ಪಾಟ್ನಾ: ವಿವಾದಾತ್ಮಕ ಹೇಳಿಕೆಗಳನ್ನು ನೀಡದಂತೆ ಬಿಹಾರ ಮುಖ್ಯಮಂತ್ರಿ ಜೀತನ್ ರಾಮ್ ಮಂಝಿ ಅವರಿಗೆ ಜೆಡಿ(ಯು) ತಾಕೀತು ಮಾಡಿದೆ.
ಸಿಎಂ ಮಂಝಿ ಅವರು ನಿನ್ನೆ ಬಿಹಾರದ ಅಭಿವೃದ್ಧಿಗೆ ಪ್ರಾಮುಖ್ಯತೆ ನೀಡದ ರಾಜ್ಯದಿಂದ ಸಂಸದರಾಗಿ ಕೇಂದ್ರದಲ್ಲಿ ಸಚಿವರಾಗಿರುವವರಿಗೆ ರಾಜ್ಯದೊಳಗೆ ಬರಲು ಬಿಡುವುದಿಲ್ಲ ಎಂಬ ವಿವಾದಾತ್ಮಕ ಹೇಳಿಕೆ ನೀಡಿದ್ದರು. ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಜೆಡಿಯು ಪ್ರಧಾನ ಕಾರ್ಯದರ್ಶಿ ಕೆ.ಸಿ ತ್ಯಾಗಿ ಅವರು, ಇನ್ನು ಮುಂದೆ ವಿವಾದಾತ್ಮಕ ಹೇಳಿಕೆ ನೀಡದಂತೆ ಮುಖ್ಯಮಂತ್ರಿಗಳಿಗೆ ಎಚ್ಚರಿಸಿದ್ದಾರೆ.
ತಾವು ನೀಡುವ ಹೇಳಿಕೆಗಳಿಂದ ಪಕ್ಷಕ್ಕೆ ನೋವುಂಟಾಗುತ್ತದೆ. ಅಲ್ಲದೆ ಪಕ್ಷದ ನಾಯಕರಿಕೆ ಇದರಿಂದ ಇರಿಸು ಮುರಿಸಾಗುತ್ತದೆ. ಜೊತೆಗೆ ಪಕ್ಷದ ಕಾರ್ಯಕರ್ತರ ಆತ್ಮಸ್ಥೈರ್ಯ ಕುಂದಿಸುತ್ತದೆ ಎಂದು ತ್ಯಾಗಿ ಹೇಳಿದ್ದಾರೆ.
ವ್ಯತಿರಿಕ್ತ ಹೇಳಿಕೆಗಳನ್ನು ನೀಡುವುದರಿಂದ ಇದನ್ನು ತನ್ನ ಸ್ವಂತ ಲಾಭಕ್ಕಾಗಿ ಬಿಜೆಪಿ ಬಳಸಿಕೊಳ್ಳುವ ಸಾಧ್ಯತೆ ಇದೆ. ಸದ್ಯದ ಪರಿಸ್ಥಿತಿಯಲ್ಲಿ ಕೋಮು ಶಕ್ತಿಗಳ ವಿರುದ್ಧ ಹೋರಾಡಿ ಪಕ್ಷವನ್ನು ಸಮರ್ಥವಾಗಿ ಕಟ್ಟುವಂತಾ ಸಮಯ ಇದಾಗಿದೆ. ಹೀಗಾಗಿ ನಾವು ಪಕ್ಷದಲ್ಲಿ ಒಡಕಿದೆ ಎಂದು ತೋರಿಸುವಂತಾ ಹೇಳಿಕೆ ನೀಡಬಾರದು ಎಂದರು.