ಬೆಂಗಳೂರು: ಕಲ್ಯಾಣ ಕರ್ನಾಟಕ ಉತ್ಸವದ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಕಲಬುರಗಿಯಲ್ಲಿ ವಾಸ್ತವ್ಯ ಹೂಡಿದ್ದ ವೇಳೆಯಲ್ಲೇ, ಹೈಕೋರ್ಟ್ ವೃತ್ತದಲ್ಲಿ ರಾತ್ರೋರಾತ್ರಿ ಪ್ರತಿಷ್ಠಾಪಿಸಿದ್ದ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ 9 ಅಡಿ ಎತ್ತರದ ಪ್ರತಿಮೆಯನ್ನು ಅಧಿಕಾರಿಗಳು ಕೂಡಲೇ ತೆರವುಗೊಳಿಸಿದ್ದರು.
ಸದ್ಯ ಈ ವಿಚಾರ ಸಿದ್ದರಾಮಯ್ಯ ಅವರ ಅಭಿಮಾನಿಗಳ ಆಕ್ರೋಶಕ್ಕೆ ಕಾರಣವಾಗಿದ್ದು, ಕಲಬುರಗಿ ಚಲೋ ಎಚ್ಚರಿಕೆ ನೀಡಿದ್ದಾರೆ.
ಹೈಕೋರ್ಟ್ ಕ್ರಾಸ್ ಬಳಿ, ಈ ಹಿಂದೆ 'ಸಿದ್ದರಾಮಯ್ಯ ವೃತ್ತ' ಎಂದು ಹೆಸರಿಸಲಾದ ಸ್ಥಳದಲ್ಲಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಪ್ರತಿಮೆಯನ್ನು ಸ್ಥಾಪಿಸಲಾಗಿತ್ತು. ಆದರೆ ಕಲಬುರಗಿ ಮಹಾನಗರ ಪಾಲಿಕೆ ಅಧಿಕಾರಿಗಳು ಕೂಡಲೇ ಅದನ್ನು ತೆರವುಗೊಳಿಸಿದ್ದರು.
ಸಿದ್ದರಾಮಯ್ಯ ಪ್ರತಿಮೆ ತೆರವು ವಿಚಾರವಾಗಿ ಇಂದು ಬೆಂಗಳೂರಿನಲ್ಲಿ ಮಾಧ್ಯಮಕ್ಕೆ ಪ್ರತಿಕ್ರಿಯಿಸಿದ ಹಿಂದುಳಿದ ವರ್ಗಗಳ ಸಂಘಟನೆಯ ರಾಜ್ಯಾಧ್ಯಕ್ಷ ರಾಮಚಂದ್ರಪ್ಪ ಅವರು, ‘ಸಿದ್ದರಾಮಯ್ಯ ಅವರು ಸಾಮಾಜಿಕ ಕಳಕಳಿಯಿಂದ ಆಡಳಿತ ಮಾಡಿಕೊಂಡು ಬಂದ ಧಿಮಂತ್ ನಾಯಕ. ಅವರ ಪ್ರತಿಮೆಯನ್ನು ಅಭಿಮಾನಿಗಳು ಪ್ರತಿಷ್ಠಾಪನೆ ಮಾಡಿದ್ದರು. ಅವತ್ತು ವಿಮೋಚನಾ ದಿನಾಚರಣೆಗೆ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅಲ್ಲಿಗೆ ಹೋಗಿದ್ದರೂ ಈ ವಿಚಾರ ಗೊತ್ತಿಲ್ಲ ಅಂತ್ತಲ್ಲ, ಅವರ ಬಳಿ ಇಂಟೆಲಿಜೆನ್ಸ್ ಇದೆ ಎಂದರು.
‘ಇನ್ನು ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಸಹ ಈ ವಿಚಾರದಲ್ಲಿ ನಿರ್ಲಕ್ಷ ತೋರಿದ್ದಾರೆ. ಆದರೆ ಆ ಭಾಗದಲ್ಲಿ ಸಿದ್ದರಾಮಯ್ಯ ಅಭಿಮಾನಿಗಳಿದ್ದಾರೆ. ಅವರು ಆಕ್ರೋಶಗೊಳ್ಳುವ ಮುಂಚೆ ಜಿಲ್ಲಾಡಳಿತ ಮತ್ತು ಸರ್ಕಾರ ಕೂಡಲೇ ಎಚ್ಚೆತ್ತುಕೊಂಡು ಪ್ರತಿಮೆ ಸ್ಥಾಪಿಸಬೇಕು. ಇಲ್ಲವಾದರೆ ಕಲಬುರಗಿ ಚಲೋ ಮಾಡುತ್ತೇವೆ. ಕಲಬುರಗಿ ಚಲೋದಲ್ಲಿ ರಾಜ್ಯದ ಎಲ್ಲಾ ಸಿದ್ದರಾಮಯ್ಯ ಅಭಿಮಾನಿಗಳು ಭಾಗಿ ಆಗುತ್ತಾರೆ’ ಎಂದು ರಾಮಚಂದ್ರಪ್ಪ ಎಚ್ಚರಿಕೆ ನೀಡಿದ್ದಾರೆ.
ಪ್ರತಿಮೆ ತೆರವು ವೇಳೆ ಸಿಎಂ ಡಿಕೆ ಶಿವಕುಮಾರ್, ಜಿಲ್ಲಾ ಉಸ್ತುವಾರಿ ಸಚಿವರು ಅಲ್ಲೇ ಇದ್ದರು. ಹೀಗಿದ್ರೂ ಸಿದ್ದರಾಮಯ್ಯನವರ ಪ್ರತಿಮೆ ತೆರವು ಮಾಡಿದ್ದಾರೆ. ಅಂದರೆ ಅಧಿಕಾರಿಗಳ ಮೇಲೆ ಒತ್ತಡ ಇದೆ ಎಂದು ಗೊತ್ತಾಗುತ್ತೆ ಎಂದು ರಾಮಚಂದ್ರಪ್ಪ ಹೇಳಿದ್ದಾರೆ.
ನಾವು ನಾಲ್ಕು ವರ್ಷದಿಂದ ಪ್ರತಿಮೆ ಸ್ಥಾಪನೆಗೆ ಅನುಮತಿ ಕೇಳುತ್ತಿದ್ದರೂ ಸರ್ಕಾರ ಕೊಟ್ಟಿರಲಿಲ್ಲ. ಇದರ ಹಿಂದೆ ಯಾರದ್ದೋ ಕೈವಾಡ ಇರುತ್ತೆ. ಸಿದ್ದರಾಮಯ್ಯ ಪ್ರತಿಮೆ ತೆರವು ವಿಚಾರದಲ್ಲೂ ಸಿಎಂ ಡಿಕೆ ಶಿವಕುಮಾರ್ ಕೈವಾಡ ಇದ್ದರು ಇರಬಹುದು. ನಾವು ಕೂಡ ಅನುಮಾನ ಪಡುತ್ತಿದ್ದೇವೆ ಎಂದು ರಾಮಚಂದ್ರಪ್ಪ ಆರೋಪಿಸಿದ್ದಾರೆ.