ಜೀವನಶೈಲಿ

ಚಳಿಗಾಲದಲ್ಲಿ ಮೈ ಮನ ಆರೋಗ್ಯ ರಕ್ಷಣೆ ಹೇಗೆ?

Sumana Upadhyaya

ಚಳಿಗಾಲದಲ್ಲಿ ಕಾಯಿಲೆಗಳು ಹೆಚ್ಚು ಬರುವುದು ಸಾಮಾನ್ಯ, ಜ್ವರ, ಶೀತ, ನೆಗಡಿ, ಕೆಮ್ಮು, ಅಲರ್ಜಿ, ತುರಿಕೆ ಹೀಗೆ ಹತ್ತಾರು ಸಮಸ್ಯೆಗಳು.


ಇಂತಹ ಸಣ್ಣಪುಟ್ಟ ಆರೋಗ್ಯ ಸಮಸ್ಯೆಗಳನ್ನು ಅಲಕ್ಷಿಸಿದರೆ ಹಲವು ಬಾರಿ ಅದು ವಿಪರೀತ ತೊಂದರೆಗೆ ಎಡೆಮಾಡಿಕೊಡುತ್ತದೆ. ಆಸ್ಪತ್ರೆಗೆ ದಾಖಲಾಗಬೇಕಾದ ಪರಿಸ್ಥಿತಿಯೂ ಬರಬಹುದು. 


ದಿನನಿತ್ಯದ ಜೀವನಕ್ಕೆ ತೊಂದರೆಯಾಗದೆ ದೇಹದಲ್ಲಿ ವಿಟಮಿನ್, ಮಿನರಲ್ ಅಂಶವನ್ನು ಕಾಪಾಡಿಕೊಂಡು ಫಿಟ್ ಅಂಡ್ ಫೈನ್ ಆಗಿರಲು ಏನೇನು ಮಾಡಬೇಕು ಎಂಬುದಕ್ಕೆ ಕೆಲವು ಟಿಪ್ಸ್ ನೀಡಲಾಗಿದೆ.


ಸಾಕಷ್ಟು ಜ್ಯೂಸ್ ಕುಡಿಯಿರಿ: ತಾಜಾ ರಸದಲ್ಲಿ ಬಹಳಷ್ಟು ನಿರೋಧಕಗಳು, ಜೀವಸತ್ವಗಳು ಮತ್ತು ಖನಿಜಗಳು ಇರುತ್ತವೆ, ಇದು ಚಳಿಗಾಲದಲ್ಲಿ ರೋಗ ನಿರೋಧಕ ಶಕ್ತಿಯನ್ನು ಆರೋಗ್ಯಕರವಾಗಿಡಲು ಸಹಾಯ ಮಾಡುತ್ತದೆ.ಪಾಲಕ್ ಸೊಪ್ಪು, ಕೋಸುಗಡ್ಡೆ, ಕೇಲ್, ಬ್ರಸೆಲ್ ಮೊಗ್ಗುಗಳು, ಬೀಟ್‌ರೂಟ್, ಹಣ್ಣುಗಳು ಮತ್ತು ಸೇಬುಗಳಂತಹ ಪದಾರ್ಥಗಳನ್ನು ಸೇರಿಸುವುದರಿಂದ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಿ ಗರಿಷ್ಠ ಸಾಮರ್ಥ್ಯದಲ್ಲಿ ಕಾರ್ಯನಿರ್ವಹಿಸುವಂತೆ ಮಾಡುತ್ತದೆ.


ಸಾಕಷ್ಟು ನಿದ್ದೆ ಮಾಡಿ: ದಿನನಿತ್ಯ ದೇಹ ಆರೋಗ್ಯವಾಗಿದ್ದು ಚಟುವಟಿಕೆಯಿಂದ ಇರಲು ಸಾಕಷ್ಟು ನಿದ್ದೆ ಬೇಕು. ದಿನಕ್ಕೆ ಒಬ್ಬ ವಯಸ್ಕ ವ್ಯಕ್ತಿಗೆ 8 ಗಂಟೆ ನಿದ್ದೆ ಬೇಕು. ಅದು ನಿಯಮಿತವಾಗಿ ಸಿಗಬೇಕು, ಹಗಲು ಹೊತ್ತು ಒಂದಷ್ಟು ನಿದ್ದೆ ಮಾಡುವುದು, ರಾತ್ರಿ ನಾಲ್ಕೈದು ಗಂಟೆ ಹೀಗೆ ನಿದ್ದೆ ಮಾಡಿದರೆ ದೇಹಕ್ಕೆ ಸರಿಯಾದ ವಿಶ್ರಾಂತಿ ಸಿಗುವುದಿಲ್ಲ. ರಾತ್ರಿ ಗೊತ್ತು ಯಾವುದೇ ತೊಂದರೆಯಿಲ್ಲದೆ 7ರಿಂದ 8 ಗಂಟೆ ಕಾಲ ನಿದ್ದೆ ಸಿಕ್ಕಿದರೆ ಒಳ್ಳೆಯದು.

ಆಹಾರ, ಜೀರ್ಣದ ಮೇಲೆ ಗಮನಹರಿಸಿ: ನಾವು ಸೇವಿಸುವ ಆಹಾರ ಮತ್ತು ತಿಂದ ಆಹಾರ ಸರಿಯಾಗಿ ಜೀರ್ಣವಾಗುವುದು ಮನುಷ್ಯನ ಆರೋಗ್ಯದಲ್ಲಿ ಪ್ರಮುಖ ಪಾತ್ರ ವಹಿಸುವ ಅಂಶಗಳಾಗಿವೆ. ಪ್ರೊಟೀನ್, ವಿಟಮಿನ್, ಕೊಬ್ಬು, ಖನಿಜಾಂಶ, ಲವಣಾಂಶ, ಕ್ಯಾಲ್ಸಿಯಂ ಇವೆಲ್ಲವೂ ಸಮ ಪ್ರಮಾಣದಲ್ಲಿ ದೇಹಕ್ಕೆ ಸಿಗಬೇಕು.


ಅನಪೇಕ್ಷಿತ ಆಹಾರ ಸೇವನೆ ಬೇಡ: ಹೆಚ್ಚು ಕೊಬ್ಬು, ಮಸಾಲೆಯುಕ್ತ ಪದಾರ್ಥಗಳು, ಆಲ್ಕೋಹಾಲ್, ಸಿಗರೇಟ್, ಅಮಲು ಬರುವ ಪದಾರ್ಥಗಳು, ಸಕ್ಕರೆ ಪ್ರಮಾಣ ಹೆಚ್ಚಾಗಿರುವ ವಸ್ತುಗಳು ದೇಹಕ್ಕೆ ಖಂಡಿತಾ ಒಳ್ಳೆಯದಲ್ಲ.

ಸರಿಯಾದ ಆಹಾರ: ಪ್ರತಿಯೊಬ್ಬ ವ್ಯಕ್ತಿಯ ದೇಹಕ್ಕೆ ಸೂಕ್ತವಾದ ಆಹಾರ ಬೇರೆ ಬೇರೆಯದೇ ಇರುತ್ತದೆ. ಅವರವರ ದೇಹಕ್ಕೆ ಯಾವ ಆಹಾರ, ಎಷ್ಟು ಬೇಕು ಎಂದು ತಿಳಿದುಕೊಂಡು ಸರಿಯಾದ ಸಮಯಕ್ಕೆ ಸೇವಿಸಿದರೆ ಆರೋಗ್ಯ ಕಟ್ಟಿಟ್ಟ ಬುತ್ತಿಯಾಗುತ್ತದೆ. ಹೆಚ್ಚು ಸಿಟ್ರಸ್ ಹಣ್ಣುಗಳು, ಬೆಳ್ಳುಳ್ಳಿ, ಶುಂಠಿ, ಜೇನುತುಪ್ಪ, ಲವಂಗ, ಕೇಲ್, ಪಾಲಕ, ಕೋಸುಗಡ್ಡೆ, ಬೆಲ್ ಪೆಪರ್, ಮೊಸರು, ಬಾದಾಮಿ, ಅರಿಶಿನ, ಹಸಿರು ಚಹಾ, ಪಪ್ಪಾಯಿ, ಕಿವಿ, ದ್ರಾಕ್ಷಿಹಣ್ಣು, ನಿಂಬೆ, ಗೋಧಿ ರಸ, ಸೂರ್ಯಕಾಂತಿ ಬೀಜಗಳು ಮತ್ತು ಅಣಬೆಗಳಾದ ಶಿಟೇಕ್ ಮತ್ತು ಸಿಂಪಿ ಇತ್ಯಾದಿಗಳು ಉತ್ತಮ.

ಚರ್ಮ ಒಣಗಲು ಬಿಡಬೇಡಿ: ಚಳಿಗಾಲದಲ್ಲಿ ಚರ್ಮ ಒಣಗುವುದು ಸಾಮಾನ್ಯ. ಅದಕ್ಕೆ ತೆಂಗಿನ ಎಣ್ಣೆ ಹಚ್ಚುತ್ತಿರಬೇಕು. ತುಟಿಗೆ ಶುದ್ಧ ಹಸುವಿನ ತುಪ್ಪ ಅಥವಾ ಬೆಣ್ಣೆ ಒಳ್ಳೆಯದು. ಆಹಾರದಲ್ಲೂ ನಿಯಮಿತ ಸೇವನೆ ಉತ್ತಮ.

ಯೋಗ ಮಾಡಿ: ಪ್ರತಿದಿನ ಒಂದಷ್ಟು ಸಮಯ ಬೆಳಗ್ಗೆ ಅಥವಾ ಸಾಯಂಕಾಲ ಹೊತ್ತು ಧ್ಯಾನ, ಯೋಗ, ಕ್ರಿಯೆಗಳಿಗೆ ಸಮಯ ಮೀಸಲಿಟ್ಟರೆ ಮನಸ್ಸು ಮತ್ತು ದೇಹ ಪ್ರಫುಲ್ಲವಾಗಿರುತ್ತದೆ. ನಮ್ಮ ದೇಹಕ್ಕೆ ಯಾವ ರೀತಿಯ ಆಹಾರ, ಯೋಗ, ವ್ಯಾಯಾಮ, ನಡಿಗೆ ಬೇಕು ಎಂದು ವೈದ್ಯರನ್ನು, ತಜ್ಞರನ್ನು ಸಂಪರ್ಕಿಸಿ ಅವರು ಹೇಳಿದಂತೆ ಅನುಸರಿಸಿದರೆ ಒಳ್ಳೆಯದು.

SCROLL FOR NEXT