ದೇಶ

ಅವಿತುಕೊಂಡಿದ್ದ 'ರಾಧೆ ಮಾ' ಮಹಾರಾಷ್ಟ್ರದ ಗುರುದ್ವಾರದಲ್ಲಿ ಪ್ರತ್ಯಕ್ಷ

Mainashree

ಮುಂಬೈ: ಬಂಧನದ ಭೀತಿಯಿಂದ ಅವಿತುಕೊಂಡಿದ್ದ ಸ್ವಯಂ ಘೋಷಿತ ದೇವ ಮಹಿಳೆ ರಾಧೆ ಮಾ ಶನಿವಾರ ಬೆಳಿಗ್ಗೆ ಮಹಾರಾಷ್ಟ್ರದ ನಂದೇಡ್ ಗುರುದ್ವಾರದಲ್ಲಿ ಕಾಣಿಸಿಕೊಂಡಿದ್ದಾರೆ.

ವರದಕ್ಷಿಣೆ ಕಿರುಕುಳ ಆರೋಪ ಎದುರಿಸುತ್ತಿರುವ ರಾಧೆ ಮಾ ವಿರುದ್ಧ ಎಫ್ಐಆರ್ ದಾಖಲಾಗಿತ್ತು. ಈ ಹಿನ್ನೆಲೆಯಲ್ಲಿ ಪೊಲೀಸರು ಯಾವಾಗ ಬೇಕಾದರು ಬಂಧಿಸಬಹುದು ಎಂಬ ಭೀತಿಯಿಂದ ಅವಿತುಕೊಂಡಿದ್ದರು ಎಂದು ಹೇಳಲಾಗಿತ್ತು. ಆದರೆ ಇಂದು ಬೆಳಿಗ್ಗೆ ದಿಢೀರ್ ಎಂದು ಗುರುದ್ವಾರದಲ್ಲಿ ಪ್ರತ್ಯಕ್ಷವಾದ ರಾಧೆ ಮಾ ಪ್ರಾರ್ಥನೆ ಸಲ್ಲಿಸಿದ್ದಾರೆ. ಆದರೆ ವರದಿಗಳ ಪ್ರಕಾರ ಬಂಧನದಿಂದ ತಪ್ಪಿಸಿಕೊಳ್ಳಲು ರಾಧೆ ಮಾ ಗುರುದ್ವಾರಕ್ಕೆ ಭೇಟಿ ನೀಡಿದ್ದಾರೆ ಎಂದು ತಿಳಿದು ಬಂದಿದೆ.
ಬಂಧನದ ಭಯದಲ್ಲಿರುವ ರಾಧೆ ಮಾ ಔರಂಗಾಬಾದ್ ಖಾಸಗಿ ಹೋಟೆಲ್ ವೊಂದರಲ್ಲಿ ಅಡಗಿ ಕುಳಿತಿದ್ದಾರೆಂದು ಖಾಸಗಿ ಮಾಧ್ಯಮವೊಂದು ವರದಿ ಮಾಡಿದ್ದವು.
ಸ್ವಯಂ ಘೋಷಿತ ದೇವ ಮಹಿಳೆ ರಾಧೆ ಮಾ ಅವರ ಸೂಚನೆ ಮೇರೆಗೆ ನನ್ನ ಗಂಡನ ಮನೆಯವರು ನನಗೆ ಮಾನಸಿಕವಾಗಿ ಹಿಂಸೆ ನೀಡಿದ್ದರಲ್ಲದೇ, ದೈಹಿಕವಾಗಿ ಹಲ್ಲೆ ನಡೆಸಿದ್ದಾರೆ. ನನ್ನ ಇದೀಗ ವರದಕ್ಷಿಣೆ ಕಿರುಕುಳ ನೀಡುತ್ತಿದ್ದು, ನನ್ನ ಪೋಷಕರಿಗೆ ಜೀವ ಬೆದರಿಕೆ ಹಾಕಿದ್ದಾರೆ. ಇದರಲ್ಲಿ ರಾಧೆ ಮಾ ಅವರ ಕೈ ವಾಡಿದೆ ಎಂದು ಮಹಿಳೆಯೊಬ್ಬರು ಮುಂಬೇ ನ ಬೊರಿವಲಿ ಕ್ಷೇತ್ರದ ಠಾಣೆಯಲ್ಲಿ ರಾಧೆ ಮಾ ವಿರುದ್ಧ ಬುಧವಾರ ಪ್ರಕರಣ ದಾಖಲಿಸಿದ್ದರು.

ನಿನ್ನೆಯಷ್ಟೇ ಮಿನಿಸ್ಕರ್ಟ್ ಧರಿಸಿರುವ ರಾಧೆ ಮಾ ಅವರ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದ್ದವಲ್ಲದೇ, ಫೋಟೋ ಕುರಿತಂತೆ ಹಲವು ವಿರೋಧಗಳು ವ್ಯಕ್ತವಾಗಿದ್ದವು. ಇದೀಗ ರಾಧೆ ಮಾ ವಿರುದ್ಧ ಹಲವು ಆರೋಪಗಳು ಕೇಳಿಬರುತ್ತಿರುವ ಹಿನ್ನೆಲೆಯಲ್ಲಿ ಮುಂಬೈ ಪೊಲೀಸರು ರಾಧೆ ಮಾಗಾಗಿ ಹುಡುಕಾಟ ನಡೆಸಿದ್ದು, ಬಂಧನದ ಭಯದಿಂದಾಗಿ ರಾಧೆ ಮಾ ಕಣ್ಮರೆಯಾಗಿದ್ದಾರೆಂದು ಹೇಳಲಾಗುತ್ತಿದೆ.

SCROLL FOR NEXT