ಖುಷಿ

ಗರ್ಭದಲಿ ಇದೇನಿದು!

ಇಂದು ಯಾರಲ್ಲೂ ಸಮಯವಿಲ್ಲ. ಸಮಯ ನೋಡಲು ಕೂಡಾ ಸಮಯವಿಲ್ಲ! 'ಅಯ್ಯೋ, ಸುಮ್ನೆ ಟೈಮ್ ವೇಸ್ಟ್ ಆಯ್ತಲ್ಲ' ಎಂದು ಮರುಗುವವರನ್ನು ನಿತ್ಯವೂ ನಮ್ಮ ನಡುವೆ ನೋಡುತ್ತಿರುತ್ತೇವೆ. ಹೀಗಿರುವಾಗ ಇದೇ 'ಟೈಮ್‌ಸೆನ್ಸ್‌' ಮೇಲೆ ನೌಷಿಲ್ ಮೆಹ್ತಾ ಅವರು ಹಿಂದಿಯಲ್ಲಿ ಬರೆದ 'ರಬಿ'್ಡ ಎಂಬ ಸಣ್ಣ ಕಥೆಯನ್ನು ನಿತೀಶ್ ಮತ್ತು ಹೇಮಲತಾ ಲೋಕೇಶ್ ಕೂಡಿ ಕನ್ನಡದಲ್ಲಿ ರಂಗರೂಪಕ್ಕೆ 'ರಬಿ'್ಡ ಹೆಸರಿನಿಂದಲೇ ತಂದಿದ್ದಾರೆ. ಈ ನಾಟಕವನ್ನು ನಿತೀಶ್ ನಿರ್ದೇಶಿಸಿ, ಪ್ರಮುಖ ಪಾತ್ರದಲ್ಲೂ ಗಮನ ಸೆಳೆದಿದ್ದಾರೆ.
ಅವಳು ಸಾವಂತ್ರಿ ಎಂಬ ಹಳ್ಳಿ ಹೆಂಗಸು. ತನ್ನ ವಿಕಲಚೇತನ ಮಗಳ ವಿದ್ಯಾಭ್ಯಾಸಕ್ಕಾಗಿ ಹಣ ಹೊಂದಿಸಲು 'ಪರೋಪಕಾರಾರ್ಥಂ ಇದಂ ಶರೀರಂ' ಎಂಬ ನುಡಿಯನ್ನು ಮೈಗೂಡಿಸಿಕೊಂಡು ಪರರ ಸಂತೋಷಕ್ಕಾಗಿ ಕೃತಕ ಗರ್ಭ ಧರಿಸುತ್ತಾಳೆ. ಪಾತ್ರದ ಸೃಷ್ಟಿಯೇ ನಾಟಕದ ಜೀವಾಳ. ಬಸುರಾಗದೇ ತಾಯಿಯಾಗ ಬಯಸುವ ಐಟಿಯ ನೌಕರಣಿ ಮತ್ತು ಸಾವಂತ್ರಿಯ ಸಂವೇದನಾತ್ಮಕ ದೃಶ್ಯಗಳು ಮನಕಲಕುತ್ತವೆ.
ಭಾವುಕತೆ ಹಾಗೂ ಆರ್ದ್ರತೆಯನ್ನು ಸ್ಫುರಿಸಲು ಸಾಕಷ್ಟು ಪ್ರಸಂಗಗಳಿವೆ. ಸಾವಂತ್ರಿಯ ಉದರದಲ್ಲಿನ ತನ್ನ ಗಂಡನ ಕುಡಿಯನ್ನು ನೇವರಿಸುತ್ತಾ ಈಕೆ ತನ್ನ ಉದರ ಸ್ಪರ್ಶಿಸಿಕೊಳ್ಳುವ ದೃಶ್ಯ ವಿಶ್ಲೇಷಣೆಗೆ ನಿಲುಕದ್ದು. ವೈಜ್ಞಾನಿಕವಾಗಿ ಮುಂದುವರಿದ ಸಮಾಜ ಹಾಗೂ ತನ್ನ ಕುಡಿ, ತನ್ನ ಬೇರು ಎಂಬ ಅವಿನಾಭಾವ ತೋರುವ ಮುಗ್ಧ ಸಮಾಜದ ನಡುವಿನ ಸೇತುವೆಯೇ ಈ ನಾಟಕದ ಮೂಲ ವಸ್ತು. ಇಲ್ಲಿನ ಸಾವಂತ್ರಿಯ ಭಾಷೆ, ಮುಗ್ಧತನ, ಹಾವಭಾವಗಳು ನಾಟಕದ ಕೊನೆಯ ಘಟ್ಟದವರೆಗೂ ಹಾಸ್ಯಮಿಶ್ರಿತವಾಗಿಯೇ ಸಾಗಿ ನಾಟಕದ ಅಂತಿಮ ಕ್ಷಣಗಳಲ್ಲಿ ಆಕೆಯ ಪಾತ್ರ ಉತ್ತುಂಗಕ್ಕೆ ಸಾಗುತ್ತದೆ. ಅಲ್ಲಿ ಮಾನವತಾವಾದವನ್ನು ಸಾರುತ್ತಾಳೆ.
'ಸೋ ಕಾಲ್ಡ್, ಹೈಫೈ ಪೀಪಲ್‌' ಬೇಡವೆಂದು ಬಿಟ್ಟು ಹೋದ ಈಕೆಯ ಭಾಷೆಯಲ್ಲಿನ 'ಸ್ಪೆಶಲ್‌' ಆದ ಮಗುವನ್ನು ಆತುಕೊಂಡು ಸಾಕುತ್ತಾಳೆ. ನೋಡುಗನ ಮನದಲ್ಲಿ ಸಾವಂತ್ರಿಯ ಪಾತ್ರ ಅಚ್ಚಳಿಯದೇ ಅಚ್ಚಾಗುತ್ತದೆ. ವಿಕಲಚೇತನ ಹುಡುಗಿ ಪುಟ್ಟಕ್ಕ, 'ನಿನ್ನ ಹೊಟ್ಟೇಲಿರೋ ಪಾಪು ನಮ್ಮದಲ್ವಾ? ನನ್ನ ಜೊತೆಗಿರೊಲ್ವಾ?' ಎಂಬರ್ಥದ ಮಾತುಗಳನ್ನಾಡುತ್ತಾ ತನ್ನ ಪಾತ್ರದಲ್ಲಿ ತಾನು ತಲ್ಲೀನಳಾಗಿದ್ದಾಳೆ. ನಾಟಕದ ಪ್ರಾರಂಭದಿಂದಲೂ ಪೂರಕವಾಗಿ ಬರುವ ಸಂಗೀತ ಹಾಗೂ ಹಾಡುಗಾರ್ತಿಯ ದನಿ ಇಂಪಾಗಿಯೂ, ಸುಶ್ರಾವ್ಯವಾಗಿಯೂ ಇದೆ. ಆದರೆ ಹಾಡಿನ ಸಾಹಿತ್ಯ ಕಥೆಗೆ ಹೊಂದಾಣಿಕೆಯಾಗದೆ ಹಿನ್ನೆಲೆಯ ಹಾಡಾಗಿ ಉಳಿದಿದೆ.
ಐಟಿಬಿಟಿಯ ನೌಕರರ ಪರದಾಟ, ಯಾಂತ್ರಿಕ ಬದುಕು, ಹಣಕ್ಕಷ್ಟೇ ಬೆಲೆ, ತಮ್ಮ ಇಡೀ ಸಮಯವನ್ನೆಲ್ಲ ಕಂಪನಿಗಾಗಿ ಮುಡಿಪಿಟ್ಟಿರುವವರ ಪರಿಯನ್ನು ಇಲ್ಲಿ ಹಿಡಿದಿಡಲಾಗಿದೆ. ನಾಯಕನ ಕೈಗೆ ಹಾಗೂ ಸಾವಂತ್ರಿಯ ಕಾಲಿಗೆ ಮೊದಲಿಂದ ಕೊನೆಯವರೆಗೂ ಕ್ರೇಪ್ ಬ್ಯಾಂಡೇಜ್ ಏಕೆಂಬುದೇ ಯಕ್ಷಪ್ರಶ್ನೆ. ಹಿತಮಿತವಾದ ರಂಗಸಜ್ಜಿಕೆ, ಬೆಳಕು, ಪ್ರಸಾದನಗಳಲ್ಲೇ ನಾಟಕಪ್ರಿಯರನ್ನು ಪ್ರಥಮ ಪ್ರದರ್ಶನದಿಂದಲೇ ಸೆಳೆಯಲು ಕಥಾ ಹಂದರವೇ ಮೂಲ ಕಾರಣ ಎಂಬುದು ನೋಡುಗನ ನುಡಿ.
-ಸಂಕೇತ್ ಗುರುದತ್

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಜಮ್ಮು-ಕಾಶ್ಮೀರ: ಮಸೂದ್ ಅಜರ್ ಆಡಿಯೋ ಬೆನ್ನಲ್ಲೇ ಭಾರತದ ಗಡಿಗೆ ನುಗ್ಗಲು 'ಪಾಕ್ ಡ್ರೋನ್' ಗಳು ಯತ್ನ!

ಇತಿಹಾಸ ಕಲಿಯಬೇಕಿದ್ದರೆ ಕಾಲೇಜಿಗೆ ಹೋಗುತ್ತಾರೆ, ನಿಮ್ಮ ಬೋಧನೆಯ ಅಗತ್ಯವಿಲ್ಲ: ಪ್ರಧಾನಿ ಮೋದಿ ವಿರುದ್ಧ ಪ್ರಿಯಾಂಕ್ ಖರ್ಗೆ ವಾಗ್ದಾಳಿ

MGNREGA Row: ಯಾವಾಗ-ಎಲ್ಲಿ ಬೇಕಾದರೂ ಚರ್ಚೆಗೆ ಸಿದ್ಧ, ಡೈಲಾಗ್‌ ವೀರ HDK ಬಂದರೆ ಒಳ್ಳೆಯದು; ಡಿ.ಕೆ.ಶಿವಕುಮಾರ್

1st ODI: ಕೊಹ್ಲಿ ಅರ್ಧಶತಕ: ನ್ಯೂಜಿಲ್ಯಾಂಡ್ ವಿರುದ್ಧದ ಪಂದ್ಯದಲ್ಲಿ ಭಾರತಕ್ಕೆ ರೋಚಕ ಜಯ!

ಕಾಂಗ್ರೆಸ್ ಶಾಸಕಿ ನಯನಾ ಮೋಟಮ್ಮಗೆ ಅಶ್ಲೀಲ ಕಾಮೆಂಟ್! ಕಿಡಿಗೇಡಿಗಳಿಗೆ ಕೊಟ್ಟ ವಾರ್ನಿಂಗ್ ಏನು?

SCROLL FOR NEXT