ದೇಶ

ರಾಜಕೀಯ ಮಾತನಾಡುವ ದಿನವಲ್ಲ ಇದು: ರಾಹುಲ್ ಗಾಂಧಿ

ನವದೆಹಲಿ: ರಾಜಕೀಯವಾಗಿ ಮಾತನಾಡುವ ದಿನವಲ್ಲ ಇದು, ಈ ಬಗ್ಗೆ ನಾಳೆ ಚರ್ಚೆ ನಡೆಸೋಣ ಎಂದು ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಅವರು ಶನಿವಾರ ಹೇಳಿದ್ದಾರೆ.

ಕಾಂಗ್ರೆಸ್ ಕಚೇರಿಯಲ್ಲಿ ಸ್ವಾತಂತ್ರ್ಯ ದಿನಾಚರಣೆಯನ್ನು ಆಚರಿಸಿದ ನಂತರ ಮಾಧ್ಯಮಗಳೊಂದಿಗೆ ಮೋದಿ ಭಾಷಣ ಕುರಿತಂತೆ ಪ್ರತಿಕ್ರಿಯೆ ನೀಡಿರುವ ಅವರು, ಇದು ರಾಜಕೀಯ ಮಾತನಾಡುವ ದಿನವಲ್ಲ. ರಾಜಕೀಯವನ್ನು ನಾಳೆ ಮಾತನಾಡೋಣ. ಇಂದ ದೇಶದಲ್ಲಿ ಪ್ರತಿಯೊಬ್ಬರೂ ಭ್ರಷ್ಟಾಚಾರದ ಬಗ್ಗೆ ಮಾತನಾಡುತ್ತಲೇ ಇರುತ್ತಾರೆ. ಮೋದಿ ಭಾಷಣವೊಂದು ಅನಾರೋಗ್ಯ ಪೀಡಿತ ವ್ಯಕ್ತಿಯೊಬ್ಬ ಮತ್ತೊಬ್ಬ ವ್ಯಕ್ತಿಗೆ ಸಲಹೆ ನೀಡಿದಂತಿದೆ. ಭ್ರಷ್ಟಚಾರಿ ವ್ಯಕ್ತಿಯೊಬ್ಬ ಭ್ರಷ್ಟಾಚಾರ ನಿರ್ಮೂಲನೆ ಬಗ್ಗೆ ಸಲಹೆ ನೀಡುತ್ತಿದ್ದಾರೆ ಎಂದು ಹೇಳಿದ್ದಾರೆ.

69ನೇ ಸ್ವಾತಂತ್ರ್ಯದಿನಾಚರಣೆಯ ಅಂಗವಾಗಿ ಇಂದು ರಾಜಧಾನಿ ದೆಹಲಿಯ ಕೆಂಪುಕೋಟೆಯಲ್ಲಿ ಧ್ವಜಾರೋಹಣ ನಡೆಸಿ ದೇಶವನ್ನುದ್ದೇಶಿಸಿ ಮಾತನಾಡಿದ್ದ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ನಾವು ಜಾತಿಯತೆ ಮತ್ತು ಕೋಮುವಾದವನ್ನು ಹಿಮ್ಮೆಟ್ಟಿಸಬೇಕಾಗಿದೆ. ಜಾತಿವಾದ, ಕೋಮುವಾದಕ್ಕೆ ಭಾರತದಲ್ಲಿ ಎಂದಿಗೂ ಸ್ಥಳವಿಲ್ಲ. ದೇಶದಲ್ಲಿ ಒಂದೇ ಜನಾದೇಶವಿದೆ. ಎಲ್ಲ ವ್ಯವಸ್ಥೆ ಯೋಜನೆ ಬಡವರಿಗೆ ಉಪಯೋಗವಾಗಬೇಕು.

ಭಾರತದ ಜನಮನದಲ್ಲಿ ಸರಳತೆ ತುಂಬಿದೆ. ಬಡವರನ್ನು ಗಮನದಲ್ಲಿಟ್ಟು ಯೋಜನೆ ರೂಪಿಸಲಾಗುತ್ತಿದೆ. ದೇಶದ ಮೂಲೆಮೂಲೆಗೂ ಸರ್ಕಾರದ ಸೌಲಭ್ಯ ಸಿಗುತ್ತಿದೆ. ಕಪ್ಪುಹಣ ವಾಪಸ್ ತರಲು ಈಗಾಗಲೇ ಹಲವು ದೇಶಗಳೊಂದಿಗೆ ಚರ್ಚೆನಡೆಸಿದ್ದೇವೆ. ಕಪ್ಪು ಹಣ ತಡೆಗೆ ಕಠಿಣ ಕಾನೂನುಗಳನ್ನು ರೂಪಿಸಿದ್ದೇವೆ. ಆದರೆ, ನಾವು ರೂಪಿಸಿದ ಕಾನೂನಿಗೆ ಹಲವರು ವಿರೋಧ ವ್ಯಕ್ತಪಡಿಸಿದರು ಎಂದು ಹೇಳಿದ್ದರು.

SCROLL FOR NEXT