆಗಳು ಹಾಗೂ ಜೆಟ್ಟಿಗಳಲ್ಲಿರುವ ಸಮಸ್ಯೆಗಳನ್ನು ತಿಳಿದುಕೊಂಡು, ಅವುಗಳಿಗೆ ಶಾಶ್ವತ ಪರಿಹಾರ ಕಂಡುಕೊಳ್ಳಲು ನಾನು ಇಲ್ಲಿಗೆ ಬಂದಿದ್ದೇನೆ. ಸಂಘದವರು ನನ್ನನ್ನು ಭೇಟಿಯಾಗಿ ಹಲವು ಬೇಡಿಕೆಗಳನ್ನು ಮುಂದಿಟ್ಟಿದ್ದರು. ಹೀಗಾಗಿ ನಾನೇ ಖುದ್ದಾಗಿ ಇಲ್ಲಿಗೆ ಬರಲು ನಿರ್ಧರಿಸಿದೆ.
ನಾನು ಇಲ್ಲಿಗೆ ಬಂದಾಗ ಇಲ್ಲಿ ವ್ಯಾಪಾರ ಚಟುವಟಿಕೆಗಳನ್ನು ಸ್ಥಗಿತಗೊಳಿಸಲಾಗಿತ್ತು. ಅದು ಅಧಿಕಾರಿಗಳಿಂದಾಗಲಿ, ಪೊಲೀಸರಿಂದಾಗಲಿ ಅಥವಾ ಸಂಘದವರಿಂದಾಗಲಿ ಆಗಿರಬಹುದು. ಇದರಿಂದ ನನಗೆ ಅಸಮಾಧಾನವಾಗಿದೆ. ಈ ಬಗ್ಗೆ ತನಿಖೆ ನಡೆಸಿ ವರದಿ ನೀಡುವಂತೆ ಜಿಲ್ಲಾಧಿಕಾರಿ ಹಾಗೂ ಕಮಿಷನರ್ಗೆ ಸೂಚಿಸಿದ್ದೇನೆ. ನಮ್ಮ ಅಧಿಕಾರಿಗಳಲ್ಲಿ ಯಾರೇ ಇದರಲ್ಲಿ ಭಾಗಿಯಾಗಿದ್ದರೂ, ಅವರನ್ನು ಇಂದೇ ಅಮಾನತು ಮಾಡುತ್ತೇನೆ.
ವ್ಯಾಪಾರ ಚಟುವಟಿಕೆಗಳು ಮುಂದುವರಿಯಲೇಬೇಕು. ನನಗೆ ಯಾವುದೇ ಭದ್ರತೆ ಅಗತ್ಯವಿಲ್ಲ. ಅವರ ಸಮಸ್ಯೆಗಳೇನು ಎಂಬುದನ್ನು ಕೇಳಲು ನಾನು ಇಲ್ಲಿಗೆ ಬಂದಿದ್ದೇನೆ ಎಂದರು.