ನವದೆಹಲಿ: ವಿದೇಶ ಪ್ರವಾಸಗಳಲ್ಲಿ ನರೇಂದ್ರ ಮೋದಿ ನಡೆಸುವ ಸಭೆಗಳಿಗೆ ದೊಡ್ಡ ಪ್ರಮಾಣದಲ್ಲಿ ಜನರು ಹೇಗೆ ಸೇರುತ್ತಾರೆ ಎಂಬ ಅನುಮಾನವನ್ನು ಮಾಜಿ ವಿದೇಶಾಂಗ ಸಚಿವ ಸಲ್ಮಾನ್ ಖುರ್ಷಿದ್ ವ್ಯಕ್ತಪಡಿಸಿದ್ದು, ಇದಕ್ಕೆ ಬಿಜೆಪಿ ತಿರುಗೇಟು ನೀಡಿದೆ.
ಸಲ್ಮಾನ್ ಖುರ್ಷಿದ್ ಮಾಡಿರುವ ಆರೋಪಕ್ಕೆ ಬಿಜೆಪಿ ತೀವ್ರವಾಗಿ ಖಂಡಿಸಿದೆ. ಪರಿಸರ ಸಚಿವ ಪ್ರಕಾಶ ಜಾವೆಡ್ಕರ್ ಅವರು, ಕಳೆದ ಚುನಾವಣೆಗಳಲ್ಲಿ ಹೀನಾಯ ಸೋಲು ಕಂಡಿರುವ ಕಾಂಗ್ರೆಸ್ನ ಹತಾಶೆಯ ಮಾತುಗಳಿವು ಎಂದಿದ್ದಾರೆ.
ಪ್ರಧಾನಿ ವಿದೇಶ ಪ್ರವಾಸಕ್ಕೆ ಹೋದಾಗಲೆಲ್ಲಾ ಭಾರತದಿಂದಲೇ ತಮ್ಮ ಬೆಂಬಲಿಗರನ್ನು ಕರೆದುಕೊಂಡು ಹೋಗುತ್ತಾರೆ ಎಂದು ಖುರ್ಷಿದ್ ಹೇಳಿದ್ದಾರೆ. ಇದನ್ನು ನಂಬಲು ಕಷ್ಟವಾಗಿದ್ದರೆ ಫ್ಲೈಟ್ ಟಿಕೆಟ್ಗಳನ್ನು ಪರಿಶೀಲಿಸಿ ಎಂದು ಖುರ್ಷಿದ್ ಸಾಕ್ಷ್ಯಧಾರವನ್ನು ಹೆಸರಿಸುತ್ತಾರೆ.
ಮಯನ್ಮಾರ್ ಪ್ರವಾಸದ ವೇಳೆ ಮೋದಿ ಅಲ್ಲಿನ ಅನಿವಾಸಿ ಭಾರತೀಯರನ್ನುದ್ದೇಶಿಸಿ ಮಾಡಿದ ಭಾಷಣವನ್ನೇ ಸಲ್ಮಾನ್ ಖುರ್ಷಿದ್ ತಮ್ಮ ಉದಾಹರಣೆಯನ್ನಾಗಿ ತೆಗೆದುಕೊಂಡಿದ್ದಾರೆ. ಮಯನ್ಮಾರ್'ನ ರಾಜಧಾನಿಯ ರಸ್ತೆಗಳು ಸಾಮಾನ್ಯವಾಗಿ ಬಿಕೋ ಎನ್ನುತ್ತಿರುತ್ತವೆ. ಮೋದಿ ಅಲ್ಲಿಗೆ ಹೋದಾಗ ಭಾರತೀಯ ಮೂಲದ ಜನರು ಅಷ್ಟು ಸಂಖ್ಯೆಯಲ್ಲಿ ಹೇಗೆ ಸೇರಿದರು ಎಂಬುದು ಖುರ್ಷಿದ್'ಗೆ ಅಚ್ಚರಿ ತಂದಿದೆ.