ಪಶ್ಚಿಮ ಬಂಗಾಳ, ತಮಿಳುನಾಡು, ಅಸ್ಸಾಂ, ಕೇರಳ ಮತ್ತು ಪುದುಚೇರಿ ವಿಧಾನಸಭಾ ಚುನಾವಣೆಗಳ ಮತ ಎಣಿಕೆ ಮೇ 4 ರಂದು ಬೆಳಿಗ್ಗೆ 8 ಗಂಟೆಗೆ ಪ್ರಾರಂಭವಾಗಲಿದೆ. ಕೆಲವು ಭಾಗಗಳಲ್ಲಿ 90% ಮತದಾನ ದಾಟಿದ್ದು, ಫಲಿತಾಂಶಗಳನ್ನು ಪ್ರಮುಖ ರಾಜಕೀಯ ಮಾಪಕವಾಗಿ ಗಮನಿಸಲಾಗುತ್ತಿದೆ.
ಎಲ್ಲಾ ಐದು ರಾಜ್ಯಗಳು ಮಹತ್ವದ್ದಾಗಿದ್ದರೂ, ಪಶ್ಚಿಮ ಬಂಗಾಳ ಮತ್ತು ತಮಿಳುನಾಡು ಪ್ರಮುಖ ಹಣಾಹಣಿ ರಾಜ್ಯಗಳಾಗಿ ಹೊರಹೊಮ್ಮಿವೆ.
ಪಶ್ಚಿಮ ಬಂಗಾಳದಲ್ಲಿ, ಮಮತಾ ಬ್ಯಾನರ್ಜಿಯವರ ತೃಣಮೂಲ ಕಾಂಗ್ರೆಸ್ (ಟಿಎಂಸಿ) ಮತ್ತು ಭಾರತೀಯ ಜನತಾ ಪಕ್ಷ (ಬಿಜೆಪಿ) ನಡುವೆ ಹೈ-ವೋಲ್ಟೇಜ್ ಮುಖಾಮುಖಿ ನಡೆದಿದೆ. 294 ಸ್ಥಾನಗಳನ್ನು ಹೊಂದಿರುವ ವಿಧಾನಸಭೆಯು ಈ ಬಾರಿ ಅತ್ಯಂತ ಉಗ್ರ ಪ್ರಚಾರಗಳನ್ನು ಕಂಡಿದೆ. ನರೇಂದ್ರ ಮೋದಿ ಮತ್ತು ಅಮಿತ್ ಶಾ ಸೇರಿದಂತೆ ಬಿಜೆಪಿಯ ಉನ್ನತ ನಾಯಕರು ವ್ಯಾಪಕವಾಗಿ ಪ್ರಚಾರ ಮಾಡಿದ್ದಾರೆ. ಈ ಚುನಾವಣೆಯಲ್ಲಿ ದಾಖಲೆಯ 92% ಕ್ಕಿಂತ ಹೆಚ್ಚು ಮತದಾನವಾಗಿದೆ.
ಏತನ್ಮಧ್ಯೆ, ತಮಿಳುನಾಡಿನಲ್ಲಿ ಎಂ.ಕೆ. ಸ್ಟಾಲಿನ್ ನೇತೃತ್ವದ ಆಡಳಿತಾರೂಢ ಡಿಎಂಕೆ, ಎಐಎಡಿಎಂಕೆ ನೇತೃತ್ವದ ಮೈತ್ರಿಕೂಟದ ವಿರುದ್ಧ ಅಧಿಕಾರವನ್ನು ಉಳಿಸಿಕೊಳ್ಳಲು ಪ್ರಯತ್ನಿಸುತ್ತಿದೆ. ನಟ-ರಾಜಕಾರಣಿ ವಿಜಯ್ ಅವರ ತಮಿಳಗ ವೆಟ್ರಿ ಕಳಗಂ (ಟಿವಿಕೆ) ತನ್ನ ಚೊಚ್ಚಲ ಚುನಾವಣೆಯಲ್ಲಿ ಗಮನಾರ್ಹ ಪಕ್ಷವಾಗಿ ಹೊರಹೊಮ್ಮಿದೆ.
ಕರ್ನಾಟಕದ ಬಾಗಲಕೋಟೆ ಮತ್ತು ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರಗಳಿಗೆ ಉಪಚುನಾವಣೆ ನಡೆದಿದ್ದು, ಮೇ 4, 2026ರಂದು ಫಲಿತಾಂಶ ಪ್ರಕಟವಾಗಲಿದೆ.
ಆಡಳಿತಾರೂಢ ಕಾಂಗ್ರೆಸ್ ಎರಡೂ ಸ್ಥಾನಗಳನ್ನು ಉಳಿಸಿಕೊಳ್ಳಲು ಪ್ರಯತ್ನಿಸುತ್ತಿದ್ದರೇ ಬಿಜೆಪಿ ಅವುಗಳನ್ನು ವಶಪಡಿಸಿಕೊಳ್ಳುವ ಗುರಿಯನ್ನು ಹೊಂದಿದೆ. ಹಿರಿಯ ಕಾಂಗ್ರೆಸ್ ಶಾಸಕರಾದ ಎಚ್ ವೈ ಮೇಟಿ (ಬಾಗಲಕೋಟೆ) ಮತ್ತು ಶಾಮನೂರು ಶಿವಶಂಕರಪ್ಪ (ದಾವಣಗೆರೆ ದಕ್ಷಿಣ) ಅವರ ನಿಧನದಿಂದಾಗಿ ಉಪಚುನಾವಣೆ ಘೋಷಣೆಯಾಗಿತ್ತು.
ಬಿಜೆಪಿ ಬಾಗಲಕೋಟೆಯಿಂದ ಮಾಜಿ ಶಾಸಕ ಮತ್ತು 2023ರ ಪರಾಜಿತ ಅಭ್ಯರ್ಥಿ ವೀರಭದ್ರಯ್ಯ ಚರಂತಿಮಠ ಮತ್ತು ದಾವಣಗೆರೆ ದಕ್ಷಿಣದಿಂದ ಹೊಸ ಮುಖ ಶ್ರೀನಿವಾಸ್ ಟಿ ದಾಸಕರಿಯಪ್ಪ ಅವರನ್ನು ಕಣಕ್ಕಿಳಿಸಿದೆ. ಕಾಂಗ್ರೆಸ್ ಎರಡೂ ಕ್ಷೇತ್ರಗಳಲ್ಲಿ ದಿವಂಗತ ಶಾಸಕರ ಕುಟುಂಬ ಸದಸ್ಯರಿಗೆ ಟಿಕೆಟ್ ನೀಡಿದೆ. ಬಾಗಲಕೋಟೆ ಅಭ್ಯರ್ಥಿ ಉಮೇಶ್ ಮೇಟಿ ಎಚ್ ವೈ ಮೇಟಿ ಅವರ ಪುತ್ರರಾಗಿದ್ದರೆ, ದಾವಣಗೆರೆ ದಕ್ಷಿಣದ ಅಭ್ಯರ್ಥಿ ಸಮರ್ಥ ಮಲ್ಲಿಕಾರ್ಜುನ್ ಶಾಮನೂರು ಶಿವಶಂಕರಪ್ಪ ಅವರ ಮೊಮ್ಮಗ ಆಗಿದ್ದಾರೆ.
ತಮಿಳುನಾಡು ವಿಧಾನಸಭೆಯ ವಿವಿಧ ಚುನಾವಣಾ ಸಮೀಕ್ಷೆಗಳ ಪ್ರಕಾರ, ವಿಜಯ್ ಕಿಂಗ್ ಮೇಕರ್ ಆಗುವ ಸಾಧ್ಯತೆಯಿದೆ ಎನ್ನಲಾಗಿದೆ. ಈ ಹಿನ್ನೆಲೆಯಲ್ಲಿ ಸಂಭಾವ್ಯ ಕುದುರೆ ವ್ಯಾಪಾರದ ವಿರುದ್ಧ ನಾಯಕರು ಎಚ್ಚರ ವಹಿಸಿದ್ದಾರೆ. ತಮಿಳುನಾಡಿನಲ್ಲಿ "ರೆಸಾರ್ಟ್ ರಾಜಕೀಯ"ದ ಆರಂಭವಾಗುವ ಸಾಧ್ಯತೆಯೂ ಹೆಚ್ಚಾಗಿದೆ.
ಫಲಿತಾಂಶ ಘೋಷಣೆಯಾದ ನಂತರ ಎಲ್ಲಾ ವಿಜೇತ ಟಿವಿಕೆ ಅಭ್ಯರ್ಥಿಗಳು ಪಕ್ಷದ ಪನೈಯೂರ್ ಪ್ರಧಾನ ಕಚೇರಿಗೆ ತಕ್ಷಣ ಬರುವಂತೆ ಸೂಚನೆಗಳನ್ನು ನೀಡಲಾಗಿದೆ ಎಂದು ಮೂಲಗಳು ತಿಳಿಸಿವೆ.
ಮತ ಎಣಿಕೆಯ ಪಾರದರ್ಶಕ ಮತ್ತು ಸುಗಮತೆಯನ್ನು ಖಚಿತಪಡಿಸಿಕೊಳ್ಳಲು ಚುನಾವಣಾ ಆಯೋಗವು ಸೋಮವಾರ ಪಶ್ಚಿಮ ಬಂಗಾಳದ ಎಲ್ಲಾ 294 ವಿಧಾನಸಭಾ ಕ್ಷೇತ್ರಗಳಲ್ಲಿ 432 ಎಣಿಕೆ ವೀಕ್ಷಕರನ್ನು ನಿಯೋಜಿಸಿದೆ. ಸೂಕ್ಷ್ಮತೆ ಮತ್ತು ಚುನಾವಣಾ ಪ್ರಾಮುಖ್ಯತೆಯಿಂದಾಗಿ ಹಲವಾರು ಜಿಲ್ಲೆಗಳಲ್ಲಿ ಹೆಚ್ಚುವರಿ ವೀಕ್ಷಕರನ್ನು ನಿಯೋಜಿಸಲಾಗಿದೆ ಎಂದು ಚುನಾವಣಾ ಆಯೋಗವು ತಿಳಿಸಿದೆ.
ಉತ್ತರ 24 ಪರಗಣ ಜಿಲ್ಲೆಯ 33 ಕ್ಷೇತ್ರಗಳಿಗೆ ನಲವತ್ತೊಂಬತ್ತು ವೀಕ್ಷಕರನ್ನು ನಿಯೋಜಿಸಲಾಗಿದ್ದು, ದಕ್ಷಿಣ 24 ಪರಗಣ ಜಿಲ್ಲೆಯ 31 ಕ್ಷೇತ್ರಗಳಿಗೆ 45 ವೀಕ್ಷಕರನ್ನು ನಿಯೋಜಿಸಲಾಗಿದೆ. ಮುರ್ಷಿದಾಬಾದ್ನಲ್ಲಿ 22 ಕ್ಷೇತ್ರಗಳಿಗೆ 33 ವೀಕ್ಷಕರನ್ನು ನಿಯೋಜಿಸಲಾಗಿದೆ. ಡಾರ್ಜಿಲಿಂಗ್, ಜಲ್ಪೈಗುರಿ ಮತ್ತು ಉತ್ತರ ದಿನಾಜ್ಪುರದಂತಹ ಜಿಲ್ಲೆಗಳಲ್ಲಿ, ಪ್ರತಿ ಕ್ಷೇತ್ರಕ್ಕೆ ಒಬ್ಬ ಹೆಚ್ಚುವರಿ ವೀಕ್ಷಕರನ್ನು ಒದಗಿಸಲಾಗಿದೆ.
ನಾಲ್ಕು ರಾಜ್ಯಗಳು ಹಾಗೂ ಒಂದು ಕೇಂದ್ರಾಡಳಿತ ಪ್ರದೇಶದ ಮತ ಎಣಿಕೆ ನಾಳೆ ನಡೆಯಲಿದ್ದು, ಫಲಿತಾಂಶದತ್ತ ಜನರ ಚಿತ್ತ ನೆಟ್ಟಿದೆ. ಈ ಮಧ್ಯೆ ಮತ ಎಣಿಕೆಗೂ ಮುನ್ನಾ ಬೆಟ್ಟಿಂಗ್ ಭರಾಟೆಯೂ ಜೋರಾಗಿ ನಡೆಯುತ್ತಿದೆ. ಕೇರಳದ ಹಿರಿಯ ರಾಜಕಾರಣಿಯೊಬ್ಬರು ಚುನಾವಣೆಯಲ್ಲಿ ತಾನು ಗೆಲ್ಲುವುದಾಗಿ 1 ಕೋಟಿ ರೂ. ಬೆಟ್ಟಿಂಗ್ ಕಟ್ಟುವುದಾಗಿ ಹೇಳಿದ್ದಾರೆ.
ಕೇರಳದ ಪೂಂಜಾರ್ ವಿಧಾನಸಭಾ ಕ್ಷೇತ್ರದ ಭಾರತೀಯ ಜನತಾ ಪಕ್ಷದ ಅಭ್ಯರ್ಥಿ ಪಿ.ಸಿ. ಜಾರ್ಜ್, ಚುನಾವಣೆಯಲ್ಲಿ ಭರ್ಜರಿ ಗೆಲುವು ಸಾಧಿಸುವುದಾಗಿ ಭಾನುವಾರ ಹೇಳಿದ್ದು, ತನ್ನ ಮಾತಿಗೆ ತಕ್ಕಂತೆ 1 ಕೋಟಿ ರೂ. ಬೆಟ್ಟಿಂಗ್ ಕಟ್ಟುವುದಾಗಿ ಹೇಳಿದ್ದಾರೆ.
ನೆರೆಯ ಪಾಲಾ ಕ್ಷೇತ್ರದಲ್ಲಿ ತಮ್ಮ ಮಗ ಶೋನ್ ಜಾರ್ಜ್ ಗೆಲುವಿನ ಭವಿಷ್ಯ ನುಡಿದ ಜಾರ್ಜ್, ಈ ಬಾರಿಯ ಚುನಾವೆಯಲ್ಲಿ ಇಬ್ಬರು ಗೆದ್ದು ತಂದೆ-ಮಗ ಜೋಡಿ ಒಟ್ಟಾಗಿ ಸದನ ಪ್ರವೇಶಿಸಲಿದೆ ಎಂದು ಹೇಳಿದರು.