ಜಮ್ಮು: ಜಮ್ಮು ಮತ್ತು ಕಾಶ್ಮೀರದ ಗಡಿಯಲ್ಲಿ ಉಗ್ರರು ಮತ್ತು ಸೇನಾ ಪಡೆಗಳ ನಡುವಿನ ಗುಂಡಿನ ಕಾಳಗ ಮುಕ್ತಾಯವಾಗಿದ್ದು, ದಾಳಿಯಲ್ಲಿ ಓರ್ವ ಯೋಧ ಸೇರಿದಂತೆ 9 ಮಂದಿ ಸಾವನ್ನಪ್ಪಿದ್ದಾರೆ.
ಕಥರ್ ಹಳ್ಳಿಯ ಅರ್ನಿಯಾ ಪ್ರದೇಶದ ಗಡಿಯಲ್ಲಿ ನಾಲ್ವರು ಉಗ್ರರು ಗುಂಡಿನ ದಾಳಿ ನಡೆಸಿದ್ದರು. ಉಗ್ರರ ದಾಳಿಗೆ ಪ್ರತಿದಾಳಿ ನಡೆಸಿದ ಭಾರತೀಯ ಯೋಧರು ನಾಲ್ವರು ಉಗ್ರರರನ್ನು ಹತ್ಯೆಗೈಯುವಲ್ಲಿ ಸಫಲರಾದ್ದಾರೆ. ದಾಳಿಯಲ್ಲಿ ಓರ್ವ ಯೋಧ, ನಾಲ್ವರು ಉಗ್ರರು ಹಾಗೂ ಮೂವರು ನಾಗರಿಕರು ಮೃತಪಟ್ಟಿದ್ದಾರೆ.
ಉಗ್ರರ ದಾಳಿ ಕುರಿತಂತೆ ಈಗಾಗಲೇ ಪ್ರತಿಕ್ರಿಯೆ ನೀಡಿರುವ ಜಮ್ಮು ಕಾಶ್ಮೀರ ಮುಖ್ಯಮಂತ್ರಿ ಒಮರ್ ಅಬ್ದುಲ್ಲಾ, ಸೂಕ್ಷ್ಮ ಪ್ರದೇಶಗಳಲ್ಲಿ ಹೈ ಅಲರ್ಟ್ ಘೋಷಿಸಲಾಗಿದೆ ಎಂದು ಹೇಳಿದ್ದಾರೆ.
ನಿನ್ನೆಯಷ್ಟೇ ಪ್ರಧಾನಿ ನರೇಂದ್ರ ಮುಖ್ಯಮಂತ್ರಿ ನೇಪಾಳದ 18ನೇ ಸಾರ್ಕ್ ಶೃಂಗಸಭೆಯಲ್ಲಿ ಪಾಲ್ಗೊಂಡು ನಮ್ಮದು ಅಭಿವೃದ್ದಿ ಪ್ರಜಾಪ್ರಭುತ್ವ ರಾಷ್ಟ್ರ. ಭಯೋತ್ಪಾದನೆ ಎಂಬುದು ಕೇವಲ ದಕ್ಷಿಣ ಏಷ್ಯಾ ರಾಷ್ಟ್ರಗಳಿಗೆ ಮಾತ್ರವಲ್ಲದೇ ಈಡೀ ವಿಶ್ವವನ್ನು ಕಾಡುತ್ತಿರುವ ಪಿಡುಗಾಗಿದ್ದು, ಭಯೋತ್ಪಾದನೆ ವಿರುದ್ಧ ಹೋರಾಡಲು ದಕ್ಷಿಣ ಏಷ್ಯಾ ರಾಷ್ಟ್ರಗಳಿಗಿಂತಲೂ ಹೆಚ್ಚಾಗಿ ವಿಶ್ವ ಸಮುದಾಯದ ಸಾಂಘಿಕತೆ ಅಗತ್ಯತೆ ಇರುವುದರಿಂದ ಭಯೋತ್ಪಾದನೆ ವಿರುದ್ಧ ಇಡೀ ವಿಶ್ವವೇ ಸಾಂಘಿಕವಾಗಿ ಹೋರಾಟ ನಡೆಸಬೇಕು ಎಂದು ಹೇಳಿದ್ದರು.
ಅಪ್ರಚೋದಿತ ದಾಳಿ ನಡೆಸಿತ್ತಿರುವ ಪಾಕ್ ಉಗ್ರರು ನಿನ್ನೆಯಷ್ಟೇ ಪೂಂಚ್ ಜಿಲ್ಲೆಯ ಗಡಿ ನಿಯಂತ್ರಣ ಭದ್ರತಾ ಪಡೆಗಳ ನೆಲೆಗಳ ಮೇಲೆ ಗುಂಡಿನ ದಾಳಿ ನಡೆಸಿ ಗಡಿಯಿಂದ ಒಳನುಸುಳಲು ಪ್ರಯತ್ನಿಸಿದ್ದರು.
ಮಂಗಳವಾರ ಮುಂಜಾನೆಯ ಸಮಯದಲ್ಲಿ ಪಾಕಿಸ್ತಾನದ ಉಗ್ರರ ಗುಂಪೊಂದು ಪೂಂಚ್ ಜಿಲ್ಲೆಯ ಪಂಜ್ನಿ ನಲ್ಲಾಹ್ದ ಬಲಕೋಟೆ ಗಡಿಯಿಂದ ಸುಮಾರು 48 ಗಂಟೆಗಳ ಕಾಲ ಒಳನುಸುಳಲು ಪ್ರಯತ್ನಿಸಿದ್ದರಲ್ಲದೇ ತಮ್ಮ ಪ್ರಯತ್ನದಲ್ಲಿ ವಿಫಲರಾಗಿದ್ದರು.
ಉಗ್ರರು ಭಾರತದೊಳಗೆ ನುಸುಳಲೆತ್ನಿಸಿದಾಗ ಭದ್ರತಾ ಪಡೆಗಳು ಈ ಪ್ರಯತ್ನಕ್ಕೆ ದಿಟ್ಟ ಉತ್ತರ ನೀಡುವ ಮೂಲಕ ಪ್ರಯತ್ನ ವಿಫಲವಾಗುವಂತೆ ಮಾಡಿತ್ತು. ಆದರೆ ಮತ್ತೆ ಖ್ಯಾತೆ ತೆಗೆಯಲು ಮುಂದಾದ ಉಗ್ರರು ಇಂದು ಬೆಳಿಗಿನ ಜಾವ ಕೂಡ 2 ಗಂಟೆಯ ಸುಮಾರಿಗೆ ಒಳನುಸುಳಲು ಪ್ರಯತ್ನಿಸಿದ್ದರು ಆದರೇ ಈ ಪ್ರಯತ್ನದಲ್ಲೂ ಅವರು ವಿಫಲರಾದರು ಎಂದು ಹಿರಿಯ ಅಧಿಕಾರಿಯೊಬ್ಬರು ಹೇಳಿದ್ದರು.
ಅಲ್ಲದೇ, ದೇಶದಲ್ಲಿ ವಿಧ್ವಂಸಕ ಕೃತ್ಯವೆಸಗಲು ಹಾಗೂ ಚುನಾವಣಾ ಪ್ರಕ್ರಿಯೆಯನ್ನು ಹಾಳುಮಾಡುವ ಉಗ್ರರ ಯಾವುದೇ ಪ್ರಯತ್ನಕ್ಕೂ ಭಾರತೀಯ ಭದ್ರತಾ ಪಡೆಗಳು ಆಸ್ಪದ ಕೊಡುವುದಿಲ್ಲ ಎಂದು ಹೇಳಿರುವ ಅವರು, ಈಗಾಗಲೇ ಪ್ರತಿಯೊಂದು ಗಡಿ ರೇಖೆಯಲ್ಲೂ ಭದ್ರತಾ ಪಡೆಗಳು ಚುರುಕಾಗಿ ಕಾರ್ಯನಿರ್ವಹಿಸುತ್ತಿವೆ ಎಂದು ತಿಳಿಸಿದ್ದರು.
ಜಮ್ಮು ಮತ್ತು ಕಾಶ್ಮೀರದಲ್ಲಿ ವಿಧಾನಸಭಾ ಚುನಾವಣೆ ನಡೆಯುದಿದ್ದು, ಇನ್ನು ಡಿ.2 ರಂದು ಪೂಂಚ್ ಜಿಲ್ಲೆಯ ಪೂಂಚ್ ಹವೇಲಿ, ಸುರಂಕೊರ್ ಮತ್ತು ಮೆಂದಾರ್ ಪ್ರದೇಶಗಳಲ್ಲಿ ಚುನಾವಣೆ ನಡೆಯಬೇಕಿದೆ.
ಮೂಲಗಳ ಪ್ರಕಾರ ಜಮ್ಮು ಮತ್ತು ಕಾಶ್ಮೀರದಲ್ಲಿ ಚುನಾವಣೆ ಪ್ರಕ್ರಿಯೆಯನ್ನು ಹಾಳು ಮಾಡಿ ದೇಶದಲ್ಲಿ ವಿಧ್ವಂಸಕ ಕೃತ್ಯವೆಸಗಬೇಕೆನ್ನುವ ಉದ್ದೇಶದಿಂದ ಗಡಿಯಲ್ಲಿ ಪಾಕಿಸ್ತಾನಿ ಉಗ್ರರು ಒಳನುಸುಳುವ ಪ್ರಯತ್ನ ನಡೆಸುತ್ತಿದ್ದಾರೆ ಎಂದು ತಿಳಿದುಬಂದಿದೆ.