ನ್ಯೂಯಾರ್ಕ್: ಭೋಪಾಲ್ ಅನಿಲ ದುರಂತ ಪ್ರಕರಣದ ಪ್ರಮುಖ ಆರೋಪಿ ಮತ್ತು ಯೂನಿಯನ್ ಕಾರ್ಬೈಡ್ ಸಂಸ್ಥೆ ಮಾಜಿ ಅಧ್ಯಕ್ಷ ವಾರೆನ್ ಆಂಡರ್ಸನ್ ನಿಧನರಾಗಿದ್ದಾರೆ.
ಫ್ಲೋರಿಡಾದ ಖಾಸಗಿ ನರ್ಸಿಂಗ್ ಹೋಂನಲ್ಲಿ ವಾರೆನ್ ಆಂಡರನ್ ಸನ್ ನಿಧನರಾಗಿದ್ದು ಅವರಿಗೆ 92 ವರ್ಷ ವಯಸ್ಸಾಗಿತ್ತು. ಸೆಪ್ಟೆಂಬರ್ 29ರಂದೇ ಅಂಡರ್ಸನ್ ನಿಧನರಾಗಿದ್ದು, ಅವರ ಸಾವಿನ ಸುದ್ದಿಯನ್ನು ಅವರ ಕುಟುಂಬ ಸದಸ್ಯರು ಈ ವರೆಗೂ ಬಹಿರಂಗಪಡಿಸಿಲ್ಲ. ಬದಲಿಗೆ ನ್ಯೂಯಾರ್ಕ್ ಟೈಮ್ಸ್ ಪತ್ರಿಕೆ ಈ ವಿಚಾರವನ್ನು ಪ್ರಕಟಿಸಿದೆ. ಅಂತೆಯೇ ಸಾರ್ವಜನಿಕ ಮೂಲಗಳು ಕೂಡ ಆಂಡರ್ಸನ್ ನಿಧನ ವಾರ್ತೆಯನ್ನು ಖಚಿತಪಡಿಸಿದೆ.
1983 ಡಿಸೆಂಬರ್ 2ರಲ್ಲಿ ನಡೆದಿದ್ದ ಭೋಪಾಲ್ ಅನಿಲ ದುರಂತ ಪ್ರಕರಣದ ಪ್ರಮುಖ ಆರೋಪಿಯಾಗಿರುವ ವಾರೆನ್ ಆಂಡರಸನ್, ಭಾರತದ ವಿಚಾರಣೆಗೆ ಹೆದರಿ ಅಮೆರಿಕಕ್ಕೆ ಪರಾರಿಯಾಗಿದ್ದರು. ಭೋಪಾಲ್ ಮತ್ತು ಮಧ್ಯಪ್ರದೇಶದ ಕೆಲ ಸ್ಥಳೀಯ ರಾಜಕೀಯ ಮುಖಂಡರೇ ಆಂಡರ್ಸನ್ರನ್ನು ಕಾರಿನಲ್ಲಿ ಕೂರಿಸಿಕೊಂಡು ವಿಮಾನನಿಲ್ದಾಣಕ್ಕೆ ಕರೆದೊಯ್ದಿದ್ದರು ಎಂದು ಹೇಳಲಾಗುತ್ತಿತ್ತು.
1983 ಡಿಸೆಂಬರ್ 2ರ ರಾತ್ರಿ ಭೋಪಾಲ್ನ ಯೂನಿಯನ್ ಕಾರ್ಬೈಡ್ ರಾಸಾಯನಿಕ ಕಾರ್ಖಾನೆಯಲ್ಲಿ ವಿಷಾನಿಲ ಸೋರಿಕೆಯಾಗಿ ಕಾರ್ಮಿಕರು ಸೇರಿದಂತೆ ಸುಮಾರು 3,787 ಮಂದಿ ಅಮಾನುಷವಾಗಿ ಸಾವಿಗೀಡಾಗಿದ್ದರು. ಡಿಸೆಂಬರ್ 2 ರಾತ್ರಿ ನಿದ್ದೆಗೆ ಜಾರಿದ್ದ ಭೋಪಾಲ್ ಜನರು ಬೆಳಗಾಗುವುದರೊಳಗೇ ಶಾಶ್ವತ ನಿದ್ದೆಗೆ ಜಾರಿದ್ದರು. ಕಾರ್ಖಾನೆಯಿಂದ ಸೋರಿಕೆಯಾದ ವಿಷಾನಿಲ ಸುಮಾರು ಕಿಲೋ ಮೀಟರ್ ವರೆಗೆ ಪಸರಿಸಿ ಭೋಪಾಲ್ ಮತ್ತು ಮಧ್ಯ ಪ್ರದೇಶದ ಸುಮಾರು 3, 787 ಜನರ ಸಾವಿಗೆ ಕಾರಣವಾಗಿತ್ತು. ಅಲ್ಲದೆ ಸುಮಾರು 5 ಲಕ್ಷ ಮಂದಿಯ ಮೇಲೆ ವಿಷಾನಿಲ ದುಷ್ಪರಿಣಾಮ ಬೀರಿತ್ತು. 38, 478 ಮಂದಿ ಗಾಯಾಳುಗಳಾಗಿ ಆಸ್ಪತ್ರೆಗೆ ದಾಖಲಾಗಿದ್ದರು.
ಕಾರ್ಖಾನೆಯಲ್ಲಿ ವಿಷಾನಿಲ ಸೋರಿಕೆಯಾಗುತ್ತಿರುವ ಬಗ್ಗೆ ಕಾರ್ಮಿಕರು ಹಲವು ಬಾರಿ ಆಂಡರ್ಸನ್ ಗಮನಕ್ಕೆ ತಂದಿದ್ದರಾದರೂ, ಅಂಡರ್ಸನ್ ಮಾತ್ರ ಆ ಬಗ್ಗೆ ದಿವ್ಯ ನಿರ್ಲಕ್ಷ್ಯವಹಿಸಿದ್ದರು. ಕೊನೆಗೆ ಡಿಸೆಂಬರ್ 3ರ ರಾತ್ರಿ ಸೋರಿಕೆ ಭಾರಿ ಪ್ರಮಾಣದಲ್ಲಿ ಹೆಚ್ಚಾಗಿ ಸಾವಿರಾರು ಮಂದಿ ಸಾವಿಗೀಡಾಗುವಂತಾಗಿತ್ತು. ಕೇವಲ 2 ವಾರಗಳ ಅವಧಿಯಲ್ಲಿಯೇ ಸಾವಿನ ಸಂಖ್ಯೆ ಗಣನೀಯ ಪ್ರಮಾಣಕ್ಕೆ ಏರಿಕೆಯಾಗಿತ್ತು. ಮೂಲಗಳ ಪ್ರಕಾರ ಭೋಪಾಲ್ ಮತ್ತು ಮಧ್ಯ ಪ್ರದೇಶ ರಾಜ್ಯಗಳಲ್ಲಿ ಸುಮಾರು 8 ಸಾವಿರ ಮಂದಿ ವಿಷಾನಿಲ ಸೋರಿಕೆಯಿಂದಾಗಿ ಸಾವನ್ನಪ್ಪಿದ್ದಾರೆ ಎಂದು ತಿಳಿದುಬಂದಿತ್ತು. ಆದರೆ ಈ ಲೆಕ್ಕವನ್ನು ಮುಚ್ಚಿಟ್ಟ ಸರ್ಕಾರ ಸಾವಿನ ನಿಖರ ಸಂಖ್ಯೆಯನ್ನು ಬಹಿರಂಗಗೊಳಿಸಲೇ ಇಲ್ಲ. ಇಂದಿಗೂ ಕೂಡ ವಿಷಾನಿಲದಿಂದ ದುಷ್ಪರಿಣಾಮಕ್ಕೀಡಾದ ರಾಜ್ಯಗಳಲ್ಲಿ ಸುಮಾರು 3,900 ಮಂದಿ ಅಂಗವೈಕಲ್ಯಕ್ಕೆ ಗುರಿಯಾಗಿದ್ದಾರೆ.
ಅಂದು ನಡೆದ ದುರ್ಘಟನೆಯಿಂದಾಗಿ ರೊಚ್ಚಿಗೆದ್ದಿದ್ದ ಭೋಪಾಲ್ ಮತ್ತು ಮಧ್ಯ ಪ್ರದೇಶದ ಜನತೆ ಯೂನಿಯನ್ ಕಾರ್ಬೈಡ್ ಸಂಸ್ಥೆಯ ವಿರುದ್ಧ ತೀವ್ರ ಪ್ರತಿಭಟನೆಗೆ ಇಳಿದಿದ್ದರು. ಈ ಬಗ್ಗೆ ಮೊದಲೇ ಮಾಹಿತಿ ಪಡೆದಿದ್ದ ಸರ್ಕಾರ ಡಿಸೆಂಬರ್ 7ರಂದು ವಾರೆನ್ ಆಂಡರ್ಸನ್ ಅವರನ್ನು ಬಂಧಿಸಿತ್ತು. ಸರ್ಕಾರ ಅವರನ್ನು ರಕ್ಷಿಸಲೆಂದೇ ಅವರನ್ನು ಬಂಧಿಸಿತ್ತು ಎಂಬ ವಾದ ಕೂಡ ಕೇಳಿಬಂದಿತ್ತು.
ಆಂಡರ್ಸನ್ ವಿರುದ್ಧ ದೇಶಾದ್ಯಂತ ತೀವ್ರ ಪ್ರತಿಭಟನೆಗಳು ನಡೆಯತೊಡಗಿದವು. ಅಲ್ಲದೆ ಆತನನ್ನು ಕಠಿಣ ಶಿಕ್ಷೆಗೆ ಒಳಪಡಿಸಬೇಕು ಎಂದು ಕೆಲ ಸಂಘಟನೆಗಳು ಕೇಂದ್ರ ಸರ್ಕಾರದ ಮೇಲೆ ಒತ್ತಡ ಹೇರತೊಡಗಿದವು. ಆದರೆ ಇದಾವುದರ ಪರಿವೇ ಇಲ್ಲದ ಆಂಡರ್ಸನ್ ತನ್ನ ರಾಜಕೀಯ ಪ್ರಭಾವವನ್ನು ಬಳಿಸಿಕೊಂಡು ಅದಾಗಲೇ ಅಮೆರಿಕಕ್ಕೆ ಹಾರಿಹೋಗಿದ್ದನು.
ಹೋಗುವ ಮುನ್ನ ಆತ ತನ್ನ ಭಾರತೀಯ ಆಪ್ತರೊಂದಿಗೆ ಕೆಲ ಮಾತುಗಳನ್ನು ಹಂಚಿಕೊಂಡಿದ್ದು, "ಬಂಧನವೂ ಇಲ್ಲ, ಜಾಮೀನು ಇಲ್ಲ. ನಾನು ನನ್ನ ಸ್ವದೇಶಕ್ಕೆ ವಾಪಸ್ ತೆರಳಲು ಸ್ವತಂತ್ರನಾಗಿದ್ದೇನೆ. ನಮಗೆಂದೇ ಅಮೆರಿಕದಲ್ಲಿ ಒಂದು ಕಾನೂನಿದೆ... ಭಾರತ ಬೈ ಬೈ.....ವಂದನೆಗಳು...." ಎಂದು ಹೇಳಿಕೊಂಡಿದ್ದನು. (House arrest or no arrest or bail, no bail, I am free to go home...There is a law of the United States...India, bye, bye, Thank you,)ಅಂಡರ್ಸನ್ ಭಾರತ ಬಿಡುವ ಮುನ್ನ ಮಧ್ಯಪ್ರದೇಶ ಮುಖ್ಯಮಂತ್ರಿ ಅರ್ಜುನ್ಸಿಂಗ್ರೊಂದಿಗೆ ಮಾತನಾಡುತ್ತ ನಿಂತಿದ್ದ ದೃಶ್ಯಗಳು ಮಾಧ್ಯಮಗಳಲ್ಲಿ ಸೆರೆಯಾಗಿದ್ದವು.
ಭೋಪಾಲ್ ಅನಿಲ ದುರಂತ ಪ್ರಕರಣ ಸಂಬಂಧ ಸುದೀರ್ಘ ವಿಚಾರಣೆ ನಡೆಸಿದ್ದ ನ್ಯಾಯಾಲಯ, 2010ರ ಜೂನ್ ತಿಂಗಳಿನಲ್ಲಿ ಯೂನಿಯನ್ ಕಾರ್ಬೈಡ್ ಅಧ್ಯಕ್ಷ ವಾರೆನ್ ಆಂಡರ್ ಸನ್ ಸೇರಿದಂತೆ ಸಂಸ್ಥೆಯ 8ಮಂದಿ ಮಾಜಿ ಕಾರ್ಮಿಕರಿಗೆ 2 ವರ್ಷ ಕಠಿಣ ಶಿಕ್ಷೆ ಮತ್ತು 2 ಸಾವಿರ ಅಮೆರಿಕನ್ ಡಾಲರ್ ಮೊತ್ತವನ್ನು ದಂಡವಾಗಿ ವಿಧಿಸಿತು. ತೀರ್ಪು ಬರುವ ವೇಳೆಗೆ ಪ್ರಕರಣದ ಆರೋಪಿಗಳಾಗಿದ್ದ 9 ಕಾರ್ಮಿಕರ ಪೈಕಿ 8 ಮಂದಿ ಅದಾಗಲೇ ಸಾವಿಗೀಡಾಗಿದ್ದರು.