ದೇಶ

ಹೈದರಾಬಾದಿನಲ್ಲಿ ಶೂಟ್ಔಟ್: ಉದ್ಯಮಿ ಅಪಹರಣಕ್ಕೆ ಯತ್ನ

Srinivasamurthy VN

ಹೈದರಾಬಾದ್: ಮುತ್ತಿನನಗರಿ ಹೈದರಾಬಾದಿನಲ್ಲಿ ಬುಧವಾರ ಬೆಳಗ್ಗೆ ಶೂಟ್ಔಟ್ ನಡೆದಿದ್ದು, ಖ್ಯಾತ ಉದ್ಯಮಿಯೊಬ್ಬರನ್ನು ಅಪಹರಿಸಲು ದುಷ್ಕಮಿ೯ಯೊಬ್ಬ ಯತ್ನಿಸಿದ್ದಾನೆ.

ಅರಬಿಂದೋ  ಫಾರ್ಮಾ ಸಂಸ್ಥೆಯ ಮುಖ್ಯಸ್ಥ ಕೆ.ನಿತ್ಯಾನಂದರೆಡ್ಡಿ ಅವರನ್ನು ದುಷ್ಕರ್ಮಿಯೊಬ್ಬ ಅಪಹರಿಸಲು ಯತ್ನಿಸಿದ್ದು, ಈ ವೇಳೆ ಗುಂಡಿನ ಚಕಮಕಿಯಾಗಿದೆ ಎಂದು ತಿಳಿದುಬಂದಿದೆ.

ಹೈದರಾಬಾದಿನ ಖ್ಯಾತ ಉದ್ಯಾನವನ ಕೆಬಿಆರ್ ಪಾಕಿ೯ನಲ್ಲಿ ಇಂದು ಬೆಳಗ್ಗೆ 7ಗಂಟೆಯ ಸುಮಾರಿನಲ್ಲಿ ವಾಕಿಂಗ್ ಗೆ ಆಗಮಿಸಿದ್ದ ನಿತ್ಯಾನಂದರೆಡ್ಡಿ ಅವರು ವಾಕಿಂಗ್ ಮುಗಿಸಿ ಮನೆಗೆ ವಾಪಸಾಗಲು ತಮ್ಮ ಬಿಳಿ ಬಣ್ಣದ ಆಡಿ ಕಾರಿನಲ್ಲಿ ಕುಳಿತುಕೊಳ್ಳುತ್ತಿದ್ದಂತೆಯೇ ಕಾರಿನ ಬಾಗಿಲನ್ನು ಬಲವಂತವಾಗಿ ತೆರೆದ ದುಷ್ಕರ್ಮಿಯೊಬ್ಬ ತನ್ನ ಬಳಿ ಇದ್ದ ಎಕೆ47 ಬಂದೂಕನ್ನು ತೋರಿಸಿ ಅವರನ್ನು ಅಪಹರಿಸಲು ಯತ್ನಿಸಿದ್ದಾನೆ.

ಆದರೆ ಅಪಹರಣಕಾರನ ಒತ್ತಡಕ್ಕೆ ಮಣಿಯದ ನಿತ್ಯಾನಂದ ರೆಡ್ಡಿ ಅವರು ಆತನಿಂದ ತಪ್ಪಿಸಿಕೊಳ್ಳಲು ಯತ್ನಿಸಿದ್ದಾರೆ. ಈ ವೇಳೆ ಇಬ್ಬರ ನಡುವೆಯೂ ಎಳೆದಾಟ ಶುರುವಾಗಿದ್ದು, ಇದನ್ನು ಅಲ್ಲಿಯೇ ಹತ್ತಿರದಲ್ಲಿ ವಾಕಿಂಗ್ ಮಾಡುತ್ತಿದ್ದ ನಿತ್ಯಾನಂದ ರೆಡ್ಡಿ ಅವರ ಸಹೋದರ ಪ್ರಸಾದ್ ರೆಡ್ಡಿ ಗಮನಿಸಿದ್ದು, ಕೂಡಲೇ ಓಡಿ ಬಂದು ತಮ್ಮ ಅಣ್ಣನನ್ನು ಬಿಡಿಸಲು ಯತ್ನಿಸಿದ್ದಾರೆ. ಈ ವೇಳೆ ಅಪಹರಣಕಾರ ತನ್ನ ಬಳಿ ಇದ್ದ ಎಕೆ47 ಬಂದೂಕಿನಿಂದ 3ಸುತ್ತು ಗುಂಡುಹಾರಿಸಿದ್ದಾನೆ.

ಅದೃಷ್ಟವಶಾತ್ ದಾಳಿಯಲ್ಲಿ .ಯಾರಿಗೂ ಹಾನಿಯಾಗಲಿಲ್ಲ. ಆದರೆ  ದುಷ್ಕರ್ಮಿಯ ಗುಂಡಿನ ದಾಳಿಗೆ ಜಗ್ಗದ ಪ್ರಸಾದ್ ರೆಡ್ಡಿ ಅವರು ತಮ್ಮ ಅಣ್ಣನನ್ನು ಬಿಡಿಸಿಕೊಂಡಿದ್ದೇ ಅಲ್ಲದೆ ದುಷ್ಕರ್ಮಿಯನ್ನು ಗಟ್ಟಿಯಾಗಿ ಹಿಡಿದುಕೊಂಡಿದ್ದಾರೆ. ಈ ವೇಳೆ ಪ್ರಸಾದ್ ಅವರ ಕೈಯನ್ನು ಬಲವಾಗಿ ಕಚ್ಚಿದ ದುಷ್ಕರ್ಮಿ ಪರಾರಿಯಾಗಿದ್ದಾನೆ. ಮೂವರ ನಡುವಿನ ಜಗಳದ ಮಧ್ಯೆ ದುಷ್ಕರ್ಮಿ ತಂದಿದ್ದ ಎಕೆ47 ಬಂದೂಕು ನಿತ್ಯಾನಂದ ರೆಡ್ಡಿ ಅವರ ಕಾರಿನ ಹಿಂಬದಿಯಲ್ಲೇ ಬಿದ್ದಿತ್ತು.

ಪ್ರಕರಣ ದಾಖಲಿಸಿಕೊಂಡಿರುವ ಬಂಜಾರಾ ಹಿಲ್ಸ್ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಘಟನೆ ಕುರಿತಂತೆ ಮಾಧ್ಯಮಗಳಿಗೆ ಮಾಹಿತಿ ನೀಡಿರುವ ಹೈದರಾಬಾದ್ ಪೊಲೀಸ್ ಕಮಿಷನರ್ ಮಹೇಂದರ್ ರೆಡ್ಡಿ ಅವರು, ನಿತ್ಯಾನಂದ ರೆಡ್ಡಿ ಅವರ ಕಾರಿನ ಹಿಂಬದಿಯಲ್ಲಿ ದೊರೆತಿರುವ ಎಕೆ47 ಬಂದೂಕಿನ ವಿವರ ಪತ್ತೆಯಾಗಿದೆ. ಇದು ಗಣ್ಯರಿಗೆ ಭದ್ರತೆ ನೀಡುವ ಭದ್ರತಾ ಸಿಬ್ಬಂದಿಗಳಿಂದ ಕದ್ದಿರುವ ಬಂದೂಕಾಗಿದೆ ಎಂದು ತಿಳಿಸಿದ್ದಾರೆ.

ದೇಶದ ಪ್ರಮುಖ  ಮತ್ತು ದೊಡ್ಡ ಔಷಧ ತಯಾರಿಕಾ ಸಂಸ್ಥೆಗಳ ಪೈಕಿ ಅರಬಿಂದೋ ಫಾರ್ಮಾ ಕೂಡ ಒಂದಾಗಿದ್ದು, ನಿತ್ಯಾನಂದ ರೆಡ್ಡಿ ಅವರು ಸಂಸ್ಥೆಯ ನಿದೇಶಕ ಮತ್ತು ಉಪಾಧ್ಯಕ್ಷರಾಗಿದ್ದಾರೆ.

SCROLL FOR NEXT